ಡ್ರಾಪ್ ಕೊಡುವುದಾಗಿ ನಂಬಿಸಿ ಅಮಾಯಕರಿಂದ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ
ರಾಮನಗರ, ಅಕ್ಟೋಬರ್ 5: ರಾತ್ರಿ ವೇಳೆ ಡ್ರಾಪ್ ನೀಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನಾಪ್ ಮಾಡಿ ಚಾಕು, ನಕಲಿ ಗನ್ ತೋರಿಸಿ ಅವರಿಂದ ಹಣ ಒಡವೆಗಳನ್ನು ಸುಲಿಗೆ ಮಾಡುತ್ತಿದ್ದ ಖದೀಮರ ತಂಡವನ್ನು ರಾಮನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೆಂಗಳೂರು ನಗರದ ಸಿದ್ದಾಪುರ, ಜಯನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಮೋಜು, ಮಸ್ತಿ, ಶೋಕಿಗಾಗಿ ಅಮಾಯಕರನ್ನು ಸುಲಿಗೆ ಮಾಡುತ್ತಿದ್ದ ಸಲೀಂ ಪಾಷ, ಅಬ್ದುಲ್ ಸುಲೆಮಾನ್ ಮತ್ತು ರಾಜೇಶ್ ರಾಯ್ ಎಂಬ ಮೂವರು ಖದೀಮರನ್ನು ಬಂಧಿಸಲಾಗಿದೆ.
ಆರೋಪಿಗಳು ಶುಕ್ರವಾರ ಬೆಳಗ್ಗಿನ ಜಾವ ಕೆಆರ್ ಪುರಂ ಬಳಿಯಿಂದ ನಾಗರಾಜ್ ಎಂಬುವವರನ್ನು ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ರಾಮನಗರದ ಕಡೆ ಬರುವಾಗ ಬಿಡದಿಯ ಬೈರಮಂಗಲ ಚೆಕ್ ಪೋಸ್ಟ್ ಬಳಿ ಪೊಲೀಸರನ್ನು ಕಂಡ ನಾಗರಾಜ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆಗ ಕರ್ತವ್ಯದಲಿದ್ದ ಪೊಲೀಸ್ ಸಿಬ್ಬಂದಿ ಕಾರನ್ನು ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದೇ ಆರೋಪಿಗಳು ಸೆಪ್ಟೆಂಬರ್ 22ರಂದು ಜೋಸೆಫ್ ಮ್ಯಾಥ್ಯೂ ಎಂಬುವರನ್ನು ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಬಳಿ ಡ್ರಾಪ್ ನೀಡುವುದಾಗಿ ನಂಬಿಸಿ ಕಾರಿಗೆ ಹತ್ತಿಸಿಕೊಂಡು ನಂತರ ಚಾಕು, ಗನ್ ತೋರಿಸಿ ಅವರ ಬಳಿ ಇದ್ದ ಹಣ, ಚೈನ್, ಒಡವೆ ಕಿತ್ತುಕೊಂಡು ಅವರ ಕೈಯಿಂದ ಎಟಿಎಂ ನಿಂದ 24000 ರೂಪಾಯಿ ಡ್ರಾ ಮಾಡಿಸಿಕೊಂಡು ನಂತರ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿ ಅವರನ್ನು ಬಿಡದಿ ಬಳಿಯ ಶೇಷಗಿರಿಹಳ್ಳಿ ಬಳಿ ಕಾರಿನಿಂದ ಹೊರದಬ್ಬಿ ಪರಾರಿಯಾಗಿದ್ದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಫಿಸ್ಟ್ ಕಾರು, ಚಾಕು, ನಕಲಿ ಗನ್, ಫೋನ್ ಮತ್ತು 14.600 ರೂ ನಗದಮ್ಮಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖದೀಮರ ಬಂಧನದಿಂದ ಬಿಡದಿ ಪೊಲೀಸ್ ಠಾಣೆ ಮತ್ತು ಸಂಪಿಗೆ ನಗರ ಪೊಲೀಸ್ ಠಾಣೆಯ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications