1 ತಿಂಗಳ ಸಂಬಳ ಸಿಎಂ ಪರಿಹಾರ ನಿಧಿಗೆ ಕೊಟ್ಟ ಬಿಜೆಪಿ ಶಾಸಕರು
ಉಡುಪಿ, ಆಗಸ್ಟ್.21: ಕೊಡಗು ಜಿಲ್ಲೆಯಲ್ಲಿ ತೀವ್ರ ನೆರೆಹಾನಿಗೆ ಸಿಲುಕಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಬಿಜೆಪಿಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಮತ್ತು ಲೋಕಸಭಾ ಸದಸ್ಯರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಪಕ್ಷದ ನಾಯಕರು ನೆರವಿನ ಹಸ್ತ ಚಾಚಲು ಮುಂದಾಗಿದ್ದಾರೆ.
"ಕೊಡಗು ಜಿಲ್ಲೆಯಲ್ಲಿ ಊಹೆಗೂ ನಿಲುಕದಷ್ಟು ಹಾನಿಯುಂಟಾಗಿದ್ದು, ಜಿಲ್ಲೆಯ ಜನರು ತಮ್ಮ ಸಹಜ ಜೀವನಕ್ಕೆ ಮರಳಲು ಹೆಣಗಾಡುತ್ತಿದ್ದಾರೆ. ಮನೆ ಮತ್ತು ಆಸ್ತಿ ಎಲ್ಲವನ್ನೂ ಕಳೆದುಕೊಂಡಿರುವ ಜನರ ನೆರವಿಗೆ ಧಾವಿಸುವುದು ನಮ್ಮ ಪ್ರಥಮ ಕರ್ತವ್ಯವಾಗಿದೆ.

ಸದ್ಯಕ್ಕೆ ನೆರವು ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಮರೋಪಾದಿಯಲ್ಲಿ ಶಾಶ್ವತ ನೆಲೆಯನ್ನು ಒದಗಿಸಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಚುರುಕಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು" ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಪುನರ್ವಸತಿ ಕೇಂದ್ರಗಳಲ್ಲಿರುವ ಸಂತ್ರಸ್ತರನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. ಸರ್ವಸ್ವವನ್ನೂ ಕಳೆದುಕೊಂಡಿರುವ ಜನರಿಗೆ ಶಾಶ್ವತ ಪುನರ್ವಸತಿ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರದಿಂದಲೂ ನೆರವು ಒದಗಿಸಲು ಯತ್ನಿಸಲಾಗುವುದು ಎಂದು ಬಿಎಸ್ ವೈ ತಿಳಿಸಿದ್ದಾರೆ
ರಾಜ್ಯ ಸರ್ಕಾರವೂ ತಕ್ಷಣವೇ ಈ ಸಂಬಂಧ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಶಾಸಕರು, ಸಂಸದರು ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಕೂಡ ಪರಿಹಾರ ನಿಧಿಗೆ ಉದಾರವಾಗಿ ಧನ ಸಹಾಯ ಮಾಡಬೇಕು ಎಂದು ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.












Click it and Unblock the Notifications