ಕೊನೆ ಆಸೆ ಈಡೇರಿದ 30 ನಿಮಿಷಕ್ಕೆ ಪ್ರಾಣ ಬಿಟ್ಟ ವ್ಯಕ್ತಿ!
ರಾಂಚಿ, ಮೇ 17: ಮತದಾನ ಮಾಡಬೇಕೆಂಬ ಕೊನೆಯ ಆಸೆ ಈಡೇರಿದ ಕೇವಲ 30 ನಿಮಿಷಗಳಲ್ಲಿ105 ವರ್ಷದ ವೃದ್ಧರೊಬ್ಬರು ಕೊನೆಯಿಸಿರೆಳೆದ ಅಪರೂಪದ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ರಾಜ್ಯದಲ್ಲಿ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಸಾವಿಗೂ ಮುನ್ನ ತಮ್ಮ ಹಕ್ಕು ಚಲಾಯಿಸಿದರು.
ವರುಣ್ ಸಾಹು ಎಂಬ ವ್ಯಕ್ತಿ ಮತ ಚಲಾಯಿಸಿದ ಅರ್ಧಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಸಾಹು ಆರೋಗ್ಯ ಸರಿಯಿಲ್ಲದ ಕಾರಣ, ಪುತ್ರರ ಸಹಾಯದಿಂದ ಮತ ಚಲಾಯಿಸಲು ಮತಗಟ್ಟೆ ಕೇಂದ್ರಕ್ಕೆ ಹೋಗಿದ್ದರು.
ಮತದಾನ ಮಾಡಬೇಕು ಎಂಬುದು ಅವರ ಕೊನೆಯ ಆಸೆಯಾಗಿತ್ತು. ಆಸೆ ಈಡೇರಿದ ಅರ್ಧಗಂಟೆಯಲ್ಲಿಯೇ ವರುಣ್ ಸಾಹು ಸಾವನ್ನಪ್ಪಿದ್ದಾರೆ. ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಚೌಪರಾನ್ ಬ್ಲಾಕ್ನ ಪರ್ತಾಪುರ್ ಗ್ರಾಮದದಲ್ಲಿ ಜೂನ್ 27, 1917 ರಂದು ಸಾಹು ಜನಿಸಿದ್ದರು.
ಶನಿವಾರ ಬೆಳಗ್ಗೆ ಅವರು ತಮ್ಮ ಕುಟುಂಬ ಸದಸ್ಯರಿಗೆ ತಾವೂ ಮತ ಚಲಾಯಿಸಬೇಕು ಎಂಬ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಾಹು ಬಯಕೆ ಕೇಳಿದ ಕುಟುಂಬಸ್ಥರು ಆರಂಭದಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲೇ ಇರುವಂತೆ ತಾಕೀತು ಮಾಡಿದರೂ, ಸಾಹು ಮಾತ್ರ ತಾವೂ ಮತ ಚಲಾಯಿಸಲೇ ಬೇಕೆಂದು ಹಠ ಹಿಡಿದಿದ್ದಾರೆ.
ಕೊನೆಗೆ ಅವರ ಒತ್ತಾಯದ ಮೇರೆಗೆ 2 ಕಿ. ಮೀ. ದೂರದಲ್ಲಿರುವ ಉತ್ಕ್ರಮಿತ್ ವಿದ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 256ಕ್ಕೆ ಅವರನ್ನು ಕರೆದೊಯ್ಯಲು ನಿರ್ಧಾರ ಮಾಡಿ ಕಾರು ಬಾಡಿಗೆ ತೆಗೆದುಕೊಂಡು ಹೋಗಿದ್ದಾರೆ.
ಅರ್ಧಗಂಟೆಗೆ ಹಾರಿಹೋಯ್ತು ಪ್ರಾಣಪಕ್ಷಿ; ಶನಿವಾರದಂದು ಸಾಹು ಮತದಾನ ಮಾಡಿ ಮನೆಗೆ ಬಂದು ತಲುಪಿದ 30 ನಿಮಿಷಗಳ ನಂತರ ನೆಮ್ಮದಿಯಿಂದ ಪ್ರಾಣ ಬಿಟ್ಟಿದ್ದಾರೆ. 2.30ಕ್ಕೆ ನಮ್ಮ ತಂದೆ ಮನೆಗೆ ಮರಳಿದರು, 3 ಗಂಟೆಗೆ ಅವರು ಕೊನೆಯುಸಿರೆಳೆದರು ಎಂದು ಪುತ್ರ ತರುಣ್ ತಿಳಿಸಿದ್ದಾರೆ.
"ಮತದಾನ ಮಾಡಿದ ನಂತರ ಅವರು ತುಂಬಾ ಉತ್ಸಾಹದಿಂದಿದ್ದರು. ಅವರು ಶನಿವಾರ ಬೆಳಗ್ಗೆ ನಾನು ನನ್ನ ಮತವನ್ನು ಕಳೆದುಕೊಳ್ಳಲು ಬಯಸುವುದಿಲ್ಲ, ಇದೇ ನನ್ನ ಕೊನೆಯ ಮತವಾಗಬಹದು ಎಂದು ನಮಗೆ ಹೇಳುತ್ತಿದ್ದರು. ಅವರ ಸಾವು ನಮಗೆ ಶೂನ್ಯ ಭಾವನೆಯನ್ನು ಉಂಟುಮಾಡಿದೆ. ಆದರೂ ಅವರ ಕೊನೆಯ ಆಸೆಯನ್ನು ನಾವು ಪೂರೈಸಿದ್ದಕ್ಕಾಗಿ ಸಂತೋಷಪಡುತ್ತೇವೆ" ಎಂದು ತರುಣ್ ಮಾಧ್ಯಮಗಳಿಗೆ ಹೇಳಿದ್ದಾರೆ.