ಜಾರ್ಖಂಡ್ ಸರ್ಕಾರದಲ್ಲಿ ಭಿನ್ನಮತ ಸ್ಫೋಟ: ಬೆಂಬಲ ವಾಪಸ್ ಪಡೆದ ಜೆವಿಎಂ
ರಾಂಚಿ, ಜನವರಿ 25: ಸರ್ಕಾರ ರಚನೆಯಾದ ಒಂದು ತಿಂಗಳೊಳಗೇ ಜಾರ್ಖಂಡ್ನ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಉಂಟಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಜಾರ್ಖಂಡ್ ವಿಕಾಸ್ ಮೋರ್ಚಾ ಪ್ರಜಾತಾಂತ್ರಿಕ (ಜೆವಿಎಂ) ಹಿಂಪಡೆದುಕೊಂಡಿದೆ. ಕಾಂಗ್ರೆಸ್ ತನ್ನ ಶಾಸಕರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸಿದೆ.
ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಮುಖ್ಯಸ್ಥ ಹೇಮಂತ್ ಸೊರೆನ್ ಅವರಿಗೆ ಪತ್ರ ಬರೆದಿರುವ ಜೆವಿಎಂ ಅಧ್ಯಕ್ಷ ಬಾಬುಲಾಲ್ ಮರಾಂಡಿ, ಆಡಳಿತಾರೂಢ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ತಮ್ಮ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಾರ್ಖಂಡ್ ಸಿಎಂ ಆದ ಹೇಮಂತ್ ಸೊರೆನ್, ಬಿಜೆಪಿಯಿಂದ ರಾಜ್ಯ ಕಸಿದ ತೃಪ್ತಿ ಕಾಂಗ್ರೆಸ್ಗೆ
ಜೆವಿಎಂನ ಇಬ್ಬರು ಶಾಸಕರಾದ ಪ್ರದೀಪ್ ಯಾದವ್ ಮತ್ತು ಬಂಧು ತಿರ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳನ್ನು ಹೆಚ್ಚಿಸಿತ್ತು. ಅದರ ಮರುದಿನವೇ ಈ ಪ್ರಕಟಣೆ ಹೊರಡಿಸಲಾಗಿದೆ. ಈ ಶಾಸಕರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಜಾರ್ಖಂಡ್ ಉಸ್ತುವಾರಿ ಆರ್ಪಿಎನ್ ಸಿಂಗ್ ಅವರನ್ನ ಕೂಡ ಭೇಟಿ ಮಾಡಿದ್ದರು.
ಬೆಂಬಲ ವಾಪಸ್
'ನಮ್ಮ ಪಕ್ಷವಾದ ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ) 2019ರ ಡಿ. 24ರಂದು ನಿಮ್ಮ (ಹೇಮಂತ್ ಸೊರೆನ್) ನಾಯಕತ್ವದ ಸರ್ಕಾರಕ್ಕೆ ಷರತ್ತುರಹಿತ ಬೆಂಬಲ ನೀಡುವ ಪತ್ರವನ್ನು ಸಲ್ಲಿಸಿತ್ತು. ಆದರೆ ಯುಪಿಎ ಮೈತ್ರಿಕೂಟದ ಭಾಗವಾದ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಅದರ ಕುರಿತು ಇಂದಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ವರದಿಯಾಗಿದೆ. ಹೀಗಾಗಿ ನಮ್ಮ ಪಕ್ಷ ತನ್ನ ಬೆಂಬಲವನ್ನು ಪರಾಮರ್ಶಿಸಿದೆ ಹಾಗೂ ನಿಮ್ಮ ನಾಯಕತ್ವದ ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದುಕೊಳ್ಳುತ್ತಿದೆ' ಎಂದು ಪತ್ರದಲ್ಲಿ ಹೇಳಿದ್ದಾರೆ.
ಒಬ್ಬರೇ ಶಾಸಕರು ಉಳಿಯುವುದು
ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜೆವಿಎಂನ ಮೂರು ಮಂದಿ ಜಯಗಳಿಸಿದ್ದರು. ಯಾದವ್ ಮತ್ತು ತಿರ್ಕೆ ಕಾಂಗ್ರೆಸ್ ಸೇರ್ಪಡೆಗೊಂಡರೆ ಮರಾಂಡಿ ರಾಜ್ಯದಲ್ಲಿ ಜೆವಿಎಂನ ಏಕೈಕ ಶಾಸಕರಾಗಿ ಉಳಿಯಲಿದ್ದಾರೆ.
ಓರಗಿತ್ತಿಯರ ಸ್ಪರ್ಧೆಯಲ್ಲಿ ಗೆದ್ದವರು ಯಾರು?: ಸೇಡು ತೀರಿಸಿಕೊಂಡ ತಮ್ಮನ ಹೆಂಡತಿ
ಸಿಎಲ್ಪಿ ಸ್ಥಾನದಿಂದ ವಜಾ
ಹಾಗೆಯೇ ರಾಜ್ಯದಲ್ಲಿ ಪ್ರಮುಖ ವಿರೋಧಪಕ್ಷವಾಗಿರುವ ಬಿಜೆಪಿ ಜತೆ ಜೆವಿಎಂ ವಿಲೀನಗೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಇದನ್ನು ಜೆವಿಎಂ ನಿರಾಕರಿಸಿದೆ. ಪಕ್ಷವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಪ್ರದೀಪ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಕಿತ್ತುಹಾಕಲು ಪಕ್ಷ ನಿರ್ಧರಿಸಿದೆ.
ಸರ್ಕಾರ ನಿರಾತಂಕ
ಆದರೆ ಜೆವಿಎಂ ತನ್ನ ಬೆಂಬಲ ಹಿಂದಕ್ಕೆ ಪಡೆದುಕೊಂಡರೂ ಹೇಮಂತ್ ಸೊರೆನ್ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. 81 ಸದಸ್ಯರ ಸದನದಲ್ಲಿ ಸರ್ಕಾರ 47 ಶಾಸಕರ ಬಲ ಹೊಂದಿದೆ. 25 ಸದಸ್ಯರನ್ನು ಹೊಂದಿರುವ ಬಿಜೆಪಿ, ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಇನ್ನೂ ಘೋಷಿಸಿಲ್ಲ.