ಶ್ರೀಮತಿ ನಿರ್ಧಾರ ಬಗ್ಗೆ ಮೌನ ಮುರಿದ ಶಿವಣ್ಣ
ಸಿನಿಮಾ ಆದ್ರೆ ಬಹಳ ಸುಲಭವಾಗಿ ಮಾತನಾಡಿಬಿಡ್ತೀನಿ. ಆದರೆ ರಾಜಕೀಯದ ಬಗ್ಗೆ ಮಾತನಾಡುವುದು ಬಹಳ ಕಷ್ಟ. ರಾಜ್ ಕುಟುಂಬದಿಂದ ರಾಜಕೀಯಕ್ಕೆ ಬರುತ್ತಿರುವುದು ಬಹಳ ಚರ್ಚೆಯ ವಿಷಯವಾಗಿದೆ. ಕೆಲವರು ಬೇಕು ಎಂದು ಇನ್ನು ಕೆಲವರು ಬೇಡ ಎಂದು.
ಆದರೆ ರಾಜಕೀಯ ಬೇಡ ಎಂದು ಅಪ್ಪಾಜಿ ಯಾವತ್ತೂ ಹೇಳಿಲ್ಲ. ಅಂದರೆ ವೈಯಕ್ತಿಕವಾಗಿ ಅವರಿಗೆ ಇಷ್ಟವಿರಲಿಲ್ಲ ಅಷ್ಟೇ. ಒಂದು ವೇಳೆ ರಾಜಕೀಯವೇ ಅವರಿಗೆ ಇಷ್ಟವಿರಲಿಲ್ಲ ಎಂದಿದ್ದರೆ ಬಂಗಾರಪ್ಪ ಫ್ಯಾಮಿಲಿಯಿಂದ ಅವರು ಹೆಣ್ಣು ತರುವ ಅವಶ್ಯಕತೇನೇ ಇರುತ್ತಿಲಿಲ್ಲ. ಯಾಕೆ ಶಿವಣ್ಣನಿಗೆ ಬೇರೆಲ್ಲೂ ಹೆಣ್ಣು ಸಿಗುತ್ತಿರಲಿಲ್ಲವೇ? (ಅದರಲ್ಲೇ ಉತ್ತರ ಇದೆ ಎಂದು ನಸು ನಕ್ಕರು)
ಚಿಕ್ಕಮಗಳೂರಿನಿಂದ ಇಂದಿರಾಗಾಂಧಿ ಅವರು ಸ್ಪರ್ಧಿಸಿದಾಗ ಅಪ್ಪಾಜಿಯನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಲಾಯಿತು. ಆದರೆ ವೈಯಕ್ತಿಕವಾಗಿ ಅವರಿಗೆ ರಾಜಕೀಯ ಇಷ್ಟವಿರಲಿಲ್ಲ. ಅವರದೇ ಆದಂತಹ ನಿಲುವಿತ್ತು. ಆದರೆ ಯಾವತ್ತೂ ಅವರು ಇದು ಮಾಡಬೇಡ ಕಂದ, ಅದು ಮಾಡಬೇಡ ಕಂದ ಎಂದು ಹೇಳಿದವರೇ ಅಲ್ಲ. ನಿನಗೆ ಏನು ಇಷ್ಟಬರುತ್ತದೋ ಅದು ಮಾಡು ಅಂತಿದ್ದರು. [ಶಿವಣ್ಣ ಅವರಿಗೆ ರಾಜಕೀಯ ಇಂಟರೆಸ್ಟ್ ಇಲ್ಲವೇ?]

ನಮ್ಮ ತಾಯಿ ಅವರಿಗೆ ವಜ್ರೇಶ್ವರಿ ತರಹ ಒಂದು ಆಫೀಸ್ ಮಾಡಿಕೊಟ್ಟು ಇಡೀ ಗಾಂಧಿನಗರದಲ್ಲಿ ಏನೇ ಸಮಸ್ಯೆ ಬಂದರೂ ಹೆಡ್ ಆಫೀಸ್ ನಲ್ಲಿ ಪರಿಹಾರ ಆಗುತ್ತದೆ. ಆ ರೀತಿ ಅವರು ತಮ್ಮದೇ ಆದಂತಹ ನೀತಿ ನಿಲುವುಗಳನ್ನು ಇಟ್ಟುಕೊಂಡಿದ್ದರು. ಬೇರೆಯವರ ಅಭಿಪ್ರಾಯಗಳನ್ನೂ ಗೌರವಿಸಿದವರು.
ಮೊದಲು ನಮ್ಮ ಮತ್ತು ಅವರ ಮನೆಯಲ್ಲಿ ಗೀತಾ ಚುನಾವಣೆಗೆ ನಿಂತುಕೊಳ್ಳಬಹುದೇ ಎಂಬ ಮಾತುಕತೆ ನಡೆದಾಗ, ನಾನೂ ಗೀತಾಳ ಇಷ್ಟ ಏನು ಎಂದು ಕೇಳಿದೆ. ಟ್ರೈ ಮಾಡಲೆ ಎಂದರು. ಮಾಡು ಎಂದು ಹೇಳಿದೆ. ಯಾರೋ ಹೇಳಿದರು ಎಂದು ನಿಂತುಕೊಳ್ಳುವುದಲ್ಲ. ವೈಯಕ್ತಿಕವಾಗಿ ನಿನಗೆ ಇಷ್ಟ ಇದೆಯೇ ಎಂದು ಕೇಳಿದೆ. ಅದಕ್ಕೆ ಓಕೆ ಎಂದಳು.
ರಾಜಕೀಯಕ್ಕೆ ಬರುವುದು ತಪ್ಪು ಎಂದು ನಾನು ಯಾವತ್ತೂ ಅಂದುಕೊಂಡಿಲ್ಲ. ನನ್ನ ಎಲ್ಲಾ ವ್ಯವಹಾರವನ್ನೂ ಗೀತಾ ಅವರೇ ನಿಭಾಯಿಸುತ್ತಿದ್ದರು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಬೇಕು ಎಂದು ಬಯಸಿದ್ದಾರೆ. ಆಗಲಿ ಎಂದು ಹೇಳಿದ್ದೇನೆ.
ನಮ್ಮ ಅಪ್ಪಾಜಿಗೆ ಒಳ್ಳೆಯ ಸೊಸೆಯಾಗಿದ್ದಾರೆ, ನನಗೆ ಒಳ್ಳೆಯ ಹೆಂಡತಿಯಾಗಿದ್ದಾಳೆ, ಇಬ್ಬರು ಹೆಣ್ಣುಮಕ್ಕಳಿಗೆ ಒಳ್ಳೆ ತಾಯಿಯಾಗಿ ಒಬ್ಬಳನ್ನು ಡಾಕ್ಟರ್ ಮಾಡಿದ್ದಾಳೆ, ಇನ್ನೊಬ್ಬಳನ್ನು ಆರ್ಕಿಟೆಕ್ಚರ್ ಮಾಡುತ್ತಿದ್ದಾಳೆ. ಇಬ್ಬರಿಗೂ ತಂದೆ ಜೊತೆ ಓಡಾಡುವ ಒಳ್ಳೆಯ ಅಭ್ಯಾಸ ಇದೆ. ನನ್ನ ಇಬ್ಬರು ಮಕ್ಕಳಿಗೂ ಸ್ವಲ್ಪ ಐಡಿಯಾ ಇದೆ ಎಂದು ಭಾವಿಸಿದ್ದೇನೆ.
ಯಾರೇ ಆಗಲಿ ಮೊದಲು ಹಾರ್ಟ್ ನಿಂದ ಕೆಲಸ ಮಾಡಬೇಕು. ಹಾರ್ಟ್ ನಿಂದ ಕೆಲಸ ಮಾಡಿದರೆ ಅದು ಮೈಂಡ್ ಗೆ ಹೋಗುತ್ತದೆ. ಬರೀ ಮೈಂಡ್ ಗೇಮ್ ಆಡಿದರೆ ಕಷ್ಟ. ಯಾರು ಏನೇ ಮಾಡಲಿ ಮೊದಲು ಹೃದಯದಿಂದ ಮಾಡಿ. ಕೇವಲ ಜನಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇವೆ. ಯಾವುದೇ ಜಾತಿ, ಧರ್ಮಕ್ಕಾಗಿ ಅಲ್ಲ.
ಸೋಲು ಗೆಲುವು ಎಲ್ಲದರಲ್ಲೂ ಉಂಟು. ಧೈರ್ಯವಾಗಿ ಮುನ್ನುಗ್ಗಬೇಕು. ನಾನೂ ಅಷ್ಟೇ ಇಂಡಸ್ಟ್ರಿಯಲ್ಲಿ 25 ವರ್ಷದಿಂದ ಇದ್ದರೂ ಹೊಸಬರ ಚಿತ್ರಗಳ ಮುಂದೆ ನನ್ನ ಚಿತ್ರಗಳು ಸೋತಿದ್ದುಂಟು. ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸಿದ್ದೇನೆ. ಅಯ್ಯೋ ನನ್ನ ಚಿತ್ರ ಸೋತು ಹೋಯ್ತಲ್ಲಾ ಎಂದು ನಾನು ದುಃಖಪಡುತ್ತಾ ಕೂತಿದ್ದರೆ ಚಿತ್ರೋದ್ಯಮದಲ್ಲಿ ಇಷ್ಟು ದಿನ ನಾನು ಇರ್ತಿರಲಿಲ್ಲ. ಯಾವಾಗಲೋ ತಿರಸ್ಕೃತನಾಗಿ ಹೊರಟು ಹೋಗಿಬಿಡುತ್ತಿದ್ದೆ.
ಏನು ಬರುತ್ತದೋ ಬರಲಿ. ಮುನ್ನುಗ್ಗು ಹೋಗುತ್ತಿರಬೇಕು ಅಷ್ಟೇ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಹೋಗಬೇಕು ಎಂದು ಅಪ್ಪಾಜಿ ಹೇಳಿಕೊಟ್ಟಿದ್ದ ಪಾಠ ಅದು.












Click it and Unblock the Notifications