ಮಲೆನಾಡಿನಲ್ಲೂ ಗಾಂಜಾ ವಾಸನೆ: ಸಾರ್ವಜನಿಕರಲ್ಲಿ ಆತಂಕ
ಶಿವಮೊಗ್ಗ, ಜನವರಿ 02: ಕುಡಿದ ಮತ್ತಿನಲ್ಲಿ ಅಥವಾ ಗಾಂಜಾ ಮತ್ತಿನಲ್ಲಿ ಯಾರ್ಯಾರೋ ತೊಂದರೆ ಕೊಡುವುದನ್ನ ನೋಡಿದ್ದೇವೆ. ಅದರೆ ಇಲ್ಲೊಬ್ಬ ಗಾಂಜಾ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಬಸ್ ನಿಲ್ದಾಣದಲ್ಲೇ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಕುಂಸಿ ಠಾಣೆಯ ಪೊಲೀಸ್ ಪೇದೆ ಮಂಜುನಾಥ ಅವರ ಮೇಲೆ ಈ ಹಲ್ಲೆ ನಡೆದಿದ್ದು, ಮಂಗಳವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಘಟನೆಯ ವಿವರ
ಇಬ್ಬರು ಯುವಕರು ಮಂಜುನಾಥ್ ಬಳಿ ಬಂದು ಹಣ ಕೇಳಿದ್ದಾರೆ. ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಕುತ್ತಿಗೆ, ಕೈ- ಕಾಲಿಗೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ. ಜನ ಸೇರುತ್ತಿದ್ದಂತೆ ಇಬ್ಬರೂ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಗಾಯಗೊಂಡ ಮಂಜುನಾಥ್ ಅವರನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮಂಜುನಾಥ್ ಕುಂಸಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರತ್ಯಕ್ಷದರ್ಶಿಗಳು ಯುವಕರನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಆಟೋ ಚಾಲಕ ನದೀಂ ಹಾಗೂ ನಜೀರ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಸದ್ಯಕ್ಕೆ ಇಬ್ಬರು ಗಾಂಜಾ ನಶೆಯಲ್ಲಿದ್ದು, ಇನ್ನೂ ಯಾವುದೇ ಮಾಹಿತಿ ತಿಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಲಿಸ್ ಪೇದೆಗೆ ಈ ರೀತಿಯಾದರೆ ಇನ್ನು ಜನ ಸಾಮಾನ್ಯರ ಪರಿಸ್ಥಿತಿ ಏನು ಎಂಬುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಗಾಂಜಾ ಜಾಲಾವನ್ನು ಪತ್ತೆಹಚ್ಚಿ ಬುಡ ಸಮೇತ ಅದನ್ನು ಕಿತ್ತುಹಾಕಿ ಈ ಸಮಸ್ಯೆಗೆ ಜಿಲ್ಲಾ ಪೋಲಿಸ್ ಇಲಾಖೆ ಪರಿಹಾರ ಕಂಡುಕೊಳ್ಳುವುದೇ ಎಂಬುದನ್ನು ಜನ ಕಾದು ನೋಡಬೇಕಿದೆ.












Click it and Unblock the Notifications