ತರಕಾರಿ ವಾಹನದಲ್ಲಿ ಗೋಮಾಂಸ ಸಾಗಣೆ; ಇಬ್ಬರನ್ನು ಬಂಧಿಸಿದ ಆಗುಂಬೆ ಘಾಟ್ ಪೊಲೀಸರು
ಶಿವಮೊಗ್ಗ, ಆಗಸ್ಟ್ 12: ತರಕಾರಿ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣ ಆಗುಂಬೆ ಘಾಟ್ ಗೇಟ್ನಲ್ಲಿ ಬೆಳಕಿಗೆ ಬಂದಿದ್ದು, ಗೋಮಾಂಸ ಸಾಗಣೆ ಮಾಡುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಗುಂಬೆ ಘಾಟ್ ಗೇಟ್ನ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿ ಮತ್ತು ಎಎನ್ಎಸ್ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ವಾಹನವನ್ನು ತಡೆದಿದ್ದಾರೆ.
ಆಗುಂಬೆ ಘಾಟಿಯ ಗೇಟ್ ಬಳಿ ಗುರುವಾರ ಬೆಳಗಿನ ಜಾವ ವಾಹನವನ್ನು ತಡೆದು, ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಪೊಲೀಸರೇ ಬೆಚ್ಚಿಬೀಳುವ ರೀತಿಯಲ್ಲಿ, ಗೋಮಾಂಸವನ್ನು ಪ್ಯಾಕ್ ಮಾಡಿ ಸಾಗಣೆ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ.
ಗೋಮಾಂಸ ಸಾಗಣೆ ಹೇಗಿತ್ತು?
ಶಿವಮೊಗ್ಗದಿಂದ ಮಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಮ್ಯಾಕ್ಸಿ ಪಿಕಪ್ ವಾಹನದಲ್ಲಿ ಗೋಮಾಂಸವನ್ನು ಅಡಗಿಸಿ ಇರಿಸಲಾಗಿತ್ತು. ಲಗೇಜ್ ಇರಿಸುವ ಜಾಗದ ಮುಂಭಾಗದಲ್ಲಿ ಗೋಮಾಂಸವನ್ನು ಪ್ಯಾಕ್ ಮಾಡಿ ಇರಿಸಲಾಗಿತ್ತು. ಅದರ ಮೇಲೆ ಮತ್ತು ಹಿಂಬದಿಯವರೆಗೆ ವಿವಿಧ ತರಕಾರಿಗಳನ್ನು ಇರಿಸಲಾಗಿತ್ತು. ವಾಹನವನ್ನು ಯಾರೇ ನೋಡಿದರೂ ಅದು ತರಕಾರಿ ಸಾಗಣೆ ವಾಹನ ಎಂಬಂತೆ ಭಾಸವಾಗುವಂತಿತ್ತು.
ವಿಷಯ ಗೊತ್ತಾಗಿದ್ದು ಹೇಗೆ?
ತರಕಾರಿ ಸಾಗಣೆ ಪಿಕಪ್ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿರುವ ಕುರಿತು ಭಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿತ್ತು. ಈ ಕುರಿತು ಪೊಲೀಸರಿಗೆ ವಿಚಾರ ತಿಳಿಸಿದ್ದ ಕಾರ್ಯಕರ್ತರು, ಮ್ಯಾಕ್ಸಿ ಪಿಕಪ್ ವಾಹನ ತಡೆದು ತಪಾಸಣೆ ಮಾಡುವಂತೆ ಮನವಿ ಮಾಡಿದ್ದರು.
ಜೀವದ ಹಂಗು ತೊರೆದು ತಡೆದರು
ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆ ಪಿಕಪ್ ವಾಹನ, ಆಗುಂಬೆ ಘಾಟಿಯ ಗೇಟ್ ಬಳಿಗೆ ಬಂದಿದೆ. ಗೋಮಾಂಸ ಸಾಗಣೆ, ಗೋವುಗಳ ಕದ್ದೊಯ್ಯುವವರನ್ನು ತಡೆಯಲು ಮುಂದಾದವರ ಮೇಲೆ ಹಲವು ಬಾರಿ ದಾಳಿ ಕೂಡ ಆಗಿದೆ. ಹೀಗಿದ್ದೂ, ಆಗುಂಬೆ ಘಾಟಿಯ ಗೇಟ್ನಲ್ಲಿದ್ದ ಎಎನ್ಎಸ್ ಸಿಬ್ಬಂದಿ ಪ್ರವೀಣ್ ಮತ್ತು ಅರಣ್ಯ ತನಿಖಾ ಠಾಣೆ ಸಿಬ್ಬಂದಿ ಜಗದೀಶ್ ಜೀವದ ಹಂಗು ತೊರೆದು ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಆಗುಂಬೆ ಠಾಣೆ ಪಿಎಸ್ಐ ಶಿವಕುಮಾರ್, ಸಿಬ್ಬಂದಿಗಳಾದ ವೀರೇಂದ್ರ, ಉಮೇಶ್, ಸುದರ್ಶನ್, ಗಣೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕ್ರೇಟ್ಗಳಲ್ಲಿತ್ತು ಕೆಜಿಗಟ್ಟಲೆ ಗೋಮಾಂಸ
ತರಕಾರಿಗಳ ಚೀಲಗಳ ನಡುವೆ ಕ್ರೇಟ್ಗಳಲ್ಲಿ ಕೆಜಿಗಟ್ಟಲೆ ಗೋಮಾಂಸವನ್ನು ಅಡಗಿಸಿ ಇಡಲಾಗಿತ್ತು. ಇದನ್ನು ಪತ್ತೆ ಹಚ್ಚಿದ ಸಿಬ್ಬಂದಿಗಳು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಶದಲ್ಲಿರುವವರನ್ನು ಇರ್ಷಾದ್ ಮತ್ತು ಇಮ್ತಿಯಾಜ್ ಎಂದು ಗುರುತಿಸಲಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಇವರನ್ನು ವಶಕ್ಕೆ ಪಡೆದಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.