ರಾಮನಗರ, ಚನ್ನಪಟ್ಟಣ ಎರಡೂ ಕಡೆ ಎಚ್ ಡಿಕೆ ಸ್ಪರ್ಧೆ: ಹೊಸ ಗಿರಗಿಟ್ಲೆ!
ರಾಮನಗರ, ಮಾರ್ಚ್ 19 : ರಾಮನಗರ ಹಾಗೂ ಚನ್ನಪಟ್ಟಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಸೋಮವಾರ ಭಾರೀ ಚರ್ಚೆ ಹಾಗೂ ಪಕ್ಷದ ಕಾರ್ಯಕರ್ತರಲ್ಲಿನ ಸಂಭ್ರಮಕ್ಕೆ ಕಾರಣವಾಯಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಪಟ್ಟರು.
ನಗರದ ಬಸ್ ನಿಲ್ದಾಣದ ಬಳಿ ಸಂಭ್ರಮದ ಆಚರಣೆ ಮಾಡಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಎಚ್.ಡಿ.ಕುಮಾರಸ್ವಾಮಿ ಪರ ಘೋಷಣೆ ಕೂಗಿದರು. ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮುಖಂಡರ ಜೊತೆ ತಮ್ಮ ನಿವಾಸದಲ್ಲಿ ಚರ್ಚೆ ನಡೆಸಿದರು ಕುಮಾರಸ್ವಾಮಿ. ಈ ವೇಳೆ ಅನಿತಾ ಅವರನ್ನೇ ಕಣಕ್ಕಿಳಿಸುವಂತೆ ಒತ್ತಡ ಹೇರಲಾಯಿತು.
ಜೆಡಿಎಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್!
ಈ ವೇಳೆ ಎಚ್ ಡಿಕೆ, ನಮ್ಮ ಮೇಲೆ ಕುಟುಂಬ ರಾಜಕಾರಣದ ಅಪವಾದ ಬರುತ್ತದೆ ಎಂದು ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಮುಖಂಡರು ಒಪ್ಪಲಿಲ್ಲ. ಈ ವೇಳೆ, ಅನಿತಾ ಬದಲಿಗೆ ತಾವೇ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಜೆಡಿಎಸ್ ಮುಖಂಡರು ಒತ್ತಡ ಹೇರಿದರು.
ಇದರಿಂದ ಉದ್ವೇಗಕ್ಕೆ ಒಳಗಾದ ಎಚ್.ಡಿ.ಕುಮಾರಸ್ವಾಮಿ ಅವರು ಕೋಪದಲ್ಲಿಯೇ, ಎರಡೂ ಕ್ಷೇತ್ರದಲ್ಲೂ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಆ ನಂತರ ಜೆಡಿಎಸ್ ಮುಖಂಡರ ವಾಪಸಾದರು.
ಇದೀಗ ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಕಾರ್ಯಕರ್ತರು ಸಂಭ್ರಮ ಪಟ್ಟಿದ್ದಾರೆ. ಎರಡೂ ಕಡೆ ಎಚ್.ಡಿ.ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಾರಾ ಎಂಬುದು ಸದ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.