ಕನಕಪುರ; ಜಿಲೆಟಿನ್ ಸ್ಪೋಟ ಕೇಸ್ಗೆ ತಿರುವು, ತನಿಖೆ ಹಳ್ಳ ಹಿಡಿಯಿತೇ?
ರಾಮನಗರ, ಆಗಸ್ಟ್ 17; ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕಾರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ವಿರುದ್ಧವೇ ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಆದರೆ ಸ್ಪೋಟ ಖರೀದಿ ಮಾಡುತ್ತಿದ್ದ ಕ್ವಾರಿ ಮಾಲೀಕರನ್ನು ತನಿಖೆಯಿಂದ ಕೈಬಿಟ್ಟಿದ್ದಾರೆ.
ಕನಕಪುರ ತಾಲೂಕಿನ ಮರಳೆಗವಿ ಮಠದ ಪಕ್ಕದಲ್ಲಿ ಸೋಮವಾರ ಕಾರಿನಲ್ಲಿ ಸ್ಫೋಟ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಫೋಟದಲ್ಲಿ ಸಾವನ್ನಪ್ಪಿದ ಮಹೇಶ್ ವಿರುದ್ಧವೇ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ಮಹೇಶ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಪೋಲಿಸರ ನಡೆ ಎಲ್ಲರನ್ನು ಚಕಿತಗೊಳಿಸಿದೆ.
ಆದರೆ ಸ್ಫೋಟಕ ವಸ್ತುಗಳನ್ನ ಖರೀದಿ ಮಾಡುತ್ತಿದ್ದ ಗಣಿ ಮಾಲೀಕರನ್ನು ಪ್ರಕರಣದಿಂದ ಕೈ ಬಿಟ್ಟಿದ್ದಾರೆ. ಇದೀಗ ಈ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಗಣಿಗಾರಿಕೆಗೆ ಬೇಕಾದ ಸ್ಪೋಟಕಗಳನ್ನು ನೀಡುತ್ತಿದ್ದ ಮಹೇಶ್ನನ್ನು ಆರೋಪಿ ಮಾಡಿರುವ ಪೊಲೀಸರ ಕ್ರಮವನ್ನು ಹೋರಾಟಗಾರು ಪ್ರಶ್ನೆ ಮಾಡಿದ್ದಾರೆ.
"ಮಹೇಶ್ ಅಕ್ರಮವಾಗಿ ಸ್ಫೋಟಕಗಳನ್ನು ನೀಡುತ್ತಿದ್ದ ಅಂದ ಮೇಲೆ ಅದನ್ನು ತಗೆದುಕೊಳ್ಳುತ್ತಿದ್ದ ಗಣಿ ಮಾಲೀಕರು ಕೂಡ ಅಕ್ರಮವಾಗಿಯೇ ಸ್ಫೋಟಕಗಳನ್ನು ತಗೆದು ಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧವು ತನಿಖೆ ನಡೆಸಬೇಕೆಂದು" ಹೋರಾಟಗಾರ ನೀಲಿ ರಮೇಶ್ ಒತ್ತಾಯಿಸಿದರು.

ರಾಮನಗರ ಎಸ್ಪಿ ಸ್ಪಷ್ಟನೆ
ಜಿಲೆಟಿನ್ ಸ್ಪೋಟದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಹೇಳುವುದು ಬೇರೆಯಾಗಿದೆ. "ಮೃತ ಮಹೇಶ್ ಕ್ವಾರಿಗಳಿಗೆ ಸ್ಪೋಟಕಗಳನ್ನು ನೀಡುತ್ತಿರಲಿಲ್ಲ. ಕೇವಲ ಗಣಿಗಾರಿಕೆಗೆ ಬೇಕಾದಂತಹ ಕಬ್ಬಿಣದ ಸಲಾಕೆಗಳು ಸರಳುಗಳಂತ ವಸ್ತುಗಳನ್ನು ಅಷ್ಟೇ ನೀಡುತ್ತಿದ್ದ. ನಾವು ಈ ಪ್ರಕರಣದಲ್ಲಿ ಮಹೇಶ್ನನ್ನು ಆರೋಪಿಯನ್ನಾಗಿ ಮಾಡಿಕೊಂಡಿದ್ದೇವೆ ಜೊತೆಗೆ ಎಲ್ಲಾ ಆಯಾಮದಲ್ಲಿಯೂ ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಆತನ ಅಂಗಡಿಯನ್ನು ಕೂಡ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ತಳಕ್ಕೆ ದೌಡಾಯಿಸಿದ ತಂಡ
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಎಸ್ಪಿ ಎಸ್. ಗಿರೀಶ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಅಲ್ಲದೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಕೂಡ ಸ್ಥಳಕ್ಕೆ ಬಂದು ಘಟನೆಯ ಮಾಹಿತಿ ಪಡೆದರು. ಇಂದು ಕೂಡ ರಾಮನಗರ ಎಸಿ ಮಂಜುನಾಥ್ ಭೇಟಿಕೊಟ್ಟು, ಪರಿಶೀಲನೆ ನಡೆಸಿ, ಕ್ವಾರಿ ಮಾಲೀಕರಾದ ಮಠದ ಸ್ವಾಮೀಜಿಗಳಿಂದ ಮಾಹಿತಿ ಪಡೆದರು. ಕನಕಪುರ ತಹಶೀಲ್ದಾರ್ ವಿಶ್ವನಾಥ್ ಸಹ ಭೇಟಿ ಕೊಟ್ಟಿದ್ದರು.

ಐಜಿಪಿ ಚಂದ್ರಶೇಖರ್ ಹೇಳಿಕೆ
ಐಜಿಪಿ ಚಂದ್ರಶೇಖರ್ ಘಟನೆ ನಡೆದ ಸ್ಥಳಕ್ಕೆ ಸೋಮವಾರ ತಡ ರಾತ್ರಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಮೃತನ ಕುಟುಂಬದರೊಂದಿಗೆ ಮಾತುಕತೆ ನಡೆಸಿದರು. ನಂತರ ಮಾತನಾಡಿ, "ಎಫ್ಎಸ್ಎಲ್ ತಂಡ ಕೂಡ ಸ್ಫೋಟಕ್ಕೆ ನಿಖರ ಕಾರಣ ಏನೂ ಎಂದು ತನಿಖೆ ನಡೆಸುತ್ತಿದೆ. ಕ್ವಾರಿಗೆ ಬೇಕಿರುವ ಸ್ಪೋಟಕ ವಸ್ತುಗಳ ಸಾಗಟ ಮಾಡುತ್ತಿದ್ದ ವಸ್ತುಗಳು ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸ್ಫೋಟಕ್ಕೆ ಬಳಸುವ ಜಿಲೆಟಿನ್ ಕಡ್ಡಿಗಳಿಂದ ಈ ಸ್ಫೋಟ ಸಂಭವಿಸಿರಬಹುದು ಎಂತಲೂ ಮೇಲ್ನೋಟಕ್ಕೆ ಕಂಡು ಬರುತ್ತಿದೆ" ಎಂದರು.

ಘಟನೆ ಬಗ್ಗೆ ಸ್ವಾಮೀಜಿ ವಿಷಾದ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಲ್ಲುಗಣಿ ಮಾಲಿಕತ್ವ ಹೊಂದಿರುವ ಮರಳೇಗವಿ ಮಠದ ಮುಮ್ಮಡಿ ಶಿವರುದ್ರಮಹಾಸ್ವಾಮೀಜಿ, "ಈ ವಿಚಾರವಾಗಿ ನನಗೇನು ಗೊತ್ತಿಲ್ಲ. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಈ ರೀತಿಯಾದ ಘಟನೆ ನಡೆಯಬಾರದಿತ್ತು" ಎಂದು ಸಂತಾಪ ಸೂಚಿಸಿದರು.
ಸ್ಪೋಟದಲ್ಲಿ ಮೃತಪಟ್ಟ ಮಹೇಶ್ ಅಣ್ಣ ಸೋಮು ಮಾತನಾಡಿ, "ಮಹೇಶ್ ಸ್ಪೋಟಕ ಸಾಗಿಸುತ್ತಿದ್ದ ವಿಷಯ ನಮಗೆ ಗೊತ್ತಿಲ್ಲ. ಅವನು ಸ್ವಾಮೀಜಿ ಒಡೆತನದ ಕಲ್ಲುಗಣಿಯಲ್ಲಿ ಕಾರ್ಮಿಕನಾಗಿದ್ದ, ಕ್ವಾರಿಯವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ" ಎಂದು ಹೇಳಿದ್ದಾರೆ.
Recommended Video

ಛಿದ್ರವಾದ ಮಹೇಶ್ ದೇಹ
ಕನಕಪುರ ತಾಲೂಕಿನ ಮರಳೆಗವಿ ಮಠದ ಕೂಗಳತೆ ದೂರದಲ್ಲಿ ಸೋಮುವಾರ ಸಂಜೆ ಕಲ್ಲು ಗಣಿಗಾರಿಕೆಗೆ ಬೇಕಾದ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡು ಕಾರಿನಲ್ಲಿ ಬರುತ್ತಿದ್ದ ವೇಳೆ ಸ್ಫೋಟ ನಡೆದಿದೆ. ಕಾರು ಹಾಗೂ ಚಾಲಕ ಮಹೇಶ್ ದೇಹ ಛಿದ್ರವಾಗಿದೆ. ಕ್ವಾರಿ ಒಡೆತನ ಮೆರೆಳೆಗವಿ ಮಠದ ಸ್ವಾಮೀಜಿ ಮುಮ್ಮಡಿ ಶಿವರುದ್ರಮಹಾಸ್ವಾಮೀಜಿ ಹೆಸರಿನಲ್ಲಿದ್ದು, ಸದ್ಯ ಸ್ವಾಮೀಜಿಗಳು ಕಲ್ಲು ಗಣಿಯನ್ನು ಬಾಡಿಗೆಗೆ ನೀಡಿದ್ದಾರೆ. ಕ್ವಾರಿಯನ್ನ ಮೈಲ್ವಾನ್ ಹಾಗೂ ಶಿವಶಂಕರ್ ಎಂಬ ಇಬ್ಬರು ವ್ಯಕ್ತಿಗಳಿಗೆ ಲೀಜ್ಗೆ ಪಡೆದುಕೊಂಡಿದ್ದಾರೆ.
ಒಟ್ಟಾರೆ ಕನಕಪುರದಲ್ಲಿ ಅಕ್ರಮ ಕಲ್ಲುಗಣಿಗಳು ಎಗ್ಗಿಲ್ಲದೇ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವ ಸಮಯದಲ್ಲೇ ಮರಳೆಗವಿ ಮಠದ ಪಕ್ಕದಲ್ಲಿ ನಡೆದ ಕಾರಿನ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications