ರಾಮನಗರ; ಆರೋಗ್ಯ ವಿಶ್ವವಿದ್ಯಾಲಯ ಶೀಘ್ರವೇ ನಿರ್ಮಾಣ
ರಾಮನಗರ, ಫೆಬ್ರವರಿ 10: " ರಾಮನಗರದ ಅರ್ಚಕನಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಲಾಗುವುದು" ಎಂದು ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.
ಬುಧವಾರ ಅರ್ಚಕನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ಮಾಡಿದ ಅವರು, ಲಭ್ಯವಿರುವ ಜಾಗದಲ್ಲಿಯೇ ಆಡಳಿತಾತ್ಮಕ ಮಂಜೂರಾತಿ ಪಡೆದು ಕೂಡಲೇ ನಿರ್ಮಾಣ ಕೆಲಸಗಳನ್ನು ಆರಂಭಿಸುವಂತೆ ರಾಜೀವ್ ಗಾಂಧಿ ವಿವಿ ಕುಲಪತಿ ಡಾ. ಸಚ್ಚಿದಾನಂದ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ವಿವಿಗೆ ಅಗತ್ಯವಿರುವ ಇನ್ನಷ್ಟು ಭೂಮಿಯ ಬಗ್ಗೆ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿವೆ. ವಿಚಾರಣೆ ಮುಗಿದು ಆದೇಶ ಹೊರಬಿದ್ದ ಮೇಲೆ ಉಳಿದ ಪ್ರಕ್ರಿಯೆಗಳನ್ನು ವೇಗವಾಗಿ ಪೂರೈಸಬಹುದು. ಕೋರ್ಟ್ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ನೀಡಲಾಗುವುದು. ಅದುವರೆಗೂ ಸ್ವಾಧೀನದಲ್ಲಿರುವ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲಾಗುವುದು" ಎಂದರು.

ಭೂಮಿ ವರ್ಗಾಯಿಸಲಾಗಿದೆ: ಈಗಾಗಲೇ 216 ಎಕರೆ ಭೂಮಿಯನ್ನು ಆರೋಗ್ಯ ವಿವಿಗಾಗಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಪೈಕಿ 40 ಎಕರೆ ಸರಕಾರಿ ಜಮೀನು. ಸ್ವಾಧೀನ ಮಾಡಿಕೊಂಡಿರುವ ಕೆಲ ರೈತರ ಭೂಮಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಸುಮಾರು 70 ಎಕರೆಗೆ ಸಂಬಂಧಿಸಿದ ಪರಿಹಾರ ವಿವಾದ ನ್ಯಾಯಾಲಯದಲ್ಲಿದೆ. ಕೋರ್ಟ್ ಆದೇಶದ ಪ್ರಕಾರ ಪರಿಹಾರ ನೀಡುತ್ತೇವೆ. ಸ್ವಾಧೀನದಲ್ಲಿ ಇರುವ ಜಮೀನಿನಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
"ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಆದಷ್ಟು ಬೇಗ ಕಾಮಗಾರಿಗಳನ್ನು ಆರಂಭಿಸಲು ಅವರೂ ಉತ್ಸುಕರಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಾದ ಸಚಿವ ಸಿ. ಪಿ. ಯೋಗೇಶ್ವರ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಶಾಸಕರಾದ ಡಿ. ಕೆ. ಶಿವಕುಮಾರ್, ಅನಿತಾ ಕುಮಾರಸ್ವಾಮಿ, ಮಾಗಡಿ ಮಂಜುನಾಥ್ ಹಾಗೂ ಸಂಸದ ಡಿ. ಕೆ. ಸುರೇಶ್ ಸೇರಿದಂತೆ ಎಲ್ಲರೂ ಈ ಯೋಜನೆಯನ್ನು ಬೇಗ ಕಾರ್ಯಗತ ಮಾಡುವಂತೆ ಹೇಳುತ್ತಿದ್ದಾರೆ" ಎಂದು ಡಿಸಿಎಂ ಮಾಹಿತಿ ನೀಡಿದರು.

"ಆರೋಗ್ಯ ವಿವಿ ಜೊತೆಯಲ್ಲಿಯೇ ಸುಸಜ್ಜಿತವಾದ ಹೆಲ್ತ್ ಸಿಟಿಯನ್ನೂ ಇಲ್ಲಿ ನಿರ್ಮಾಣ ಮಾಡುವುದು ಸರಕಾರದ ಉದ್ದೇಶವಾಗಿದೆ. ಈ ಎರಡು ಯೋಜನೆಗಳು ಕಾರ್ಯಗತವಾದರೆ ಈ ಭಾಗದ ಜನರಿಗೆ ರಾಮನಗರದಲ್ಲಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ" ಎಂದರು.












Click it and Unblock the Notifications