ಶಿವಮೊಗ್ಗದಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ರ್ಯಾಲಿ ಮಾಡಿದ ಬಿಜೆಪಿ ನಾಯಕರು
ಶಿವಮೊಗ್ಗ, ಆಗಸ್ಟ್, 08: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ನೂರಾರು ಬೈಕ್ಗಳಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಲಾಯಿತು. ಬಿಜೆಪಿ ನಗರ ಘಟಕದ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಆದರೆ ಬಿಜೆಪಿ ನಾಯಕರು ಹೆಲ್ಮೆಟ್ ಇಲ್ಲದೇ ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ರ್ಯಾಲಿ ಮಾಡಿದರು. ಪೊಲೀಸರು ಮಾತ್ರ ಇದನ್ನು ಕಂಡು ಕಾಣದಂತೆ ಏನು ಮಾತನಾಡದೇ ಸುಮ್ಮನೆ ನಿಂತಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.
ಶಿವಮೊಗ್ಗ ಎಂಆರ್ಎಸ್ ಸರ್ಕಲ್ನಿಂದ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಮುಖಾಂತರ ಬಿಜೆಪಿ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿದರು. ಮತ್ತು ದೇಶದ ಸ್ವಾತಂತ್ರ್ಯ ಹೋರಾಟಗಾರರ ಪರ ಘೋಷಣೆ ಕೂಗಿದರು. ಇದೆ ವೇಳೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, "ಪ್ರಪಂಚದಲ್ಲಿ ಭಾರತದ ತ್ರಿವರ್ಣ ಧ್ವಜ ಯಾವ ರೀತಿ ಹಾರಬೇಕು ಎಂದು ನಾವೆಲ್ಲ ಬಯಸಿದ್ದೆವೋ, ಅದೇ ರೀತಿಯ ತ್ರಿವರ್ಣ ಧ್ವಜದ ಸಮೂಹವನ್ನು ಇಲ್ಲಿ ಕಾಣುತ್ತಿದ್ದೇವೆ. ನಮ್ಮ ದೇಶವನ್ನು ಕೆಲವರು ಹಗುರವಾಗಿ ಕಾಣುತ್ತಿದ್ದರು. ಇದೊಂದು ದೇಶವೆ ಅಲ್ಲ ಎಂದು ಹೇಳುತ್ತಿದ್ದರು. ಅಂತಹವರು ಇಲ್ಲಿ ಬಂದು ನೋಡಬೇಕಿದೆ," ಎಂದರು.
ನಂತರ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, "ವ್ಯಕ್ತಿಗೆ 75 ವರ್ಷವಾದಾಗ ವಯಸ್ಸಾಯಿತು ಎಂದು ಹೇಳುತ್ತೇವೆ. ಆದರೆ ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಆಗಿದೆ. ಅಂದರೆ ರಾಷ್ಟ್ರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಂಕಲ್ಪ ಮಾಡುತ್ತೇವೆ. ಈ ರ್ಯಾಲಿ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಅರ್ಪಣೆ ಮಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದರು.
ಬೈಕ್ ಚಲಾಯಿಸಿದ ಈಶ್ವರಪ್ಪ:
ಎಂಆರ್ಎಸ್ ಸರ್ಕಲ್ನಿಂದ ಆರಂಭವಾದ ಬೈಕ್ ಜಾಥಾದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬೈಕ್ ಚಲಾಯಿಸಿ ಗಮನ ಸೆಳೆದರು. ನಂತರ ಈಶ್ವರಪ್ಪ ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಬೈಕ್ ಏರಿ ಗಮನ ಸೆಳೆದರು.
ಹೆಲ್ಮೆಟ್ ಧರಿಸದ ನಾಯಕರು:
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಹಾಕದೇ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ. ಸಾಮಾನ್ಯರಿಗೆ ದಂಡ ಹಾಕುವ ಪೊಲೀಸರು ಇದನ್ನು ನೋಡಿಯೂ ನೋಡದಂತೆ ಇದ್ದು, ಮೌನಕ್ಕೆ ಶರಣಾಗಿದ್ದರು.
Recommended Video