ಮಾಗಡಿ ಬಳಿಯ ಕೃಷ್ಣಸ್ವಾಮಿ ದೇಗುಲದಲ್ಲಿ ನಿಧಿ ಶೋಧನೆ?
ರಾಮನಗರ, ಜುಲೈ 08 : ಪುರಾತನ ಕಾಲದ ದೇಗುಲಗಳಲ್ಲಿ ನಿಧಿಗಾಗಿ ಭೂಮಿ ಅಗೆಯುವುದು, ವಾಮಚಾರ ಮಾಡುವುದು ಅಲ್ಲಲ್ಲಿ ನಡೆಯುತ್ತಿದ್ದು ಇದೀಗ ಇದೇ ರೀತಿಯ ಘಟನೆಯೊಂದು ತಾಲೂಕಿನ ಕೊಟ್ಟಗಾರಹಳ್ಳಿ ಗ್ರಾಮದ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ಇದು ಸುಮಾರು 500 ವರ್ಷಗಳ ಹಿಂದಿನ ಪುರಾತನ ದೇವಾಲಯವಾಗಿದ್ದು, ಶಿಥಿಲಾವಸ್ಥೆಯಲ್ಲಿತ್ತು. ಹೀಗಾಗಿ ಯಾರೋ ದುಷ್ಕರ್ಮಿಗಳು ಇಲ್ಲಿ ನಿಧಿ ಇರಬಹುದು ಎಂದು ಶಂಕಿಸಿ ಶೋಧನಾ ಕಾರ್ಯಕ್ಕೆ ಮುಂದಾಗಿದ್ದು, ವಾಮಾಚಾರ ನಡೆಸಿ ಭೂಮಿಯನ್ನು ಅಗೆದಿದ್ದಾರೆ.
ಇತ್ತೀಚೆಗಷ್ಟೆ ಮಾಜಿ ಸಚಿವ ಎಚ್.ಎಂ.ರೇವಣ್ಣನವರ ಕುಟುಂಬದ ವತಿಯಿಂದ ಕೃಷ್ಣಸ್ವಾಮಿ ದೇವಸ್ಥಾನದ ಪಕ್ಕದಲ್ಲೆ ಇದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆಯನ್ನು ನಡೆಸಲಾಗಿತ್ತು. ಆಂಜನೇಯ ದೇವಸ್ಥಾನ ಪೂರ್ಣವಾದ ನಂತರ ಕೃಷ್ಣಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಅವರು ಚಿಂತನೆ ನಡೆಸಿದ್ದರು.

ಆದರೆ, ಕಿಡಿಗೇಡಿಗಳು ನಿಧಿ ಆಸೆಗಾಗಿ ಭೂಮಿ ಅಗೆದು ದೇವಸ್ಥಾನದಲ್ಲಿದ್ದ ಕೃಷ್ಣಸ್ವಾಮಿ ವಿಗ್ರಹ ಹಾಗೂ ಕಲ್ಲಿನಲ್ಲಿ ಕೆತ್ತಿದ್ದ ಮತ್ತೊಂದು ವಿಗ್ರಹವನ್ನು ಕಳ್ಳತನ ಮಾಡಿದ್ದು 15 ಅಡಿ ಗುಂಡಿ ತೋಡಿದ್ದಾರೆ. 6 ಅಡಿ ಅಗಲವಿರುವ ಗುಂಡಿಯನ್ನು ನಿಧಿಗಾಗಿ ತೋಡಿದ್ದು ಮಡಿಕೆ ಚೂರುಗಳು, ನೂಲುದಾರ, ಅರಿಶಿಣ, ಕುಂಕುಮ ಹಾಕಿ ವಾಮಾಚಾರ ಮಾಡಿರುವುದು ಕಂಡು ಬಂದಿದೆ.
ಪುರಾತನ ದೇವಸ್ಥಾನವಾಗಿರುವುದರಿಂದ ದೇವಸ್ಥಾನದಲ್ಲಿ ಚಿನ್ನ ಇರಬಹುದೆಂಬ ಕಾರಣಕ್ಕೆ ಈ ಕೃತ್ಯ ಮಾಡಿದ್ದು ಕೂಡಲೇ ಪೊಲೀಸರು ಕಳ್ಳರನ್ನು ಹಿಡಿದು, ನಿಧಿ ಸಿಕ್ಕಿದ್ದರೆ ಸರ್ಕಾರದ ವಶಕ್ಕೆ ಕೊಡಬೇಕೆಂದು ಕೊಟ್ಟಗಾರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಮಾಗಡಿ ಪೊಲೀಸ್ ಠಾಣೆಯ ಪಿಎಸ್ಐ ರವಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಗ್ರಾಮದ ಉಮೇಶ್ 'ಇದು ಪುರಾತನ ದೇವಸ್ಥಾನವಾಗಿದ್ದು ನಿಧಿ ಆಸೆಗೆ ವಾಮಾಚಾರ ನಡೆಸಿ ನಿಧಿ ಶೋಧನೆ ಮಾಡಿದ್ದು, ಕಳ್ಳರಿಗೆ ನಿಧಿ ಸಿಕ್ಕಿರುವ ಸಂಶಯವಿದ್ದು ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ನಿಧಿ ಸಿಕ್ಕಿದ್ದರೆ ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.












Click it and Unblock the Notifications