ತಮ್ಮಾಡಿಹಳ್ಳಿ ದತ್ತು ಪಡೆದ ಆಯನೂರು ಮಂಜುನಾಥ್
ಶಿವಮೊಗ್ಗ, ನ. 24 : ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಶಿವಮೊಗ್ಗ ತಾಲೂಕಿನ ತಮ್ಮಾಡಿಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಮದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಶಿವಮೊಗ್ಗ ತಾಲೂಕಿನ ತಮ್ಮಾಡಿಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಆಯನೂರು ಮಂಜುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಮ್ಮಾಡಿಹಳ್ಳಿ ಗ್ರಾಮ ಪಂಚಾಯಿತಿಯಾಗಿದ್ದು ಇದರ ಅಡಿಯಲ್ಲಿ ತಮ್ಮಾಡಿಹಳ್ಳಿ, ಆಡಿನಕೊಟ್ಟಿಗೆ, ಹೂಡಿ ಸೇರಿದಂತೆ 8 ಗ್ರಾಮಗಳು ಬರುತ್ತವೆ.

80 ಲಕ್ಷ ಅನುದಾನ ಘೋಷಣೆ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡರು ಆಯ್ಕೆ ಮಾಡಿಕೊಂಡಿರುವ ನೆಟ್ಟಿಗೆರೆ ಗ್ರಾಮ ಪಂಚಾಯಿತಿಗೆ ಮೊದಲ ಕಂತಾಗಿ ಸಂಸದರ ನಿಧಿಯಿಂದ 80 ಲಕ್ಷ ರೂ.ಗಳ ಅನುದಾನ ಘೋಷಿಸಿದ್ದಾರೆ. [ಮೂರು ಗ್ರಾಮಗಳನ್ನು ದತ್ತು ಪಡೆಯಲಿದ್ದಾರೆ ಡಿವಿಎಸ್]
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನೆಟ್ಟಿಗೆರೆ ಗ್ರಾಮದಲ್ಲಿ ಯೋಜನೆ ಅಡಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಭಾನುವಾರ ಗ್ರಾಮಕ್ಕೆ ತೆರಳಿ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸದಾನಂದ ಗೌಡರು ಸಭೆ ನಡೆಸಿದರು.
ನೆಟ್ಟಿಗೆರೆ ಗ್ರಾಮ ಮತ್ತು ಬಂಡೆ ಕಾಲೋನಿಗೆ ಕುಡಿಯುವ ನೀರು ಪೂರೈಕೆ, ನೆಟ್ಟಿಗೆರೆ ರಾಮಗೊಂಡ್ಲು ಪರಿಶಿಷ್ಟರ ಕಾಲೋನಿ ನಡುವೆ ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸದಾನಂದ ಗೌಡರು ಸೂಚಿಸಿದರು.












Click it and Unblock the Notifications