ಶಿವಮೊಗ್ಗ; ಸಕ್ರೆಬೈಲು ಕ್ಯಾಂಪ್ನ ಗೀತಾ ಇನ್ನಿಲ್ಲ
ಶಿವಮೊಗ್ಗ, ಡಿಸೆಂಬರ್ 13: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಸಕ್ರೆಬೈಲು ಆನೆ ಕ್ಯಾಂಪ್ನ ಗೀತಾ ಸಾವನ್ನಪ್ಪಿದೆ. 15 ದಿನಗಳಿಂದ ಆನೆ ಓಡಾಡುತ್ತಿರಲಿಲ್ಲ, ಆಹಾರ ತಿನ್ನುವುದನ್ನು ಸಹ ಕಡಿಮೆ ಮಾಡಿತ್ತು.
ಭಾನುವಾರ ಬೆಳಗ್ಗೆ 4.30ರ ಸುಮಾರಿಗೆ ಸಕ್ರೆಬೈಲು ಆನೆ ಶಿಬಿರದಲ್ಲಿ 85 ವರ್ಷದ ಗೀತಾ ಆನೆ ಮೃತಪಟ್ಟಿದೆ. ಅನಾರೋಗ್ಯ ಪೀಡಿತವಾಗಿದ್ದ ಅದು ಹದಿನೈದು ದಿನಗಳಿಂದ ಆಹಾರ ತಿನ್ನುವುದು ಕಡಿಮೆ ಮಾಡಿತ್ತು. ಕ್ರಾಲ್ ನಿಂದ ಹೊರಬರುತ್ತಿರಲಿಲ್ಲ.
ಶನಿವಾರ ರಾತ್ರಿ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿತ್ತು. ರಾತ್ರಿ 7.30ರ ಸಂದರ್ಭದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅದು ಸ್ಪಂದಿಸುತ್ತಿರಲಿಲ್ಲ ಎಂದು ಆನೆ ಕ್ಯಾಂಪ್ನ ವೈದ್ಯ ಡಾ. ವಿನಯ್ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಸಕ್ರೆಬೈಲು ಕ್ಯಾಂಪ್ನಿಂದ ಆನೆಗಳನ್ನು ತರಲಾಗುತ್ತದೆ. ದಸರಾ ಮೆರವಣಿಗೆಯಲ್ಲಿ ಸುಮಾರು 8 ಬಾರಿ ಗೀತಾ ಆನೆ ಭಾಗವಹಿಸಿತ್ತು. ಆನೆ ಕ್ಯಾಂಪ್ನಲ್ಲಿ ಈಗ 22 ಆನೆಗಳಿವೆ.
ಸಕ್ರೆಬೈಲು ಶಿಬಿರದಲ್ಲಿ ಗೀತಾ ಮರಿಗಳನ್ನು ಹಾಕಿತ್ತು. ಕ್ಯಾಂಪ್ನಲ್ಲಿರುವ ಅತಿ ಸುಂದರ ಆನೆಗಳಾದ ರಂಗ, ನೇತ್ರಾ, ಆಲೆ ಗೀತಾ ಮರಿಗಳು. ರಂಗ ಇತ್ತೀಚೆಗೆ ಕಾಡಾನೆಗಳೊಂದಿನ ಸಂಘರ್ಷದ ವೇಳೆ ಮೃತಪಟ್ಟಿತ್ತು.
1964ರಲ್ಲಿ ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆ ತಾಲೂಕಿನ ಕಾನಕಕೋಟೆಯಲ್ಲಿ ಸೆರೆ ಹಿಡಿದ ಆನೆಗೆ ಗೀತಾ ಎಂದು ನಾಮಕರಣ ಮಾಡಲಾಗಿತ್ತು. ಆನೆಗಳನ್ನು ಹಿಡಿಯುವುದಕ್ಕೂ ಸಹ ಗೀತಾಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು.
ಅರಣ್ಯ ಇಲಾಖೆ ಕಾಡಿನಿಂದ ಮರದ ದಿಮ್ಮಿಗಳನ್ನು ಸಾಗಣೆ ಮಾಡಲು ಆನೆಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಕುದುರೆಮುಖದಲ್ಲಿ ಸಹ ಗೀತಾ ಇಂತಹ ಕಾರ್ಯಕ್ಕೆ ಇಲಾಖೆಗೆ ನೆರವಾಗಿದ್ದಳು.
ಆನೆ ಶಿಬಿರದಲ್ಲಿನ ಹೆಣ್ಣಾನೆಗಳ ಹೆರಿಗೆ, ಪ್ರಸೂತಿ ನಂತರದ ಆರೈಕೆಯಲ್ಲಿ ಗೀತಾ ಉಪಸ್ಥಿತಿ ಇರುತ್ತಿತ್ತು. ಶಿಬಿರದ ಆನೆಗಳ ಪಾಲಿಗೆ ಗೀತಾ ಪ್ರೀತಿಯ ಅಜ್ಜಿಯಾಗಿದ್ದಳು.












Click it and Unblock the Notifications