ವಿಡಿಯೋ: ಶಿವಮೊಗ್ಗದ ಆಚಾರ್ಯ ತುಳಸಿ ಕಾಲೇಜಿನಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಶಿವಮೊಗ್ಗ, ಸೆಪ್ಟೆಂಬರ್ 21: ಕಾಲೇಜು ದಿನಗಳೇ ಹಾಗೆ, ನಾವು ಎಷ್ಟೇ ದೊಡ್ಡವರಾಗಿದ್ದರೂ ಕಾಲೇಜು ದಿನಗಳಲ್ಲಿ ಸಂಭ್ರಮಿಸಿದ ನೆನಪುಗಳನ್ನು ಮರೆಯಲು ಸಾಧ್ಯವಿಲ್ಲ.
ಕಾಲೇಜ್ ಕ್ಯಾಂಪಸ್, ತರಗತಿ, ಸ್ನೇಹಿತರು, ಪ್ರಾಧ್ಯಾಪಕರು, ಅಲ್ಲೊಂದು ಇಲ್ಲೊಂದು ಪ್ರೇಮ ಕಥೆಗಳು ಹೀಗೆ ಅನೇಕ ಸುಮಧುರ ಘಳಿಗೆಗಳು ಪಟ್ಟನೆ ಕಣ್ಣೆದುರಿಗೆ ಬಂದರೆ ತುಟಿಯಂಚಲಿ ನಗು ತಂತಾನೇ ಮೂಡುತ್ತದೆ.
ಕಾಲೇಜಿನಲ್ಲಿ ಸಾಂಸ್ಕೃತಿಕ ದಿನಾಚರಣೆ ಮಾಡುತ್ತಾರೆಂದರೆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಂತಹದೇ ಒಂದು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿರುವುದು ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು.

ಸಾಂಸ್ಕೃತಿಕ ದಿನಾಚರಣೆ- ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ ಇದ್ದಿದ್ದರಿಂದ ಕಳೆದ ಒಂದೂವರೆ ವರ್ಷದಿಂದ ಶಾಲಾ ಕಾಲೇಜುಗಳು ತೆರೆದಿರಲಿಲ್ಲ. ವಿದ್ಯಾರ್ಥಿಗಳಿಗೂ ಒಂದು ರೀತಿಯಲ್ಲಿ ಬೇಸರ ಮೂಡಿಸಿತ್ತು. ಕಾಲೇಜು ಆರಂಭವಾಗಿದ್ದರಿಂದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಸಾಂಸ್ಕೃತಿಕ ದಿನಾಚರಣೆ ಮಾಡಲಾಯಿತು.
ಈ ವೇಳೆ ಬಣ್ಣಬಣ್ಣದ ಧಿರಿಸುಗಳನ್ನು ಧರಿಸಿ ಬಂದಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾಲೇಜು ಆವರಣದ ತುಂಬೆಲ್ಲಾ ಲಕಲಕ ಮಿಂಚಿದರು. ಕಾಲೇಜು ಸಾಂಸ್ಕೃತಿಕ ಹಬ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಡಗೂಡಿ ಕಾಲೇಜು ಆವರಣದ ತುಂಬಾ ಸಂಭ್ರಮದಿಂದ ಓಡಾಡಿದರು. ಕನ್ನಡದ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಸೆಲ್ಫಿ ಕ್ಲಿಕ್ಕಿಸಿಕೊಂಡು, ಗುಂಪು ಫೋಟೋ ತೆಗಿಸಿಕೊಂಡು ಸಂಭ್ರಮಿಸಿದರು.

ಪ್ರತಿಭಾ ಪುರಸ್ಕಾರ
ಇದಕ್ಕೂ ಮೊದಲು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿತ್ತು. ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಿ.ಎಸ್. ಅರುಣ್ ಸಾಧಕರನ್ನು ಸನ್ಮಾನಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್. ಅಶ್ವಥ್ ನಾರಾಯಣ ಶೆಟ್ಟಿ, ಎಟಿಎನ್ಸಿ ಹಳೆಯ ವಿದ್ಯಾರ್ಥಿ ಬಳಗದ ಉಪಾಧ್ಯಕ್ಷ ಕೇಶವಮೂರ್ತಿ, ಎಟಿಎನ್ಸಿ ಕಾಲೇಜು ಪ್ರಾಂಶುಪಾಲ ಪ್ರೊ. ಎಚ್.ಎಂ. ಸುರೇಶ್ ಉಪಸ್ಥಿತರಿದ್ದರು.
Recommended Video
ವಾಣಿಜ್ಯ ನಿಕಾಯದ ಮುಖ್ಯಸ್ಥ ಪ್ರೊ. ಆರ್. ಜಗದೀಶ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಕೆ.ಎಂ. ನಾಗರಾಜು, ಎನ್ಎಸ್ಎಸ್ ವಿಭಾಗದ ಪ್ರೊ. ಎಸ್. ಜಗದೀಶ್, ಐಕ್ಯೂಎಸಿ ಪ್ರೊ. ಖಾಜೀಂ ಷರೀಫ್, ಉಪನ್ಯಾಸಕರಾದ ಸತಿ ಭಾರತಿ, ಪ್ರವೀಣ್ ಬಿ.ಎನ್., ಪ್ರೊ. ಶ್ರೀಲಲಿತಾ ಸೇರಿದಂತೆ ಹಲವರು ಇದ್ದರು.












Click it and Unblock the Notifications