ರಾಮನಗರ: ಕೊರೊನಾ ವೈರಸ್ ಗೆ ಟೊಯೊಟಾ ಕಾರ್ಮಿಕ ಬಲಿ, ಕಂಪನಿಯಲ್ಲಿ ಹೆಚ್ಚಿದ ಭೀತಿ
ರಾಮನಗರ, ಜುಲೈ 7: ರಾಮನಗರ ಜಿಲ್ಲೆ ಬಿಡದಿಯ ಟೊಯೊಟಾ ಕಾರು ಕಂಪನಿಯ ನೌಕರ ಕಳೆದ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಮೃತನಾಗಿದ್ದನು. ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಏಷ್ಯಾದ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಟೊಯೊಟಾ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿದೆ.
ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಟೊಯೊಟಾ ಕಾರ್ಮಿಕ ಬೆಂಗಳೂರಿನ ವಿಜಯನಗರದ ನಿವಾಸಿಯಾಗಿದ್ದು, ಮೃತನ ತಂದೆ ಕೂಡ ಕಳೆದ ಜುಲೈ 2 ರಂದು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ಟೊಯೊಟಾ ಕಾರ್ಮಿಕ ಮತ್ತು ಅವರ ತಂದೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಟೊಯೊಟಾ ಕಂಪನಿ ಉದ್ಯೋಗಿಗಳಿಗೆ ಈಗ ಆತಂಕ ಶುರುವಾಗಿದೆ.
ಟೊಯೊಟಾ ಕಂಪನಿ ಸ್ಪಷ್ಟನೆ:
ಮೃತ ಟೊಯೊಟಾ ಕಾರ್ಮಿಕನಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲೇ ಟೊಯೊಟಾ ಕಾರ್ಖಾನೆಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ತನ್ನ ಉದ್ಯೋಗಿಯೊಬ್ಬರ ಅಕಾಲಿಕ ನಿಧನದ ದುಃಖದ ಸುದ್ದಿಯನ್ನು ತಿಳಿಸಲು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.

ಮೃತ ನೌಕರನ ಸಾವಿಗೆ ಸಂಸ್ಥೆ ತೀವ್ರ ಸಂತಾಪ ಸೂಚಿಸಿದ್ದು, ಸಾವಿಗೆ ಕಾರಣ ಕೊರೊನಾ ವೈರಸ್ ಎಂದು ಗುರುತಿಸಲಾಗಿದೆ. ಸಂಬಂಧಪಟ್ಟ ಉದ್ಯೋಗಿ ಕೊನೆಯದಾಗಿ 2020 ರ ಜೂನ್ 23 ರಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ಆದ್ದರಿಂದ ಸೋಂಕು ಕಂಪನಿಯೊಳಗಿನ ಆಂತರಿಕ ಪ್ರಸರಣದಿಂದ ತಗುಲಿದೆ ಎಂಬ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ ಅಥವಾ ಈ ಹಿಂದೆ ಸ್ಥಾವರದಲ್ಲಿ ವರದಿಯಾದ ಎಂಟು COVID-19 ಪ್ರಕರಣಗಳೂ ಸಹ ಕಂಪನಿಯ ಆಂತರಿಕ ಪ್ರಸರಣದಿಂದ ಕಂಡುಬಂದಿರುವುದಲ್ಲ ಎಂದು ಸ್ಪಷ್ಟನೆ ನೀಡಿದೆ.
ಮೃತರ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತ ನೌಕರರನ್ನು ನಿರ್ಬಂಧಿಸಿದೆ. ನಮ್ಮ ನೌಕರರು ಮತ್ತು ಅದರ ಎಲ್ಲಾ ಇತರ ಪಾಲುದಾರರ ಸುರಕ್ಷತೆ ದೃಷ್ಠಿಯಿಂದ ಕೆಲಸದ ಸ್ಥಳವನ್ನು ಸೋಂಕು ರಹಿತಗೊಳಿಸುವುದರ ಜೊತೆಗೆ ಸೋಂಕು ಪತ್ತೆಯಾದ ಕೆಲಸದ ಪ್ರದೇಶಗಳಲ್ಲಿ ಹೆಚ್ಚಿನ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಕೆಲಸದ ಸ್ಥಳದ ಸುರಕ್ಷತೆಯನ್ನು ದೃಢೀಕರಿಸುವ ಮತ್ತು ಎಲ್ಲಾ ಕಡ್ಡಾಯ ಪ್ರೋಟೋಕಾಲ್ಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೊಯೊಟೊ ಕಂಪನಿ ತಿಳಿಸಿದೆ.












Click it and Unblock the Notifications