ಪಿಎಸ್ಐ ನೇಮಕಾತಿ ಹಗರಣ; ದರ್ಶನ್ ಗೌಡ ತಂದೆ ಪ್ರತಿಕ್ರಿಯೆ
ರಾಮನಗರ, ಮೇ 02; ಪಿಎಸ್ಐ ನೇಮಕಾತಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದು ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್ನ ಜೆಡಿಎಸ್ ಮುಖಂಡ ಹಾಗೂ ಮಾಗಡಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪುತ್ರ ದರ್ಶನ್ ಗೌಡ ಈಗ ಹಗರಣದಲ್ಲಿ ತಳುಕು ಹಾಕಿಕೊಂಡಿದೆ
ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಸಹೋದರ ಸತೀಶ್ ಗೌಡ ಭಾಗಿಯಾಗಿದ್ದಾರೆ. ಪಿಎಸ್ಐ ಪರೀಕ್ಷೆಯಲ್ಲಿ 5 ನೇ ಶ್ರೇಯಾಂಕ ಪಡೆದಿರುವ ಮಾಗಡಿಯ ದರ್ಶನ್ ಗೌಡ ಎಂಬ ಅಭ್ಯರ್ಥಿಯಿಂದ 80 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ವಿ. ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಮಾಗಡಿಯ ದರ್ಶನ್ ಗೌಡ ತಂದೆ ವೆಂಕಟೇಶ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು , ನಾವು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ನಾಯಕರು ತಮ್ಮ ರಾಜಕೀಯ ಹಗೆತನಕ್ಕೆ ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ನನ್ನ ಮಗ ದರ್ಶನ್ ಗೌಡ ಪಿಎಸ್ಐ ಪರಿಕ್ಷೇ ಬರೆದು 5ನೇ ಶ್ರೇಯಾಂಕ ಪಡೆದಿರುವುದು ನಿಜ. ನಮ್ಮ ಮಗನಿಗೆ ಸಿಐಡಿ ನೋಟಿಸ್ ಕೊಟ್ಟಿದ್ದಾರೆ. ನಮ್ಮ ಮಗ ಸಿಐಡಿ ವಿಚಾರಣೆ ಎದುರಿಸಿದ್ದಾನೆ. ಆತನ ಓಎಮ್ಆರ್ ಶೀಟ್, ಹಾಲ್ ಟಿಕೆಟ್ ಹಾಜರು ಮಾಡಿದ್ದಾನೆ ತನಿಖೆ ನಡೆಯುತ್ತಿದೆ. ನಮ್ಮ ತಪ್ಪಿದ್ದರೆ ಶಿಕ್ಷೆಯಾಗಲಿ" ಎಂದು ವೆಂಕಟೇಶ ಹೇಳಿದರು.
"ಮಾಜಿ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷನಾಗಿ ನಾನು ರಾಜಕೀಯ ಜೀವನದಲ್ಲಿ ಇದ್ದೇನೆ. ನನಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಹಾಗೂ ಅವರ ತಮ್ಮ ಸತೀಶ್ ಗೌಡ ಇಬ್ಬರು ಪರಿಚಯಸ್ಥರು. ಆದರೆ ನಾನು ನಮ್ಮ ಮಗನ ಕೆಲಸದ ವಿಚಾರದಲ್ಲಿ ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಅಲ್ಲದೇ ನನಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪರಿಚಯ ಕೂಡ ಇದೆ. ಹಿಂದೆ ಎಸ್. ಎಂ. ಕೃಷ್ಣ ಅವರು ಕಾಂಗ್ರೆಸ್ನಲ್ಲಿದ್ದ ಅವಧಿಯಲ್ಲಿ ನನ್ನ ಮನೆಯಲ್ಲೇ ಡಿ. ಕೆ. ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಇಂದು ಡಿಕೆಶಿಯವರು ನನ್ನ ಗುರುತು ಹಿಡಿಯುವುದಿಲ್ಲ" ಎಂದರು.

"ನಾನು ಬಹಳ ಹಿಂದಿನಿಂದಲ್ಲೂ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಎಲ್ಲಾ ನಾಯಕರ ಪರಿಚಯ ಇದೆ . ನಮ್ಮ ಮನೆಗೆ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. ನಾನು ಸದ್ಯ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ" ಎಂದು ವೆಂಕಟೇಶ ತಿಳಿಸಿದರು.
"1994ರಿಂದಲ್ಲೂ ನಾನು ರಾಜಕೀಯದಲ್ಲಿ ಇದ್ದೇನೆ. 94ರಲ್ಲಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದೆ. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. 2004 ರಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದೆ ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿ ಇದ್ದೇನೆ. ನಾನು ಯಾರೊಂದಿಗೂ ಹಣದ ವ್ಯವಹಾರ ಮಾಡಿಲ್ಲ ಅವರವರ ರಾಜಕೀಯದ ಹಗೆತನಕ್ಕೆ ನಮ್ಮನ್ನು ಬಲಿಪಶು ಮಾಡಿದ್ದಾರೆ" ಎಂದು ವೆಂಕಟೇಶ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications