ಸಿಎಂ ತವರು ಕ್ಷೇತ್ರದಲ್ಲಿ 8 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ!
ಶಿವಮೊಗ್ಗ, ಅಕ್ಟೋಬರ್ 29 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದ ಸಾಗರ ನಗರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. 8 ವರ್ಷಗಳ ಬಳಿಕ ನಗರಸಭೆಯಲ್ಲಿ ಬಿಜೆಪಿ ಆಡಳಿತ ಆರಂಭವಾಗಿದೆ.
ಗುರುವಾರ ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ವಾರ್ಡ್ ನಂಬರ್ 20ರ ಮಧುರಾ ಶಿವಾನಂದ್ ಹಾಗೂ ಉಪಾಧ್ಯಕ್ಷರಾಗಿ ವಾರ್ಡ್ ನಂಬರ್ 16ರ ವಿ. ಮಹೇಶ್ ಆಯ್ಕೆಯಾದರು. ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮಧು ಮಾಲತಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಮಧುರಾ ಶಿವಾನಂದ್ 21 ಮತಗಳನ್ನು ಪಡೆದರು. ಮಧು ಮಾಲತಿ ಅವರಿಗೆ 9 ಮತಗಳು ಬಂದವು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಾಹೀನ ಬಾನು ಅವರು 9 ಮತ ಪಡೆದರು.

ಸಾಗರ ನಗರಸಭೆಯ ಒಟ್ಟು ಸದಸ್ಯ ಬಲ 31. ಇವುಗಳಲ್ಲಿ ಬಿಜೆಪಿ 16 ಸ್ಥಾನದಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ನ 9 ಮತ್ತು ಜೆಡಿಎಸ್ನ ಒಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಐವರು ಪಕ್ಷೇತರ ಸದಸ್ಯರು ಸಹ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಮಧುರಾ ಶಿವಾನಂದ್ ಹಾಗೂ ಉಪಾಧ್ಯಕ್ಷ ವಿ. ಮಹೇಶ್ ತಲಾ 21 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಜೆಡಿಎಸ್ನ ಸದಸ್ಯರು ಮತ ಚಲಾವಣೆ ಮಾಡದೇ ತಟಸ್ಥರಾಗಿ ಉಳಿದರು.
ಶಾಸಕರ ಅಭಿನಂದನೆ : ಸಾಗರ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಒಮ್ಮತದಿಂದ ಮತ ಚಲಾಯಿಸಿದ ಎಲ್ಲಾ ಸದಸ್ಯರಿಗೆ ಶಾಸಕ ಹರತಾಳು ಹಾಲಪ್ಪ ಧನ್ಯವಾದ ಅರ್ಪಿಸಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications