ಶಿವಮೊಗ್ಗದ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ 42 ಅರ್ಜಿ: ಇಬ್ಬರಿಗೆ ಪ್ರತಿಸ್ಪರ್ಧಿಯೆ ಇಲ್ಲ
ಶಿವಮೊಗ್ಗ, ನವೆಂಬರ್ 23: ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿ ಏಳು ವಿದಾನಸಭೆ ಕ್ಷೇತ್ರದಲ್ಲಿ 42 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡು ಕ್ಷೇತ್ರದಲ್ಲಿ ಆಕಾಂಕ್ಷಿಗಳಿಗೆ ಪ್ರತಿಸ್ಪರ್ಧಿಗಳೇ ಇಲ್ಲದಿರುವುದು ವಿಶೇಷವಾಗಿದೆ.
ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಮುಖಂಡರು ಈ ಭಾರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಭದ್ರಾವತಿ ಮತ್ತು ಸೊರಬ ಕ್ಷೇತ್ರದಲ್ಲಿ ತಲಾ ಒಂದು ಅರ್ಜಿ ಬಂದಿರುವುದು ವಿಶೇಷ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೂವರು ಅರ್ಜಿ ಸಲ್ಲಿಸಿದ್ದಾರೆ. ಉಳಿದ ನಾಲ್ಕು ಕ್ಷೇತ್ರದಲ್ಲಿ ತೀವ್ರ ಪೈಪೋರ್ಟಿ ಏರ್ಪಟ್ಟಿದೆ.
ಒಂದೂ ಕ್ಷೇತ್ರದ ಗೆಲ್ಲದ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಭಾರಿ ಡಿಮ್ಯಾಂಡ್: ಒಂದೇ ಕ್ಷೇತ್ರಕ್ಕೆ 15 ಅರ್ಜಿ
ಶಿವಮೊಗ್ಗ ನಗರ ಕ್ಷೇತ್ರದಿಂದ 9 ಅಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆ.ಬಿ.ಪ್ರಸನ್ನ ಕುಮಾರ್, ಹೆಚ್.ಎಸ್.ಸುಂದರೇಶ್, ಹೆಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಎಸ್.ಕೆ.ಮರಿಯಪ್ಪ, ಇಮ್ತಿಯಾಜ್, ಶೀನ್ ಜೋಸೆಫ್, ವೈ.ಹೆಚ್.ನಾಗರಾಜ್, ನರಸಿಂಹಮೂರ್ತಿ ಅವರು ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ 11 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಜಿ.ಪಲ್ಲವಿ, ಕೆ.ಅನಿತಾ ಕುಮಾರ್, ಡಾ. ಶ್ರೀನಿವಾಸ ಕರಿಯಣ್ಣ, ಬಲದೇವ ಕೃಷ್ಣ, ನಾರಾಯಣ ಸ್ವಾಮಿ, ಶಿವಮೂರ್ತಿ ನಾಯ್ಕ್, ಸುಧಾಕರ್, ದಿನೇಶ್ ಬಸವಣ್ಯಪ್ಪ, ಡಾ. ಕೃಷ್ಣ, ಶಂಕರ್, ಮಲ್ಲಪ್ಪ ಅವರು ಅರ್ಜಿ ಸಲ್ಲಿಸಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದಿಂದ 3 ಆಕಾಂಕ್ಷಿಗಳಿದ್ದಾರೆ. ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ, ಕಡ್ತೂರ ದಿನೇಶ್ ಅವರು ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಶಿಕಾರಿಪುರದಿಂದ 8 ಆಕಾಂಕ್ಷಿಗಳಿದ್ದಾರೆ. ಮಾಲತೇಶ್, ದರ್ಶನ್ ಉಳ್ಳಿ, ನಾಗರಾಜ ಗೌಡ, ರಾಘವೇಂದ್ರ ನಾಯ್ಕ್, ಪುಷ್ಪಾ ಶಿವಕುಮಾರ್, ಬಿ.ಎನ್.ಮಹಾಲಿಂಗಪ್ಪ, ನಿರ್ಮಲಾ ಪಾಟೀಲ್, ಕವಲಿ ಗಂಗಾಧರ್ ಅವರು ಆಕಾಂಕ್ಷಿಗಳಾಗಿದ್ದಾರೆ.
ಜನಸಂಕಲ್ಪ ವಿಜಯ ಯಾತ್ರೆಯಾಗುತ್ತಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ: ಬೊಮ್ಮಾಯಿ ವಿಶ್ವಾಸ
ಸಾಗರ ಕ್ಷೇತ್ರದಿಂದ ಟಿಕೆಟ್ಗಾಗಿ 7 ಅರ್ಜಿಗಳಿವೆ. ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ, ಡಾ. ರಾಜನಂದಿನಿ, ಬಿ.ಆರ್.ಜಯಂತ್, ಹಕ್ರೆ ಮಲ್ಲಿಕಾರ್ಜುನ, ಕಲಗೋಡು ರತ್ನಾಕರ್, ಹೊನಗೋಡು ರತ್ನಾಕರ್ ಆಕಾಂಕ್ಷಿಗಳಾಗಿದ್ದಾರೆ.
ಶಿವಮೂರ್ತಿ ನಾಯ್ಕ್ ವಲಸೆ ಸಾಧ್ಯತೆ
ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮೀಸಲಾಗಿದೆ. ಈ ಕ್ಷೇತ್ರದತ್ತ ಮಾಜಿ ಸಚಿವ ಶಿವಮೂರ್ತಿ ನಾಯ್ಕ್ ವಲಸೆಗೆ ಯೋಜಿಸಿದ್ದಾರೆ. ಈ ಹಿಂದೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದಿಂದ ಶಿವಮೂರ್ತಿ ನಾಯ್ಕ್ ಅವರು ಗೆಲುವು ಸಾಧಿಸಿದ್ದರು. ಸಚಿವರಾಗಿಯು ಜವಾಬ್ದಾರಿ ನಿಭಾಯಿಸಿದ್ದರು. ಈಗ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದತ್ತ ವಲಸೆಗೆ ಯೋಜಿಸಿರುವುದು ಕುತೂಹಲ ಮೂಡಿಸಿದೆ.
ಸಂಬಂಧಿಗಳಿಂದ ಅರ್ಜಿ
ಸಾಗರ ವಿಧಾನಸಭೆ ಕ್ಷೇತ್ರದಲ್ಲಿ ತಂದೆ - ಮಗಳು, ಮಾವ - ಅಳಿಯ, ಗುರು - ಶಿಷ್ಯ ಸಂಬಂಧದ ಲೆಕ್ಕಾಚಾರ ಆರಂಭವಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಜೊತೆ ಪುತ್ರಿ ಡಾ. ರಾಜನಂದಿನಿ ಅವರು ಅರ್ಜಿ ಸಲ್ಲಿಸಿದ್ದಾರೆ. ಕಾಗೋಡು ತಿಮ್ಮಪ್ಪ ಅವರ ಅಳಿಯ ಬೇಳೂರು ಗೋಪಾಲಕೃಷ್ಣ, ಕಾಗೋಡು ತಿಮ್ಮಪ್ಪ ಅವರ ಶಿಷ್ಯರೆಂದು ಗುರುತಿಸಿಕೊಂಡಿರುವ ಬಿ.ಆರ್.ಜಯಂತ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಎರಡು ಕ್ಷೇತ್ರಗಳಿಗೆ ಒಂದೇ ಅರ್ಜಿ
ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾವತಿ ಮತ್ತು ಸೊರಬ ಕ್ಷೇತ್ರದಲ್ಲಿ ತಲಾ ಒಂದು ಅರ್ಜಿ ಬಂದಿದೆ. ಭದ್ರಾತಿಯಿಂದ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಪುನಃ ಟಿಕೆಟ್ ಬಯಸಿದ್ದಾರೆ. ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರು ಅರ್ಜಿ ಹಾಕಿದ್ದಾರೆ. ಇವರಿಬ್ಬರಿಗೆ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಸ್ಪರ್ಧಿಯೆ ಇಲ್ಲ.
ಹಲವು ವೈದ್ಯರಿಂದ ಅರ್ಜಿ
ಟಿಕೆಟ್ ಆಕಾಂಕ್ಷಿಗಳಲ್ಲಿ ನಿವೃತ್ತ ಅಧಿಕಾರಿಗಳು, ವೈದ್ಯರಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಬಲದೇವ ಕೃಷ್ಣ, ನಿವೃತ್ತ ಇಂಜಿನಿಯರ್ ಮಲ್ಲಪ್ಪ, ವೈದ್ಯ ಡಾ. ಶ್ರೀನಿವಾಸ ಕರಿಯಣ್ಣ, ಡಾ. ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ಡಾ. ಶ್ರೀನಿವಾಸ ಕರಿಯಣ್ಣ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಇನ್ನು, ಸಾಗರ ಕ್ಷೇತ್ರದಿಂದ ಡಾ. ರಾಜನಂದಿನಿ ಕಾಗೋಡು ಅವರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.