ನಟ ವಿಜಯ್ ರಾಘವೇಂದ್ರ ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ಹಾಕಿ ಬಂಕ್ ಸಿಬ್ಬಂದಿಯಿಂದ ಎಡವಟ್ಟು
ಶಿವಮೊಗ್ಗ, ಆಗಸ್ಟ್ 11: ಕನ್ನಡದ ಚಿತ್ರನಟ ವಿಜಯ ರಾಘವೇಂದ್ರ ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದಾಗ ಪೆಟ್ರೋಲ್ ಬದಲು ಡೀಸೆಲ್ ಹಾಕಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಇತ್ತೀಚಿಗೆ ನಟ ದರ್ಶನ್ ಭೇಟಿ ನೀಡಿದ ನಂತರ, ನಟ ವಿಜಯ್ ರಾಘವೇಂದ್ರ ಅವರು ಕೂಡಾ ತಮ್ಮ ಕುಟುಂಬ ಸಮೇತ ಭೇಟಿ ಕೊಟ್ಟು, ಫೋಟೋಗ್ರಫಿ ಮಾಡಿ ಸುಂದರ ಪರಿಸರದಲ್ಲಿ ಎಂಜಾಯ್ ಮಾಡಿದ್ದರು.
ನಂತರ ಜೋಗ ಜಲಪಾತ ನೋಡಿಕೊಂಡು ಬೆಂಗಳೂರಿಗೆ ವಾಪಸ್ಸಾಗುವಾಗ ವಿಜಯ್ ರಾಘವೇಂದ್ರ ಅವರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ ಬಳಿ ತೆರಳಿದ್ದಾರೆ. ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಪೆಟ್ರೋಲ್ ಬಂಕಿನಲ್ಲಿ ಎಡವಟ್ಟು ಸಂಭವಿಸಿದೆ.

ಪೆಟ್ರೋಲ್ ಬಂಕ್ ಸಿಬ್ಬಂದಿ ಕಾರಿಗೆ ಪೆಟ್ರೋಲ್ ಹಾಕುವ ಬದಲು ನಟ ವಿಜಯ್ ರಾಘವೇಂದ್ರ ಅವರನ್ನು ನೋಡಿದ ಖುಷಿಯಲ್ಲಿ ಕಾರಿಗೆ ಡೀಸೆಲ್ ಹಾಕಿದ್ದಾನೆ. ಆದರೆ ತಾನು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆ ಸಿಬ್ಬಂದಿ ಗಾಬರಿಯಾಗಿದ್ದಾನೆ.
ಈ ವೇಳೆ ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ವಿಜಯ್ ರಾಘವೇಂದ್ರ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ನಂತರ ಲಾರಿಯಲ್ಲಿ ವಿಜಯ್ ರಾಘವೇಂದ್ರ ಅವರ ಕಾರನ್ನು ಸರ್ವಿಸ್ಗೆ ಕಳಿಸಲಾಗಿದೆ.

ನಂತರ ಪೆಟ್ರೋಲ್ ಬಂಕ್ನವರೆ ವಿಜಯ್ ರಾಘವೇಂದ್ರ ಹಾಗೂ ಕುಟುಂಬದವರನ್ನು ಬೆಂಗಳೂರಿಗೆ ತೆರಳಲು ಬೇರೆ ಕಾರಿನ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications