ಶಿವಮೊಗ್ಗ; ಆಶ್ರಯ ಮನೆ ಹಂಚಿಕೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, ಮಾರ್ಚ್ 01; ಶಿವಮೊಗ್ಗ ನಗರದಲ್ಲಿ ನಿರ್ಮಾಣ ಮಾಡಿರುವ ಜಿ+2 ಮನೆಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶದಂತೆ ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚಲು ಅರ್ಜಿ ಆಹ್ವಾನಿಸಲಾಗಿದೆ.
shivamoggacitycorp.org ಜಾಲತಾಣದ Ashraya Yojane Application ಮೆನುವಿನಲ್ಲಿ ಫೆಬ್ರವರಿ 24 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಮೇ 7 ಕೊನೆಯ ದಿನವಾಗಿದೆ. ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿ ಮಾಡಬೇಕು.

18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. (ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರೀಕ ಅಭ್ಯರ್ಥಿಯಾಗಿರಬೇಕು).
ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಿರಬೇಕು. ಬಿಪಿಎಲ್/ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು. ಸ್ವಂತ ನಿವೇಶನ, ಮನೆಯನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆಯಡಿ ನಿವೇಶನ/ ವಸತಿ ಸೌಲಭ್ಯ ಪಡೆದಿರಬಾರದು.
ಯಾವುದಾದರೂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ ವಿವರ ನೀಡುವುದು. ಅರ್ಜಿದಾರರ ಹೆಸರಿನಲ್ಲಿ ಇರುವ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ (ರೂ. 86700 ಗಳಿಗಿಂತ ಕಡಿಮೆ ಆದಾಯ ಹೊಂದಿರಬೇಕು) ಹೊಂದಿರಬೇಕು. ತೃತೀಯ ಲಿಂಗಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಶುಲ್ಕದ ವಿವರ; ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದವರು 200 ರೂ. ಅರ್ಜಿ ಶುಲ್ಕ, 8000 ರೂ. ಇಎಂಡಿ ಸೇರಿ ಒಟ್ಟು ರೂ. 8200 ಪಾವತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ100 ರೂ. ಅರ್ಜಿ ಶುಲ್ಕ, 5000 ರೂ. ಇಎಂಡಿ ಸೇರಿ ರೂ. 5100 ಪಾವತಿಸಬೇಕು.
ಶಿವಮೊಗ್ಗ ಕೆನರಾ ಬ್ಯಾಂಕ್ ಎಲ್ಲಾ ಶಾಖೆಗಳಲ್ಲಿ/ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ನ ಎಸ್.ಆರ್. ಶಾಖೆಗಳಲ್ಲಿ/ ಇಂಡಿಯನ್ ಬ್ಯಾಂಕ್ನ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ನ ಮೂಲಕ ಪಾವತಿಸಬೇಕು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್ನೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿದ ಬ್ಯಾಂಕ್/ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದನ್ನು ಪಾವತಿಸಿ ಸ್ವೀಕೃತಿ/ ರಶೀದಿ ಪಡೆದ ನಂತರವಷ್ಟೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದು.
ದಾಖಲೆ ವಿವರ: ಪರಿಶಿಷ್ಟ ಜಾತಿ ಶೇ 30, ಪರಿಶಿಷ್ಟ ಪಂಗಡ ಶೇ 10, ಅಲ್ಪಸಂಖ್ಯಾತರು ಶೇ 10, ಸಾಮಾನ್ಯ ವರ್ಗ ಶೇ 50 ಇದ್ದು ಅರ್ಜಿದಾರರ ಇತ್ತೀಚಿನ 1 ಪಾಸ್ಪೋರ್ಟ್ ಸೈಜಿನ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿಯನ್ನು ಅರ್ಜಿಯ ಜೊತೆ ಸಲ್ಲಿಸಬೇಕು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ವಿಕಲಚೇತನ/ ಹಿರಿಯ ನಾಗರೀಕ/ ಮಾಜಿ ಸೈನಿ/ ಸೈನಿಕರ ವಿಧವೆಯರು/ ವಿಧುರರು/ ಸ್ವತಂತ್ರ ಯೋಧರು ಸಕ್ಷಮ ಪ್ರಾಧಿಕಾರದಿಂದ ಪಡೆದಂತಹ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿದಾರರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರ (ಲಭ್ಯವಿದ್ದಲ್ಲಿ) ಹೊಂದಿರಬೇಕು.
ಈ ಎಲ್ಲ ಮೂಲ ದಾಖಲಾತಿ ಹಾಗೂ ದಾಖಲಾತಿಗಳ ಸಂಖ್ಯೆಯನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸುವುದು. ಅಪೂರ್ಣ ಮತ್ತು ತಪ್ಪು ಮಾಹಿತಿ ನೀಡಿದಲ್ಲಿ ಅರ್ಜಿದಾರರಿಗೆ ಯಾವುದೇ ತಿಳುವಳಿಕೆ ನೀಡದೆ ಅರ್ಜಿ ತಿರಸ್ಕರಿಸಲಾಗುವುದು ಎಂದು ತಿಳಿಸಲಾಗಿದೆ.












Click it and Unblock the Notifications