ಅನುದಾನ ತಡೆಹಿಡಿಯುವಂತೆ ಸಿಎಂಗೆ ಪತ್ರ: ಸಿಪಿವೈ ವಿರುದ್ಧ ದಲಿತ ಮುಖಂಡರ ಆಕ್ರೋಶ
ರಾಮನಗರ, ಅಕ್ಟೋಬರ್ 17: ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ತಾಲೂಕಿನ ದಲಿತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಂದಿದ್ದ ಅನುದಾನವನ್ನು ತಡೆ ಹಿಡಿಯುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಈ ಮೂಲಕ ಸಿ.ಪಿ.ಯೋಗೇಶ್ವರ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ತಾಲೂಕಿನ ದಲಿತ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜೆಡಿಎಸ್ ದಲಿತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ತಾಲೂಕಿನ ದಲಿತ ಸಮುದಾಯದ ಬಡವಾಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಸರ್ಕಾರ ಮುಂಜೂರು ಮಾಡಿರುವ ಅನುದಾನ ತಡೆ ಹಿಡಿಯುವಂತೆ ಸಿ.ಪಿ.ಯೋಗೇಶ್ವರ್, ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಡಾ.ಮಲ್ಲೇಶ್, ನಗರಸಭೆ ಅಧ್ಯಕ್ಷ ಪ್ರಶಾಂತ್, ಸಿದ್ದರಾಜು, ಗಂಗಾಧರ್, ಕೆಂಗಲ್ ಮೂರ್ತಿ, ಗೋವಿಂದ್ ಹಾಗೂ ಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಸಿ.ಪಿ.ಯೋಗೇಶ್ವರ್ ವಿರುದ್ಧ ದಲಿತ ಮುಖಂಡರ ಕಿಡಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಂದ ಅನುದಾನ ತಡೆಗಟ್ಟಲು ಪತ್ರ ಬರೆಯುವ ಮೂಲಕ ಸಿ.ಪಿ.ಯೋಗೇಶ್ವರ್ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಈಗಾಗಲೇ ಸುಮಾರು ಐದು ಕೋಟಿ ಅನುದಾನದಲ್ಲಿ 70% ಹಣ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಆಗಿದೆ. ಇನ್ನೇನು ಕಾಮಾಗಾರಿಗಳು ಪ್ರಾರಂಭವಾಗುವ ಹಂತದಲ್ಲಿ ಅನುದಾನ ತಡೆಗಟ್ಟಲು ಮುಂದಾಗಿರುವ ಸಿ.ಪಿ.ಯೋಗೇಶ್ವರ್ ನಡೆಯನ್ನು ಖಂಡಿಸುವುದಾಗಿ ತಿಳಿಸಿದರು.

ಸಿಪಿವೈ ಆರೋಪದ ವಿರುದ್ಧ ದಲಿತ ನಾಯಕರ ಆಕ್ರೋಶ
ಚೆನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳಲ್ಲಿ ಅಂಬೇಡ್ಕರ್ ಭವನ, ಬಾಬುಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸುಮಾರು 5 ಕೋಟಿ ಅನುದಾನವನ್ನು ಕ್ಷೇತ್ರದ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದರು. ಈ ಅನುದಾನ ತಡೆಹಿಡಿಯುವಂತೆ ಪತ್ರ ಬರೆದಿರುವ ಸಿ.ಪಿ ಯೋಗೇಶ್ವರ್ ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸುವುದಕ್ಕೆ ಈ ಅನುದಾನ ತಂದಿರುತ್ತಾರೆ. ಈ ಅನುದಾನವು ಸಾರ್ವಜನಿಕ ತೆರಿಗೆ ಹಣದಿಂದ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಸಿ.ಪಿ.ಯೋಗೇಶ್ವರ್ ಉತ್ತರಿಸುವಂತೆ ಪಟ್ಟು
ಸಿ.ಪಿ.ಯೋಗೇಶ್ವರ್ ಈ ನಡೆಯಿಂದ ಸಿಡಿದೆದ್ದಿರುವ ದಲಿತ ನಾಯಕರು, ಸಂವಿಧಾನದ ಆಶಯದಂತೆ ದಲಿತ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ನೀಡಿದರೆ ಯಾವ ರೀತಿಯಲ್ಲಿ ಜನರ ತೆರಿಗೆ ಹಣ ದುರ್ಬಳಕೆ ಯಾಗುತ್ತದೆ. ಎಂಬುದನ್ನು ದಲಿತರ ಮತ ಪಡೆದು ಇಪ್ಪತ್ತು ವರ್ಷ ಕ್ಷೇತ್ರದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ದಲಿತ ಸಮುದಾಯಕ್ಕೆ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕಾಮಗಾರಿ ಪಟ್ಟಿ ರದ್ದುಪಡಿಸಲು ಸಿಪಿವೈ ಆಗ್ರಹ
ಚನ್ನಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಿಗೆ ಡಾ. ಚಿ.ಆರ್.ಅಂಬೇಡ್ಕರ್ ಭವನಗಳು ಮತ್ತು ಡಾ| ಬಾಬು ಜಗಜೀವನ್ ರಾಂ ಭವನ ಹಾಗೂ ಮಹರ್ಷಿ ವಾಲ್ಮೀಕಿ ಭವನ ಮತ್ತು ಇತರೆ ಸಮುದಾಯ ಭವನಗಳನ್ನು ನಿರ್ಮಾಣ ಮಾಡುವುದಕ್ಕೆ ಅನುದಾನ ತರಲಾಗಿದೆ. ಕಾಮಗಾರಿಗಳ ಪಟ್ಟಿಯಲ್ಲಿ ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸುವುದಕ್ಕೆ ಈ ಅನುದಾನ ತಂದಿರುತ್ತಾರೆ. ಈ ಅನುದಾನದಿಂದ ಸಾರ್ವಜನಿಕ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಶಾಸಕರಿಂದ ಪಡೆದಿರುವ ಕಾಮಗಾರಿಗಳ
ಪಟ್ಟಿಯನ್ನು ರದ್ದುಪಡಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications