ಚನ್ನಪಟ್ಟಣದಲ್ಲಿ ತಡರಾತ್ರಿ ಫೈರಿಂಗ್; ಮರ್ಡರ್ ಮಾಡಲು ಬಂದಿದ್ದ ರೌಡಿ
ರಾಮನಗರ, ಮಾರ್ಚ್ 13: ಎಸಿಪಿ ಗೋಪಾಲ್ ಸಹೋದರಿ ಸುವರ್ಣ ಅವರ ಮನೆ ದರೋಡೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿ ರಮೇಶ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆ ಸಂದರ್ಭ ತಡರಾತ್ರಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರು ಗ್ರಾಮದ ಬಳಿ ಚನ್ನಪಟ್ಟಣ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ವಸಂತ್ ಕುಮಾರ್, ಆರೋಪಿ ರಮೇಶ್ ಅಲಿಯಾಸ್ ಜಾಕಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.
ಕಳೆದ ವಾರವಷ್ಟೆ ಚನ್ನಪಟ್ಟಣ ನಗರದ ಕೆಎಚ್ ಬಿ ಕಾಲೋನಿಯಲ್ಲಿ ಎಸಿಪಿ ಗೋಪಾಲ್ ಸಹೋದರಿ ಸುವರ್ಣ ಅವರ ಮನೆಗೆ ನುಗ್ಗಿ ದರೋಡೆ ನಡೆಸಲಾಗಿತ್ತು. ಮನೆಗೆ ನುಗ್ಗಿ ಲಾಂಗ್ ತೋರಿಸಿ ರಮೇಶ್ ಎಂಬಾತ ದರೋಡೆ ಮಾಡಿದ್ದು, ಪ್ರಕರಣ ಸಂಬಂಧ ಆರೋಪಿ ಬಂಧನವಾಗಿತ್ತು. ಈ ಕುರಿತು ತನಿಖೆಗೆಂದು ಚಿಕ್ಕಮಳೂರು ಗ್ರಾಮದ ಬಳಿ ಹೋಗುವಾಗ ಹೆಡ್ ಕಾನ್ ಸ್ಟೆಬಲ್ ನಾಗರಾಜ್ ಮೇಲೆ ಹಲ್ಲೆ ಮಾಡಿ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಇನ್ಸ್ ಪೆಕ್ಟರ್ ವಸಂತ್ ಕುಮಾರ್ ಗುಂಡು ಹಾರಿಸಿದ್ದಾರೆ.

ಆರೋಪಿ ರಮೇಶನ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ. ಚನ್ನಪಟ್ಟಣದ ರೌಡಿಶೀಟರ್ ಧ್ರುವನನ್ನು ಕೊಲೆ ಮಾಡಲು ಚನ್ನಪಟ್ಡಣಕ್ಕೆ ಸಹಚರರೊಂದಿಗೆ ಆಗಮಿಸಿದ್ದಾಗಿ ಬಂಧಿತ ರಮೇಶ್ ಹೇಳಿದ್ದಾನೆ. ರೌಡಿ ಲಕ್ಷ್ಮಣನ ಕೊಲೆ ಆರೋಪಿ ಕ್ಯಾಟ್ ಗೆ ಧ್ರುವ ಫೈನಾನ್ಸ್ ಮಾಡಿದ್ದರಿಂದ ಸೇಡು ತೀರಿಸಿಕೊಳ್ಳಲು ಆತನ ಕೊಲೆಗೆ ಸ್ಕೆಚ್ ಹಾಕಲಾಗಿತ್ತೆಂದು ರಮೇಶ್ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಗಾಯಾಳು ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಾಜು ಅವರನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಮನಗರ ಎಸ್ ಪಿ ಡಾ.ಅನೂಪ್ ಎ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಮೇಶ್ ಅಲಿಯಾಸ್ ಜಾಕಿ ಮೇಲೆ ಬೆಂಗಳೂರು ನಗರ, ಶಿವಮೊಗ್ಗ, ಬಂಟ್ವಾಳ ಸೇರಿದಂತೆ ಕೊಲೆ, ಸುಲಿಗೆ ಮತ್ತಿತರ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.












Click it and Unblock the Notifications