ಮೀನಾಕ್ಷಿ ಭವನದ ದೋಸೆ ಸವಿಯುತ್ತಾ ಶಿವಮೊಗ್ಗ ನಂಟು ಬಿಚ್ಚಿಟ್ಟ ಡಿಸಿಎಂ
ಶಿವಮೊಗ್ಗ, ಫೆಬ್ರವರಿ 13 : ಉಪ ಮುಖ್ಯಮಂತ್ರಿ ಮತ್ತು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಾ. ಅಶ್ವತ್ಥ ನಾರಾಯಣ ಶಿವಮೊಗ್ಗದ ನಂಟನ್ನು ಬಿಚ್ಚಿಟ್ಟಿದ್ದಾರೆ. ಶಾಲೆ ಮತ್ತು ಕಾಲೇಜುದಿನಗಳನ್ನು ನೆನಪು ಮಾಡಿಕೊಂಡು ಮೀನಾಕ್ಷಿ ಭವನದ ದೋಸೆ ಮುರಿದರು.
ಡಾ. ಅಶ್ವತ್ಥ ನಾರಾಯಣ ಬೆಂಗಳೂರು ನಗರದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರು. ಸದ್ಯ, ಯಡಿಯೂರಪ್ಪ ಸಂಪುಟದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಾಂತ್ರಿಕ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು ಮತ್ತು ಉಪ ಮುಖ್ಯಮಂತ್ರಿ.
ಬೆಂಗಳೂರಿಗರ ಜೇಬಿಗೆ ಕತ್ತರಿ; ಊಟ, ಉಪಹಾರದ ದರ ಏರಿಸಿದ ಹೋಟೆಲ್ಗಳು
ಶಿವಮೊಗ್ಗದ ಜನರಿಗೆ ಮತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಮೀನಾಕ್ಷಿ ಭವನ ಹೋಟೆಲ್ ನೆನಪಿರುತ್ತದೆ. ನಗರದ ಸೈನ್ಸ್ ಮೈದಾನದ ಮುಂದಿರುವ ಹೋಟೆಲ್ನಲ್ಲಿ ದೋಸೆ, ಪಡ್ಡು ಮತ್ತು ವಿವಿಧ ಬಗೆಯ ಉಪಹಾರ ಸವಿಯಲು ಜನರು ಮತ್ತು ರಾಜಕೀಯ ನಾಯಕರು ಆಗಮಿಸುತ್ತಾರೆ.
ಶಿವಮೊಗ್ಗ-ತುಮಕೂರು 4 ಪಥದ ರಸ್ತೆ; 1968 ಮರಕ್ಕೆ ಕೊಡಲಿ
ಗುರುವಾರ ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಅಶ್ವತ್ಥ ನಾರಾಯಣ ಮೀನಾಕ್ಷಿ ಭವನ ಹೋಟೆಲ್ನಲ್ಲಿ ದೋಸೆ ಸವಿದಿದ್ದಾರೆ. ಶಿವಮೊಗ್ಗದ ಜೊತೆ ತಮ್ಮ ನಂಟನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಶಿವಮೊಗ್ಗ-ಬೆಂಗಳೂರು: 7 ದಿನದ ಮಗು ಬೆಂಗಳೂರಿಗೆ ಕರೆತರಲು ಝಿರೋ ಟ್ರಾಫಿಕ್
ಅವಿನಾಭಾವ ನಂಟು
ಡಾ. ಅಶ್ವತ್ಥ ನಾರಾಯಣ ಅವರು, "ಶಿವಮೊಗ್ಗಕ್ಕೂ ನನಗೂ ಅವಿನಾಭಾವ ನಂಟು. ನನ್ನ ಹೈಸ್ಕೂಲ್ ಹಾಗೂ ಪದವಿ ಪೂರ್ವ ಶಿಕ್ಷಣ ಆಗಿದ್ದು ಇಲ್ಲೇ. ಶಿವಮೊಗ್ಗಕ್ಕೆ ಭೇಟಿ ನೀಡುವುದೇ ನನಗೊಂದು ರೀತಿಯ ಖುಷಿ. ಶಾಲಾ ಕಾಲೇಜಿನ ಸಹಪಾಠಿಗಳ ಜತೆಗಿನ ಸವಿನೆನಪುಗಳನ್ನು ಮೆಲುಕು ಹಾಕಲು ಇಂದೊಳ್ಳೆ ಅವಕಾಶ ಒದಗಿಬಂತು" ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಮೀನಾಕ್ಷಿ ಭವನ ದೋಸೆ
"ನನ್ನ ನೆಚ್ಚಿನ ಮೀನಾಕ್ಷಿ ಭವನದಲ್ಲಿ ದೋಸೆ ಸವಿಯುತ್ತಾ ಸಹಪಾಠಿಗಳು, ಸ್ನೇಹಿತರು ಹಾಗೂ ಪತ್ರಕರ್ತ ಮಿತ್ರರ ಜತೆಗಿನ ಹರಟೆ ಮನಸ್ಸಿಗೆ ಮುದ ನೀಡಿತು. ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಜತೆ ಸಂಪರ್ಕದಲ್ಲಿರುವವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ವಿಶೇಷ ಅನುಭವ. ಮೀನಾಕ್ಷಿ ಭವನದ ಮಾಲೀಕರು, ಸಿಬ್ಬಂದಿ ಹಾಗೂ ಅಭಿಮಾನಿಗಳ ಜತೆ ಸೆಲ್ಫಿ ಸಂಭ್ರಮವೂ ಇತ್ತು" ಎಂದು ಬರೆದಿದ್ದಾರೆ.
ಮಲ್ಲೇಶ್ವರ ಶಾಸಕ
ಡಾ. ಅಶ್ವತ್ಥ ನಾರಾಯಣ ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ಶಾಸಕ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಅವರು ಹೈಕಮಾಂಡ್ ಜೊತೆಗೂ ಉತ್ತಮ ಸಂಪರ್ಕ ಹೊಂದಿದ್ದಾರೆ.
ಮೀನಾಕ್ಷಿ ಭವನ ಹೋಟೆಲ್
ಶಿವಮೊಗ್ಗ ನಗರದಲ್ಲಿರುವ ಮೀನಾಕ್ಷಿ ಭವನ ಹೋಟೆಲ್ ಬಹಳ ಪ್ರಸಿದ್ಧಿ. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಈಶ್ವರಪ್ಪ ಅವರಿಗೂ ನೆಚ್ಚಿನ ತಾಣ. ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಟಿ ನೀಡಿದರೆ ರಾಜಕೀಯದ ನಡುವೆ ಬಿಡುವು ಮಾಡಿಕೊಂಡು ದೋಸೆ ಸವಿಯಲು ಮೀನಾಕ್ಷಿ ಭವನಕ್ಕೆ ಭೇಟಿ ಕೊಡುತ್ತಾರೆ.