'ಸ್ವಚ್ಛ ಸರ್ವೇಕ್ಷಣೆ-2020' ಪ್ರಶಸ್ತಿಗೆ ಆಯ್ಕೆಯಾದ ರಾಮನಗರ ನಗರಸಭೆ
ರಾಮನಗರ, ಆಗಸ್ಟ್ 21: ಕೇಂದ್ರ ಸರ್ಕಾರ ನೀಡುವ "ಸ್ವಚ್ಛ ಸರ್ವೇಕ್ಷಣೆ-2020' ಪ್ರಶಸ್ತಿಗೆ ರಾಮನಗರ ನಗರಸಭೆ ಭಾಜನವಾಗಿದೆ. ಘನತ್ಯಾಜ್ಯ ವಿಲೇವಾರಿಗಾಗಿ ಈ ವರ್ಷ ಕೇಂದ್ರ ಸರ್ಕಾರದ ಪುರಸ್ಕಾರ ಪಡೆದ ರಾಜ್ಯದ ಏಕೈಕ ನಗರಸಭೆ ಎನ್ನುವ ಹೆಗ್ಗಳಿಕೆ ರಾಮನಗರ ನಗರಸಭೆ ಪಡೆದಿದೆ.
Recommended Video
ದೇಶಾದ್ಯಂತ ಕೋವಿಡ್-19 ಆರ್ಭಟ ಮುಂದುವರೆದಿರುವ ಹಿನ್ನೆಲೆಯಲ್ಲಿ "ಸ್ವಚ್ಛ ಸರ್ವೇಕ್ಷಣೆ-2020' ಪ್ರಶಸ್ತಿಯನ್ನು ಆನ್ಲೈನ್ ಮೂಲಕ ಕೇಂದ್ರ ನಗರಾಡಳಿತ ಸಚಿವಾಲಯ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ರಾಮನಗರ ನಗರಸಭೆ ಅಧಿಕಾರಿಗಳು ಜಿಲ್ಲೆಯಲ್ಲಿನ ಎನ್ಐಸಿ ಸ್ಟುಡಿಯೋ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ವಚ್ಛ ಪರಿಸರ ನಿರ್ಮಾಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು ಪ್ರತಿ ವರ್ಷ "ಸ್ವಚ್ಛ ಸರ್ವೇಕ್ಷಣೆ' ಎಂಬ ಸಮೀಕ್ಷೆಯನ್ನು ದೇಶದಾದ್ಯಂತ ನಡೆಸುತ್ತದೆ. ಇದು ಪ್ರತಿ ನಗರ ಪ್ರದೇಶಗಳಲ್ಲಿ ನಡೆಯುತ್ತದೆ.

ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ ಪ್ರಶಸ್ತಿ
ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಪ್ರತಿ ನಗರದ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ಕೊಟ್ಟು, ಅಲ್ಲಿನ ಕಸ ವಿಲೇವಾರಿ ವಿಧಾನಗಳ ಮೌಲ್ಯಮಾಪನ ಮಾಡುವ ಜೊತೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನೂ ಕ್ರೂಢೀಕರಿಸಲಾಗುತ್ತದೆ. ಎಲ್ಲ ಅಂಶಗಳನ್ನು ಸೇರಿಸಿ ಅಂಕಗಳ ಆಧಾರದ ಮೇಲೆ ಪ್ರತಿ ವರ್ಷ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಈ ವರ್ಷ ರಾಜ್ಯದ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳು ಈ ಗೌರವಕ್ಕೆ ಪಾತ್ರವಾಗಿದೆ.

ಸಂಗ್ರಹಿಸಲಾದ ಕಸವನ್ನು ವಿಂಗಡಿಸಿ ಸೂಕ್ತ ವಿಲೇವಾರಿ
"ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಆದ್ಯತೆ ನೀಡಲಾಗಿದ್ದು, ಮನೆ ಮನೆಯಿಂದ ಕಸ ಸಂಗ್ರಹ ಕಾರ್ಯ ನಿರಂತರವಾಗಿ ನಡೆದಿದೆ. ಹೀಗೆ ಸಂಗ್ರಹಿಸಲಾದ ಕಸವನ್ನು ವಿಂಗಡಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದೆಲ್ಲವನ್ನೂ ಗಮನಿಸಿ ಕೇಂದ್ರ ಸರ್ಕಾರ ರಾಮನಗರ ನಗರ ಸಭೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ' ಎಂದು ನಗರಸಭೆ ಆಯುಕ್ತೆ ಶುಭಾ ಸಂತಸ ವ್ಯಕ್ತಪಡಿಸಿದರು.

ಹಸಿ ಕಸದಿಂದ ವಿದ್ಯುತ್ ಉತ್ಪಾದನೆ ಸಹ ಸಾಧ್ಯ
ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ ಗಳಿದ್ದು, ನಿತ್ಯ 40 ರಿಂದ 45 ಟನ್ನಷ್ಟು ಕಸ ಸಂಗ್ರಹಿಸಲಾಗುತ್ತಿದೆ. ಜೊತೆಗೆ ವಾಣಿಜ್ಯ ಪ್ರದೇಶಗಳಲ್ಲಿ ಸಂಜೆ ಹೊತ್ತಿನಲ್ಲೂ ಕಸ ಸಂಗ್ರಹ ನಡೆದಿದೆ. ಈ ಪೈಕಿ ವಾರ್ಡ್ ವ್ಯಾಪ್ತಿಯಲ್ಲೇ ನಾಲ್ಕು ಕಸ ವಿಲೇವಾರಿ ಘಟಕಗಳನ್ನು ಮಾಡಲಾಗಿದ್ದು, ಇವುಗಳಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸುವ ಪ್ರಯತ್ನ ನಡೆದಿದೆ. ಒಂದನೇ ವಾರ್ಡಿನ ದೇವರಸೇಗೌಡನ ದೊಡ್ಡಿಯಲ್ಲಿ ಮೀಥೆನ್ ಘಟಕದ ಮೂಲಕ ಹಸಿ ಕಸದಿಂದ ವಿದ್ಯುತ್ ಉತ್ಪಾದನೆ ಸಹ ಸಾಧ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರದ ತಂಡವು ಪರಿಗಣಿಸಿದ್ದು' "ಸ್ವಚ್ಛ ಸರ್ವೇಕ್ಷಣೆ- 2020' ಪ್ರಶಸ್ತಿ ಮುಡಿಗೇರಲು ನಗರಸಭೆ ಮುಡಿಗೇರಲು ಕಾರಣವಾಗಿವೆ ಎಂದರು.

ಪೌರ ಕಾರ್ಮಿಕರ ಶ್ರಮ
ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆಯುವಲ್ಲಿ ಪೌರ ಕಾರ್ಮಿಕರ ಶ್ರಮವನ್ನು ಮರೆಯುವಂತೆ ಇಲ್ಲ. ಕೊರೊನಾ ಮಹಾಮಾರಿ ನಡುವೆಯೂ ಜೀವದ ಹಂಗು ತೊರೆದು ಕೆಲಸ ನಿರ್ವಹಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರಶಸ್ತಿಗೆ ನಮ್ಮ ನಗರಸಭೆಯನ್ನು ಆಯ್ಕೆ ಮಾಡಿರುವುದು ಪೌರ ಕಾರ್ಮಿಕರ ಶ್ರಮಕ್ಕೆ ಸಿಕ್ಕ ಫಲ ಎಂದು ಪೌರ ಕಾರ್ಮಿಕರ ಅಧ್ಯಕ್ಷ ನಾಗಣ್ಣ ಹೆಮ್ಮೆ ವ್ಯಕ್ತಪಡಿಸಿದರು.
ಇನ್ನು ನಗರಸಭೆಯಲ್ಲಿ 152 ಪೌರ ಕಾರ್ಮಿಕ ಹುದ್ದೆಗಳಿದ್ದು, ಇದರಲ್ಲಿ ಸದ್ಯ 130 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 20 ಹುದ್ದೆ ಖಾಲಿ ಇವೆ. ಒಟ್ಟು 28 ವಾಹನಗಳನ್ನು ಕಸದ ವಿಲೇವಾರಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications