ಸಿಂಧಗಿ ಉಪ ಚುನಾವಣೆ; ಜೆಡಿಎಸ್ ಟಿಕೆಟ್ಗೆ ಐವರ ಪೈಪೋಟಿ!
ರಾಮನಗರ, ಸೆಪ್ಟೆಂಬರ್ 29: ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 30ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬಿಡದಿ ತೋಟದಲ್ಲಿ ನಡೆಯುತ್ತಿರುವ ಪಕ್ಷದ 3ನೇ ದಿನದ ಕಾರ್ಯಗಾರದ ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, "ಸಿಂಧಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಯನ್ನು ನಾಳೆ ಘೋಷಣೆ ಮಾಡಲಾಗುತ್ತದೆ" ಎಂದು ಹೇಳಿದರು.
"ಸಿಂಧಗಿ ಉಪ ಚುನಾವಣೆಗೆ ಟಿಕೆಟ್ಗೆ ಜೆಡಿಎಸ್ನಲ್ಲಿ 5 ಜನ ಆಕಾಂಕ್ಷಿಗಳು ಇದ್ದಾರೆ. ಗುರುವಾರವೇ ವಿಧಾನಸಭಾ ಕ್ಷೇತ್ರದ ಎಲ್ಲಾ ಆಕಾಂಕ್ಷಿಗಳ ಜೊತೆ ಚರ್ಚೆ ಮಾಡುತ್ತೇನೆ. ಮಧ್ಯಾಹ್ನದ ಒಳಗೆ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗುತ್ತದೆ" ಎಂದರು.

2018ರಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಜಯಗಳಿಸಿದ್ದರು. ಶಾಸಕರಾಗಿದ್ದ ಎಂ. ಸಿ. ಮನಗೂಳಿ ಅಕಾಲಿಕ ಮರಣದಿಂದಾಗಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಎಂ. ಸಿ. ಮನಗೂಳಿ ನಿಧನದ ಬಳಿಕ ಕುಟುಂಬ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಎಂ. ಸಿ. ಮನಗೂಳಿ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ.
ದೇವದುರ್ಗ ಅಭ್ಯರ್ಥಿ ಘೋಷಣೆ; ಎಚ್. ಡಿ. ಕುಮಾರಸ್ವಾಮಿ 2023ರ ಚುನಾವಣೆಗೆ ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರಕ್ಕೆ ಕರಿಯಮ್ಮ ಅಭ್ಯರ್ಥಿ ಎಂದು ನಾನು ಘೋಷಣೆ ಮಾಡಿದರು. "ಅವರು ಬಡ ಕುಟುಂಬದಿಂದ ಬಂದವರು. ಆದರೆ ಜನಬಲವಿದೆ, ಅವರ ಗೆಲುವಿಗೆ ಎಲ್ಲಾ ಸಹಕಾರ ಕೊಡಲಾಗುವುದು" ಎಂದು ಭರವಸೆ ನೀಡಿದರು.
"ಮುಂಬರುವ ಚುನಾವಣೆಗೆ 30-35 ಜನ ಮಹಿಳೆಯರಿಗೆ ಟಿಕೆಟ್ ಕೊಡಲು ನಾನು ಸಿದ್ದನಿದ್ದೇನೆ. ಆದರೆ ನೀವು ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ಧವಾಗಬೇಕು. ಯಾವ ಪಕ್ಷದಲ್ಲಿಯೂ ನಡೆಯದ ರೀತಿ ಈ ಕಾರ್ಯಕ್ರಮ ನಡೆಯುತ್ತಿದೆ. ನಿಮ್ಮ ಸಹಕಾರ ನಮಗೆ ತುಂಬಾ ಮುಖ್ಯ. ಪಕ್ಷದ ಸಂಘಟನೆಗೆ ನಿಮ್ಮ ಶಕ್ತಿ ಮುಖ್ಯವಾಗಿದೆ" ಎಂದು ಮಹಿಳಾ ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಹೇಳಿದರು.
"ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ಅಕ್ರಮಗಳಿಗೆ ತಡೆ ಒಡ್ಡಬೇಕು. ದಿನ ಬೆಳಗಾದರೆ ನಮ್ಮ ಮನೆಗೆ ಹೆಣ್ಣು ಮಕ್ಕಳು ಬಂದು ಕಷ್ಟ ಹೇಳಿಕೊಳ್ಳುತ್ತಾರೆ. ಅವರ ದುಖಃ ದುಮ್ಮಾನ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೇನೆ" ಎಂದರು.
"ಮಹಿಳೆಯರು ನೀವು ಅಬಲೆಯರಲ್ಲ. ಉತ್ತರ ಪ್ರದೇಶದಲ್ಲಿ ಮೊದಲ ಮುಖ್ಯಮಂತ್ರಿ ಮಹಿಳೆ ಆಗಿದ್ದರು. 1963ರಲ್ಲಿ ಸಿಎಂ ಆಗಿದ್ದರು. ಪುರುಷರಿಗೆ ಸರಿ ಸಾಟಿಯಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ಸಹಕಾರ ಕೊಡುತ್ತೇವೆ" ಎಂದು ಭರವಸೆ ಕೊಟ್ಟರು.
"ರಾಜ್ಯದ ಉಳಿವಿಗಾಗಿ ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ನೋಡಿದ್ದೇವೆ. ಬಡತನ, ಕೊರೊನಾ ಸಮಯದಲ್ಲಿ ನಡೆದುಕೊಂಡ ರೀತಿ ನೋಡಿದ್ದೇವೆ. ಜನರು ಕಣ್ಣೀರಲ್ಲಿ ಕೈ ತೊಳೆದರು. ನಮ್ಮ ಪಕ್ಷದ ಸರಕಾರ ಬರಬೇಕಿದೆ. 2023ಕ್ಕೆ ನಮಗೆ ಹಂಗಿನ ಸರಕಾರ ಬೇಡ. ಸಮ್ಮಿಶ್ರ ಸರಕಾರಕ್ಕೆ ಇತಿಶ್ರೀ ಹಾಡಿ ಸ್ವಂತ, ಸ್ವತಂತ್ರ ಸರಕಾರ ಮಾಡೋಣ. ನಿಮ್ಮ ಸಹಕಾರ ಇದ್ದರೆ 123ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಾಗಾರ; ಸೆಪ್ಟೆಂಬರ್ 27ರಿಂದ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದ ಮೊದಲ ಹಂತ ಗುರುವಾರ ಮುಕ್ತಾಯವಾಗಲಿದೆ. ಎರಡನೇ ಹಂತದ ಕಾರ್ಯಗಾರವೂ ಅಕ್ಟೋಬರ್ 3 ಮತ್ತು 4 ರಂದು ಎರಡು ದಿನಗಳ ಕಾಲ ನಡೆಯಲಿದೆ.
ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, "ಅಕ್ಟೋಬರ್ 3ರಂದು ಬೆಳಗ್ಗೆ 9 ಗಂಟೆಗೆ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಪ್ರತಿನಿಧಿಗಳ ಕಾರ್ಯಗಾರ ಹಾಗೂ ಅಕ್ಟೋಬರ್ 4ರಂದು ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿಭಾಗದ ಪ್ರತಿನಿಧಿಗಳ ಕಾರ್ಯಗಾರ ನಡೆಯಲಿದೆ" ಎಂದರು.
"ಸೆಪ್ಟೆಂಬರ್ 27 ರಿಂದ 30ರ ತನಕ ನಡೆದ ಕಾರ್ಯಗಾರದಂತೆ ಅಲ್ಪಸಂಖ್ಯಾತರ ಮತ್ತು ಎಸ್ಸಿ, ಎಸ್ಟಿ ಹಾಗೂ ಒಬಿಸಿ ವಿಭಾಗದ ಕಾರ್ಯಗಾರವೂ ನಡೆಯುತ್ತದೆ. ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ನಿಗದಿ ಮಾಡುವುದು ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ಟಾಸ್ಕ್ ಕೊಡಲಾಗುವುದು" ಎಂದರು.
"ಹಿಂದುಳಿದ ಸಮುದಾಯಗಳಿಗೆ ವಿಶ್ವಾಸ ತುಂಬುವುದು ಸೇರಿ ಚುನಾವಣೆಗೆ ಸಜ್ಜುಗೊಳಿಸುವುದು ಈ ಕಾರ್ಯಾಗಾರದ ಉದ್ದೇಶ. ಈ ವಿಭಾಗಕ್ಕೆ ಸೇರಿದ ಎಲ್ಲಾ ಮುಖಂಡರು ಭಾಗಿಯಾಗಲಿದ್ದಾರೆ" ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.












Click it and Unblock the Notifications