ಶಿವಮೊಗ್ಗ; ಬಜರಂಗದಳ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಶಿವಮೊಗ್ಗ, ಜುಲೈ 12: ಬಜರಂಗದಳ ಕಾರ್ಯಕರ್ತನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಕಾಂತರಾಜು ಎಂಬಾತನ ಮೇಲೆ ಹಲ್ಲೆಯಾಗಿದೆ. ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಸೋಮಾವಾರ ರಾತ್ರಿ ಘಟನೆ ಸಂಭವಿಸಿದ್ದು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜೀವ್ ಗಾಂಧಿ ಬಡಾವಣೆಯ ಕಾಂತರಾಜು ಮನೆ ಬಳಿಯೇ ದಾಳಿ ನಡೆದಿದೆ. ಸೋಮವಾರ ರಾತ್ರಿ 10.30ರ ಹೊತ್ತಿಗೆ ಕಾಂತರಾಜು ಊಟ ಮುಗಿಸಿ ಮನೆಯಿಂದ ಹೊರ ಬಂದ ವೇಳೆ, ಏಕಾಏಕಿ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಾದ ಕೂಡಲೇ ಕಾಂತರಾಜುನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಜೆಪಿ, ಜೆಡಿಯು ಮೈತ್ರಿಯಲ್ಲಿ ಬಿರುಕು; ಮೋದಿಗೆ ಸ್ವಾಗತವಿಲ್ಲ!
"ಊಟ ಮುಗಿಸಿ ಮೂತ್ರ ವಿಸರ್ಜನೆಗೆ ಎಂದು ಮನೆಯಿಂದ ಹೊರಗೆ ಬಂದಿದ್ದೆ. ಈ ವೇಳೆ ಮಚ್ಚಿನಿಂದ ದಾಳಿ ಮಾಡಿದರು. ಕೈಗೆ, ಬೆನ್ನಿನ ಮೇಲೆ ದಾಳಿ ಮಾಡಿದ್ದಾರೆ. ಅಷ್ಟು ಹೊತ್ತಿಗೆ ನಾನು ಮಚ್ಚು ಕಸಿದುಕೊಂಡು ಮನೆಯ ಒಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡೆ. ಬಲಗೈನ ಎರಡು ಕಡೆ ಮಚ್ಚಿನ ಏಟು ಬಿದ್ದಿದೆ" ಎಂದು ಕಾಂತರಾಜು ತಿಳಿಸಿದ್ದಾರೆ.
ಕಾಂತರಾಜು ಮೇಲೆ ಪರಿಚಿತರಿಂದಲೇ ದಾಳಿಯಾಗಿದೆ. ದಾಳಿಕೋರರು ಕೂಡ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಎಂದು ತಿಳಿದು ಬಂದಿದೆ.
" ಹಳೆ ದ್ವೇಷದ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅನುಮಾನವಿದೆ. ಹರ್ಷ ಹತ್ಯೆ ಪ್ರಕರಣದ ಸಂದರ್ಭದ ಜಗಳ, ಬಿಜೆಪಿ ವಿಚಾರವಾಗಿ ಹೆಚ್ಚು ಓಡಾಡುತ್ತಾನೆ ಎಂದು ದಾಳಿ ಮಾಡಿದ್ದಾರೆ. ಮಚ್ಚುಗಳನ್ನು ಹಿಡಿದುಕೊಂಡು ಬಂದಿದ್ದರು. ಹಿಂದುತ್ವದ ವಿಚಾರವಾಗಿ ಹೊಡೆಯಬೇಕು ಎಂದು ಇತ್ತು ಅವರಿಗೆ. ಒಂದು ವಾರದಿಂದ ಪ್ಲಾನ್ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ. ನಮ್ಮ ಹುಡುಗರಿಗೂ ಹೊಡೆಯುತ್ತೇವೆ ಎಂದು ಹೇಳಿದ್ದಾರೆ" ಎಂದು ಕಾಂತರಾಜು ತಿಳಿಸಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತ ಆಕ್ರೋಶ; ಕಾಂತರಾಜು ಮೇಲಿನ ಹಲ್ಲೆ ವಿಚಾರ ತಿಳಿಯುತ್ತಿದ್ದ ಹಾಗೆ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಹಿಂದೂ ಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕಾಂತರಾಜು ಆರೋಗ್ಯ ವಿಚಾರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು.
ಇನ್ನು, ಸಂಸದ ಬಿ. ವೈ. ರಾಘವೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ವಿಡಿಯೋ ಕಾಲ್ ಮೂಲಕ ಕಾಂತರಾಜು ಜೊತೆಗೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಹಿಂದೂ ಮುಖಂಡರ ಆಕ್ರೋಶ; ಕಾಂತರಾಜು ಮೇಲಿನ ಹಲ್ಲೆಗೆ ಹಿಂದೂ ಸಂಘಟನೆ ಕಾರ್ಯಕರ್ತರು, ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜು, "ಕಾಂತರಾಜು ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಹಿಂದೆ ಹರ್ಷ ಹತ್ಯೆ ಸಂದರ್ಭ ನಡೆದ ಘಟನೆಗಳನ್ನು ಆಧರಿಸಿ, ಪ್ರತಿಕಾರದ ಕ್ರಮಗಳನ್ನು ಗಮನಿಸಿ, ಮುಸಲ್ಮಾನ್ ಸಮಾಜದ ಕೆಲವು ಕಿಡಿಗೇಡಿಗಳು ಕಾಂತರಾಜುರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಪ್ರಯತ್ನ ನಡೆದಿದೆ" ಎಂದು ಆರೋಪಿಸಿದರು.
"ದೈಹಿಕವಾಗಿ ಸಶಕ್ತರಾಗಿದ್ದ ಕಾರಣ, ಧೈರ್ಯವಾಗಿ ಅದನ್ನು ಎದುರಿಸಿದ ಕಾರಣ ಕಾಂತರಾಜು ಅವರು ತೀವ್ರತರದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಪ್ರಾಣಪಾಯದಿಂದ ಪಾರಾಗಿರುವುದು ಭಗವಂತನ ಕೃಪೆ. ಆದರೆ ಇಂತಹ ಬೆದರಿಕೆಗಳಿಗೆ ಸಂಘ ಪರಿವಾರದ ಕಾರ್ಯಕರ್ತರು ಬೆದರುವುದಿಲ್ಲ" ಎಂದು ತಿಳಿಸಿದರು.
ಮೂವರು ಪೊಲೀಸರ ವಶಕ್ಕೆ; ಘಟನೆ ಬೆನ್ನಿಗೆ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, "ಮಚ್ಚಿನಿಂದ ಹಲ್ಲೆಯಾಗಿದೆ. ಮೂರರಿಂದ ಐವರು ಮಂದಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮೂವರನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ತನಿಖೆ ನಡೆಯುತ್ತಿದೆ. ಆರಂಭದಲ್ಲಿ ದುಡ್ಡಿನ ವಿಚಾರ ಎಂದು ಹೇಳಿದ್ದರು. ಆದರೆ ತನಿಖೆ ಪ್ರಕಾರ ಬಜರಂಗದಳ ಸಂಘಟನೆ ಚಟುವಟಿಕೆಯಲ್ಲಿ ಇದ್ದಿದ್ದರಿಂದ ಈ ಹಲ್ಲೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ" ಎಂದು ತಿಳಿಸಿದರು.
"ಶಿವಮೊಗ್ಗದಲ್ಲಿ ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿವೆ. ಆದ್ದರಿಂದ ನಮ್ಮ ಪ್ಯಾಟ್ರೋಲಿಂಗ್ ಹೆಚ್ಚಳ ಮಾಡಿದ್ದೇವೆ. ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಸಮಸ್ಯೆ ಉಂಟು ಮಾಡುವವರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನಿಗಾ ವಹಿಸಲಾಗುತ್ತದೆ" ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
Recommended Video