‘‘ಮೋದಿ ಪ್ರಧಾನಿಯಾಗಿ ಮುಂದುವರೆದರೆ 10 ಕೋಟಿ ಜನ ಆತ್ಮಹತ್ಯೆ ಮಾಡಿಕೊಳ್ತಾರೆ’’
ಶಿವಮೊಗ್ಗ, ಫೆಬ್ರವರಿ 23: ಇನ್ನೂ ನಾಲ್ಕು ವರ್ಷ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮುಂದುವರೆದರೆ ದೇಶದಲ್ಲಿ ಹತ್ತು ಕೋಟಿ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಬೆಲೆ ಏರಿಕೆಯಿಂದಾಗಿ ಬಡತನ, ಹಸಿವು ತಾಳಲಾರದೆ ಹತ್ತು ಕೋಟಿ ಜನ ಆತ್ಮಹತ್ಯೆ ಮಾಡಿಕೊಳ್ಳಬಹುದು. ಅಥವಾ ದರೋಡೆಗೆ ಇಳಿಯಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಬಗ್ಗೆ ಮಾತನಾಡಿದರೆ ಬಿಜೆಪಿಯವರು ಶ್ರೀರಾಮನ ಬಗ್ಗೆ ಹೇಳುತ್ತಾರೆ. ಈ ಹಿಂದೆ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಸ್ವಲ್ಪ ಏರಿಕೆಯಾದರೆ ಸಾಕು ಶೋಭಾ ಕರಂದ್ಲಾಜೆ ಅವರು ಸಿಲಿಂಡರ್ ತಲೆ ಮೇಲೆ ಹೊತ್ತು ಬರುತ್ತಿದ್ದರು. ಈಗ ಅವರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.

ಮೀಸಲಾತಿಗಾಗಿ ವಿವಿಧ ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ. ಸಚಿವರುಗಳೇ ಈ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೂ ನಾವೆಲ್ಲ ಒಂದು ಅನ್ನುತ್ತಿದ್ದ ಬಿಜೆಪಿ ಮುಖಂಡರ ನೇತೃತ್ವದಲ್ಲೇ ಹಿಂದೂಗಳ ನಡುವೆ ಹೋರಾಟ ಹಚ್ಚುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ. ಸಮಾನತೆಗಾಗಿ ಹೋರಾಟಗಳು ನಡೆಯುತ್ತಿವೆ ಎಂದರು.
ಮೀಸಲಾತಿಗಾಗಿ ಸಚಿವರು ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಅನ್ನವುದು ಸ್ಪಷ್ಟವಾಗಬೇಕು. ಅವರೆಲ್ಲ ರಾಜೀನಾಮೆ ನೀಡಿ, ವಿರೋಧ ಪಕ್ಷದ ಜೊತೆಗೆ ಸೇರಿ ಹೋರಾಟ ನಡೆಸಿದರೆ ಒಳ್ಳೆಯದು ಎಂದರು.
ಕಲ್ಲು ಬಂಡೆ ಒಡೆಯುವ ಕಾರ್ಮಿಕರ ಸಮಸ್ಯೆ ಬಗೆಹರಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಕಲಾಪ ಆರಂಭವಾಗುತ್ತಿದೆ, ಸದನದಲ್ಲಿ ಈ ಕುರಿತು ಚರ್ಚೆ ನಡೆಸಬಹುದು. ಆದರೆ ಈ ವಿಚಾರವಾಗಿ ಪ್ರತಿಭಟನೆ ನಡೆಸುವುದೇಕೆ. ಹಾಗಿದ್ದರೆ ಇವರು ರಾಜೀನಾಮೆ ನೀಡಿ ಹೋರಾಟ ನಡೆಸಲಿ ಎಂದು ಸವಾಲು ಹಾಕಿದರು.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಕಲ್ಲು ಗಣಿಗಳಲ್ಲಿ ನಡೆದಿರುವ ಸ್ಪೋಟದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಲ್ಲಿ ಶೇ.99 ಮಂದಿ ಬಿಜೆಪಿಯವರಿದ್ದಾರೆ. ಈ ಹಿಂದೆ ಎಲ್ಲಾ ಪ್ರಕರಣವನ್ನು ಸಿಬಿಐಗೆ ವಹಿಸಿ ಅನ್ನುತ್ತಿದ್ದರು. ಈಗ ಗಣಿ ಸ್ಪೋಟ ಪ್ರಕರಣ, ತೀರ್ಥಹಳ್ಳಿಯ ನಂದಿತಾ ಪ್ರಕರಣ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.












Click it and Unblock the Notifications