ಟೊಯೊಟಾ ಕಾರ್ಮಿಕರ ಹೋರಾಟಕ್ಕೆ ಎಸ್.ಆರ್.ಹಿರೇಮಠ ಬೆಂಬಲ
ರಾಮನಗರ, ಡಿಸೆಂಬರ್ 31: ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರು ಮತ್ತು ಕಂಪನಿಯ ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು 53ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಪ್ರತಿಭಟನೆಗೆ ಎಸ್.ಆರ್.ಹಿರೇಮಠ ಭಾಗವಹಿಸಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಮಾಜ ಪರಿವರ್ತನಾ ಆಂದೋಲನದ ರೂವಾರಿ, ಸಾಮಾಜಿಕ ಹೋರಾಟಗಾರರಾದ ಎಸ್.ಆರ್.ಹಿರೇಮಠ ಕಾರ್ಮಿಕ ಹೋರಾಟದಲ್ಲಿ ಭಾಗವಹಿಸಿಸುವ ಮೂಲಕ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸ ಹಾಗೂ ಅಮಾನವೀಯ ನಡವಳಿಕೆ ವಿರುದ್ಧ ಕಾರ್ಮಿಕ ಸಂಘದ ನ್ಯಾಯಸಮ್ಮತವಾದ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವುದಾಗಿ ಎಸ್.ಆರ್.ಹಿರೇಮಠ ತಿಳಿಸಿದರು.
ಸಾಂವಿಧಾನಿಕ ಹಕ್ಕಾಗಿರುವ ಗೌರವಯುತ ಬದುಕಿಗಾಗಿ ನಡೆಯುತ್ತಿರುವ ಕಾರ್ಮಿಕ ಸಂಘದ ಹೋರಾಟವು ಎಲ್ಲಾ ರೀತಿಯಲ್ಲಿಯೂ ನ್ಯಾಯಯುತವಾಗಿದ್ದು, ಕಾರ್ಮಿಕರ ಸುದೀರ್ಘ ಅಹಿಂಸಾತ್ಮಕ ಹೋರಾಟವನ್ನು ಪ್ರಶಂಸಿದರು.
ಹಾಗೆ ಟೊಯೊಟಾ ಆಡಳಿತ ಮಂಡಳಿಯು ಕಾರ್ಮಿಕ ಸಂಘದ ಮುಖಂಡರುಗಳ ಜೊತೆಗೆ ಮಾತನಾಡಿ ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ನ್ಯಾಯಯುತವಾಗಿ ಇಬ್ಬರೂ ಒಪ್ಪುವ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಎಲ್ಲಾ ಕಡೆಯಲ್ಲೂ ಹಕ್ಕಿಗಾಗಿ ಹೋರಾಟ ನಡೆಯುತ್ತಿರುವ ಈ ಸಮಯದಲ್ಲಿ ನಿಮ್ಮ ಹೋರಾಟವು ಅದರ ಅವಿಭಾಜ್ಯ ಅಂಗವಾಗಿದೆ.
ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದೆ ದೃಢ ಸಂಕಲ್ಪದಿಂದ ಇದ್ದರೆ ಜಯ ದೊರೆಯುವುದು, ಹಿಂಸೆಯ ಮಾರ್ಗವು ಯಾರಿಗೂ ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು.
Recommended Video
ಇನ್ನು ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನ ಭಟ್ಟರಹಳ್ಳಿ, RTI ಕಾರ್ಯಕರ್ತರಾದ ಶ್ರೀ ಕಂಚನಹಳ್ಳಿ ರವಿಕುಮಾರ್ ಅವರು ಎಸ್.ಆರ್.ಹಿರೇಮಠ ಅವರೊಂದಿಗೆ ಕಾರ್ಮಿಕ ಹೋರಾಟದಲ್ಲಿ ಪಾಲ್ಗೊಂಡರು.