ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ; ದೂರು ದಾಖಲು, ಪತ್ರದಲ್ಲೇನಿದೆ?
ಶಿವಮೊಗ್ಗ, ಆಗಸ್ಟ್ 24: 'ಮುಸ್ಲಿಂ ಗೂಂಡ' ಹೇಳಿಕೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಾಲಗೆ ಕಟ್ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಅವರ ಮನೆಗೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ. ನಾನು ಎಲ್ಲಾ ಮುಸ್ಲಿಮರನ್ನು ಗೂಂಡಾಗಳು ಎಂದು ಹೇಳುವುದಿಲ್ಲ. ಆದರೆ ಯಾರೋ ಕೆಲವರು ದುಷ್ಕರ್ಮಿಗಳು ಮಾಡುತ್ತಿರುವ ಕೃತ್ಯಗಳನ್ನು ಆ ಸಮಾಜದ ಮುಖಂಡರುಗಳು ಖಂಡಿಸಬೇಕು' ಎಂದು ಹೇಳಿದ್ದರು. ಇದೀಗ ಮುಸ್ಲಿಂ ಗೂಂಡಾ ಎಂದು ಪದ ಬಳಸಿದ್ದಕ್ಕೆ ಅನಾಮಧೇಯ ಬೆದರಿಕೆ ಪತ್ರದ ಮೂಲಕ ಈಶ್ವರಪ್ಪರಿಗೆ ಬೆದರಿಕೆಯೊಡ್ಡಲಾಗಿದೆ.
ಸಂತೋಷ್ ಆತ್ಮಹತ್ಯೆ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಮತ್ತೆ ಸಂಕಷ್ಟ
"ನಮ್ಮ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ರನ್ನು ಮುಸ್ಲಿಂ ಗೂಂಡಾ ಎಂದು ಹೇಳಿದ್ದೀಯಲ್ಲ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮೋಟೆಬೆನ್ನೂರಿನ ಕಾಲೇಜಿಗೆ ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು ನಿನಗೆ. ಆದರೆ ನಿನಗೆ ಮುಸ್ಲಿಮರು ಬೇಡ. ನಾಚಿಕೆ ಆಗಬೇಕು. ನಾಲಗೆ ಕಟ್ ಮಾಡುತ್ತೇವೆ ಹುಷಾರ್. ಬಾಲ ಬಿಚ್ಚಬೇಡ" ಎಂದು ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ.
ಎಸ್ಪಿಗೆ ದೂರು
ಇನ್ನು, ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ಆಪ್ತ ಸಹಾಯಕರು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. " ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಜಯಲಕ್ಷ್ಮಿ ನಿವಾಸಕ್ಕೆ ಅನಾಮದೇಯ ಬೆದರಿಕೆ ಪತ್ರ ಬಂದಿದೆ. ಈ ಕುರಿತು ಪರಿಶೀಲಿಸಿ ಮತ್ತು ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ವಹಿಸುವಂತೆ" ದೂರು ನೀಡಲಾಗಿದೆ.
ಹೇಡಿಗಳ ಕೃತ್ಯ
ಅನಾಮದೇಯ ಬೆದರಿಕೆ ಪತ್ರ ಬಂದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರೋ ಹೇಡಿಗಳು ಅನಾಮದೇಯ ಬೆದರಿಕೆ ಪತ್ರ ಬರೆದಿದ್ದಾರೆ. ನಾನು ಟಿಪ್ಪು ಸುಲ್ತಾನ್ಗೆ ಮುಸ್ಲಿಂ ಗೂಂಡಾ ಎಂದು ಕರೆದಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ. ನನ್ನ ನಾಲಗೆಯನ್ನು ಕಟ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂಥ ಗೊಡ್ಡು ಬೆದರಿಕೆ. ಈ ರೀತಿಯ ಗೊಡ್ಡು ಬೆದರಿಕೆಗೆ, ಹೇಡಿಗಳು ಬರೆಯುವ ಪತ್ರಗಳಿಗೆ ನಾನು ಹೆದರುವುದಿಲ್ಲ. ಶಾಸಕನಾಗಿರುವ ಹಿನ್ನೆಲೆ ಆ ಹೇಡಿಯ ಕುರಿತು ತನಿಖೆಯಾಗಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ದೂರು ನೀಡಿದ್ದೇನೆ" ಎಂದು ತಿಳಿಸಿದರು.
ಕೊಲೆಗಡುಕರನ್ನು ಗೂಂಡಾ ಎಂದಿದ್ದೇನೆ
ಕೊಲೆ, ದರೋಡೆ ಮಾಡೋ ಮುಸಲ್ಮಾನರಿಗೆ ಗೂಂಡಾ ಎಂದು ಕರೆಯುತ್ತೇನೆ, ಎಲ್ಲಾ ಮುಸಲ್ಮಾರಿಗೆ ನಾನು ಹಾಗೆ ಕರೆದಿಲ್ಲ. ಹಿಂದೂ ಹರ್ಷ, ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರು ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದು ಹೋಗಿರುವ ಹೇಡಿತನದಿಂದ. ಎದುರು ಬಂದರೆ ಬೇರೆ ತರಹ, ಈ ಪತ್ರವೂ ಹೇಡಿತನದ್ದು, ನಾನು ಹೆದರೋದಿಲ್ಲ. ಯಾವ ಮುಸ್ಲಿಂ ಗೂಂಡಾ ಪ್ರವೃತ್ತಿ ಮಾಡುತ್ತಾರೋ ಅಂಥವರಿಗೆ ಗೂಂಡಾ ಅಂತ ಎನ್ನದೇ ಒಳ್ಳೆಯವರು ಎನ್ನಬೇಕಾ? ಎಂದು ಈಶ್ವರಪ್ಪ ಕಿಡಿ ಕಾರಿದರು.
ಹಿಂದೆಯೂ ಬೆದರಿಕೆ ಬಂದಿತ್ತು
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಬೆದರಿಕೆ ಹೊಸತೇನಲ್ಲ. ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಮೊಬೈಲ್ ಸಂಖ್ಯೆಗೆ ವಿದೇಶದಿಂದ ಕರೆ ಮಾಡಿ ಬೆದರಿಕೆ ಒಡ್ಡಲಾಗಿತ್ತು. 2019ರಲ್ಲಿ ಅನಾಮಧೇಯ ವ್ಯಕ್ತಿ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದ. ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದ ಆತ 'ಬಿಜೆಪಿ ಸಂಸದ ಸ್ಥಾನಗಳಿಗೆ ಮುಸ್ಲಿಮರಿಗೇಕೆ ಟಿಕೆಟ್ ಕೊಟ್ಟಿಲ್ಲ? ನಿಮಗೆ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು' ಎಂದು ಜೀವ ಬೆದರಿಕೆ ಹಾಕಿದ್ದಎಂದು ಸ್ವತಃ ಈಶ್ವರಪ್ಪ ಮಾಧ್ಯಮಗಳ ಮುಂದೆ ಹೇಳಿದ್ದರು.