ಆಸ್ತಿಗಾಗಿ ತಾಯಿಯನ್ನು ಕೊಂದು ಶೌಚದ ಗುಂಡಿಯಲ್ಲಿ ಮುಚ್ಚಿಟ್ಟ ಮಗ
ರಾಮನಗರ, ಜುಲೈ 28: ತಾಯಿಯನ್ನು ಮಾತೃ ದೇವೋಭವ ಎಂದು ಪೂಜಿಸುತ್ತಾರೆ. ಆದರೆ ಪಾಪಿ ಮಗನೊಬ್ಬ ತುಂಡು ಆಸ್ತಿಗಾಗಿ ಕೈ ತುತ್ತು ಹಾಕಿ ಬೆಳೆಸಿದ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಲೆಗೈದು, ಶೌಚಾಲಯದ ಗುಂಡಿಯಲ್ಲಿ ಮುಚ್ಚಿದ ನೀಚ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಾಗವಾರ ಗ್ರಾಮದಲ್ಲಿ ನಡೆದಿದೆ.
ಮಗನಿಂದಲೇ ಕೊಲೆಯಾದವರು ನಾಗಮ್ಮ (70). ಜಮೀನು ವಿಚಾರವಾಗಿ ತಾಯಿಯನ್ನೇ ಹತ್ಯೆ ಮಾಡಿರುವ ಮಗ ಸುರೇಶ್ ಕೊಲೆ ಆರೋಪಿ.
ಮೂರು ದಿನಗಳ ಹಿಂದೆ ನಾಗಮ್ಮ ಅವರನ್ನು ಕೊಲೆ ಮಾಡಿ, ಶೌಚದ ಗುಂಡಿಯ ಒಳಗೆ ಹಾಕಿ ಮುಚ್ಚಿರುವ ಆರೋಪಿ ಸುರೇಶ್, ಆ ನಂತರ ಏನೂ ತಿಳಿಯದವನಂತೆ ತಾನೇ ಠಾಣೆಗೆ ತೆರಳಿ, ತಾಯಿ ನಾಗಮ್ಮ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ.
ಪ್ರಕರಣದ ಬೆನ್ನಟ್ಟಿದ ಎಂ.ಕೆ.ದೊಡ್ಡಿ ಪೊಲೀಸರು ಈತನ ಮೇಲೆಯೇ ಸಂಶಯಪಟ್ಟು, ಬಂಧಿಸಿ, ವಿಚಾರಣೆ ನಡೆಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಎಂ.ಕೆ.ದೊಡ್ಡಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಸುರೇಶ್ ನ ಹೀನ ಕೃತ್ಯಕ್ಕೆ ಎಂಥ ಶಿಕ್ಷೆ ನೀಡಿದರೂ ತಪ್ಪಲ್ಲ ಎಂದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.