ಹೋರಾಟ ತೀವ್ರಗೊಳಿಸಿದ ಬಿಡದಿ ಘಟಕದ ಟೊಯೋಟಾ ಕಾರ್ಮಿಕರು
ರಾಮನಗರ, ಡಿಸೆಂಬರ್ 18: ಬಿಡದಿ ಟೊಯೋಟಾ ಘಟಕದ ಕಾರ್ಮಿಕರ ಮುಷ್ಕರ 40ನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರು ಹೋರಾಟವನ್ನು ತೀವ್ರಗೊಳಿಸಿದ್ದು, ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶುಕ್ರವಾರ ಕಾರ್ಮಿಕರು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದ ನೂರಾರು ಕಾರ್ಮಿಕರು ರಸ್ತೆಯಲ್ಲಿಯೇ ಪ್ರತಿಭಟಿಸಿದರು.

ಟೊಯೋಟಾ ಘಟಕದಲ್ಲಿ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಬೋರ್ಡ್ಗಳನ್ನು ಹಿಡಿದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಾಲಾಗಿ ನಿಂತು ಕಾರ್ಮಿಕರು ಘೋಷಣೆಗಳನ್ನು ಕೂಗಿದರು.

ಕೈಯಲ್ಲಿ ಕೆಂಪು ಬಾವುಟ ಹಿಡಿದು, ಸರ್ಕಾರ , ಜಿಲ್ಲಾಡಳಿತ ಮತ್ತು ಕಾರ್ಖಾನೆಯ ಅಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕಾರ್ಮಿಕರು ಕೂಗಿದರು. ಸಹೋದ್ಯೋಗಿಗಳ ಅಮಾನತು ಖಂಡಿಸಿ ನಡೆಸುತ್ತಿರುವ ಮಷ್ಕರ 40ನೇ ದಿನಕ್ಕೆ ಕಾಲಿಟ್ಟಿದೆ.
ಕಾರ್ಮಿಕರ ಸಮಸ್ಯೆಗಳು
* ಅವೈಜ್ಞಾನಿಕವಾಗಿ ಗಡಿಯಾರದಲ್ಲಿಅಳೆಯಲು ಸಾಧ್ಯವಾಗದ ಮಿಲಿ ಸೆಂಕೆಡ್ಗಳಲ್ಲಿ ವರ್ಕ್ ಲೋಡ್ ಕೆಲಸವನ್ನು ನಿಗದಿ ಮಾಡಿ, ಕಾರ್ಮಿಕರು ಯಂತ್ರದಂತೆ ಕೆಲಸ ನಿರ್ವಹಣೆ ಮಾಡುವ ಒತ್ತಡ
* ಕೆಲಸದ ಅವಧಿಯಲ್ಲಿ ನೀರು ಕುಡಿಯಲು ಹಾಗೂ ನೈಸರ್ಗಿಕ ಕ್ರಿಯೆಗಳಿಗೆ ತೆರಳುವ ಕಾರ್ಮಿಕರಿಗೆ ಸಂಬಳ ಕಡಿತ, ಶಿಸ್ತು ಕ್ರಮ
* ಕೆಲಸದ ಒತ್ತಡದಿಂದ ಬಹುತೇಕ ಕಾರ್ಮಿಕರು ಬೆನ್ನು ನೋವು, ಕಾಲು ನೋವು, ಕುತ್ತಿಗೆ ನೋವು, ನರಗಂಟು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
* ಅನಿವಾರ್ಯ ಸಂದರ್ಭಗಳಾದ ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಸಾವು ಇಂತಹ ಕಾರಣಗಳಿಗೂ ರಜೆ ನಿರಾಕರಿಸಿ, ಅನಧಿಕೃತ ರಜೆ ಎಂದು ಸಂಬಳ ಕಡಿತ.
* ಕೆಲಸದ ಒತ್ತಡದಿಂದ ಅನಾರೋಗ್ಯ ಪೀಡಿತರಾದ ಕಾರ್ಮಿಕರಿಗೆ ಒತ್ತಾಯ ಪೂರ್ವಕವಾಗಿ ಸ್ವಯಂ ನಿವೃತ್ತಿಗೆ ಒತ್ತಾಯ
* ಕಾರ್ಮಿಕರ ಸಂಘದ ನ್ಯಾಯಯುತ ಬೇಡಿಕೆಗಳಿಗೆ ಮನ್ನಣೆ ನೀಡದೆ ಅಗೌರವ ತೋರುತ್ತಿರುವುದು.












Click it and Unblock the Notifications