ರಾಮನಗರದ ಮಿನಿ ವಿಧಾನಸೌಧದದಲ್ಲಿ ಕಗ್ಗತ್ತಲು: ಜನರ ಆಕ್ರೋಶ
ರಾಮನಗರ, ಅಕ್ಟೋಬರ್ 27: ರಾಮನಗರ ತಾಲೂಕಿನ ಶಕ್ತಿ ಕೇಂದ್ರ ಮಿನಿವಿಧಾನಸೌಧ ಕಗ್ಗತ್ತಲಿನಲ್ಲಿ ಮುಳುಗಿತ್ತು. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೊ ವಾಕ್ಯವನ್ನು ಮರೆತಿರುವ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಪ್ರತಿನಿತ್ಯದಂತೆ ತಮ್ಮ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕಛೇರಿಗೆ ಬಂದ ಜನರಿಗೆ ಶಾಕ್ ಕಾದಿತ್ತು. ರಾಮನಗರದ ತಾಲ್ಲೂಕು ಕಚೇರಿ ಒಳಗೊಂಡಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ಕಳೆದ ಮೂರು ತಿಂಗಳು ಬಳಕೆಯಾದ ವಿದ್ಯುತ್ನ ಬಿಲ್ 76 ಸಾವಿರ ರೂಪಾಯಿ ಪಾವತಿಸಿರಲಿಲ್ಲ. ಆದ್ದರಿಂದ ಅ.26ರ ಬೆಳಿಗ್ಗೆ ಬೆಸ್ಕಾಂ ಅಧಿಕಾರಿಗಳು ತಾಲ್ಲೂಕು ಕಛೇರಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ತಹಶೀಲ್ದಾರ್ ಮೀಟಿಂಗ್ ಗೆ ತೆರಳಿದ್ದಾರೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. 33 ಸಾವಿರದ ಚೆಕ್ ರೆಡಿ ಇದೆ ಸಾಬೇಬರು ಬಂದು ಚೆಕ್ಗೆ ಸಹಿ ಮಾಡಿದ ತಕ್ಷಣ ಬಿಲ್ ಪಾವತಿಸುತ್ತೆವೆ. ಅದನ್ನು ಹೊರತುಪಡಿಸಿ ನಮಗೇನು ಗೊತ್ತಿಲ್ಲ ಎನ್ನುತ್ತಾರೆ ಉಪತಹಶೀಲ್ದಾರ್. ಕಟ್ಟಡದ ನೆಲ ಮಹಡಿಯಲ್ಲಿ ಮೂರು ಜನರೇಟರ್ ಗಳಿದ್ದರೂ ಅವುಗಳನ್ನು ಬಳಸುವ ಬಗ್ಗೆ ಅಧಿಕಾರಿಗಳು ಚಿಂತಿಸಿಲ್ಲ.
ಜನರೇಟರ್ ಇದ್ದು ಜನಸಮಾನ್ಯರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೆ ಆಡಳಿತ ವೆಚ್ಚ ದುಬಾರಿಯಾಗುತ್ತದೆ ಆದ್ದರಿಂದ ಜನರೇಟರ್ ಬಳಸುತ್ತಿಲ್ಲ ಎಂಬ ಸಬೂಬು ನೀಡುತ್ತಿದ್ದಾರೆ. ಮಿನಿವಿಧಾನಸೌಧದ ಕಟ್ಟಡದಲ್ಲಿನ ಪಹಣಿ, ಆಧಾರ್ ಅಲ್ಲದೇ ಕಚೇರಿಯ ಎಲ್ಲ ವಿಭಾಗದಲ್ಲೂ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದರಿಂದ ಬೆಳಿಗ್ಗೆ ಪಹಣಿ, ಆಧಾರ ಸೇರಿದಂತೆ ತಾಲ್ಲೂಕು ಕಚೇರಿಗೆ ಕೆಲಸ ನಿಮಿತ್ತ ಬಂದಿದ್ದ ಹಲವರು ಮಧ್ಯಾಹ್ನದ ತನಕ ಕಾದು ಕಾದು ರೋಸಿ ಹೋದರು.

ಇರುವ ಕೆಲಸ-ಕಾರ್ಯಗಳೆಲ್ಲವನ್ನು ಬಿಟ್ಟು ಕಚೇರಿಗೆ ಬಂದ್ರೆ ಹೀಗೆ ವಿದ್ಯುತ್ ಇಲ್ಲ ಎಂದು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಾರೆ ಜನರಿಂದ ಎಲ್ಲಾ ಸೇವೆಗಳಿಗೂ ಹಣ ಪಾವತಿಸಿಕೊಳ್ಳುವ ಆಡಳಿತ ವಿದ್ಯುತ್ ಬಿಲ್ ಪಾವತಿಸದಿರುವುದು ಬೇಜವಾಬ್ದಾರಿತನವಲ್ಲವೆ ಎಂಬುದು ಜನರ ಪ್ರಶ್ನೆ. ಮಧ್ಯಾಹ್ನದ ಬಳಿಕ ತಾಲ್ಲೂಕು ಆಡಳಿತದಿಂದ 33 ಸಾವಿರ ರೂಪಾಯಿಗಳನ್ನು ಪಾವತಿಸಿದ ಬಳಿಕ ಮತ್ತೆ ವಿದ್ಯುತ್ ಸಂಪರ್ಕ ನೀಡಿದರು.












Click it and Unblock the Notifications