ರಾಮನಗರ: ಮದುವೆಗೆ ಒಪ್ಪದ ಪೋಷಕರು; ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ರಾಮನಗರ, ಡಿಸೆಂಬರ್ 21: ಅಪ್ರಾಪ್ತ ವಯಸ್ಸಿನಲ್ಲಿ ಪ್ರೇಮ ಪಾಷಕ್ಕೆ ಸಿಲುಕಿದ ಪ್ರೇಮಿಗಳಿಬ್ಬರು ಪೋಷಕರಿಗೆ ಹೆದರಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ರಾಮನಗರದ ರಾಮದೇವರ ಬೆಟ್ಟದ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ರಾಮನಗರದ 1ನೇ ವಾರ್ಡ್ನ ಚಾಮುಂಡಿಪುರ ಬಡಾವಣೆಯ ನಿವಾಸಿ ಹರೀಶ್ (26) ಹಾಗೂ ಕಸಬಾ ಹೋಬಳಿಯ ಗುಡ್ಡದಹಳ್ಳಿ ಗ್ರಾಮದ ಕಾವ್ಯ (16) ಇಬ್ಬರು ಒಟ್ಟಿಗೆ ಸಾವಿಗೆ ಶರಣಾದ ಪ್ರೇಮಿಗಳಾಗಿದ್ದಾರೆ.
ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ NH-275 ಸಮೀಪದ ಶ್ರೀರಾಮದೇವರ ಬೆಟ್ಟದ ಪಕ್ಕದ ಅರಣ್ಯ ಪ್ರದೇಶದ ಮರದ ಕೊಂಬೆಗೆ ಒಟ್ಟಿಗೆ ನೇಣು ಬಿಗಿದುಕೊಂಡು ಹರೀಶ್ ಮತ್ತು ಕಾವ್ಯ ಸಾವನ್ನಪ್ಪಿದ್ದಾರೆ.

ಚಾಲಕನಾಗಿ ಕೆಲಸ ಮಾಡುತ್ತಿದ್ದ ಹರೀಶ್ ತನ್ನ ಸಂಬಂಧಿ ಅಪ್ರಾಪ್ತ ಯುವತಿ ಕಾವ್ಯಳನ್ನು ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದು, ಭಾನುವಾರ ಕಾವ್ಯ ತನ್ನ ಮನೆ ತೊರೆದು ಹರೀಶ್ನ ಬಳಿ ಬಂದಿದ್ದಾಳೆ. ಹರೀಶ್ ಪೋಷಕರು ಇಬ್ಬರಿಗೂ ಬುದ್ಧಿ ಹೇಳಿ ಮನೆಯವರನ್ನು ಒಪ್ಪಿಸಿ ಮದುವೆ ಮಾಡುವುದಾಗಿ ತಿಳಿಸಿದ್ದಾರೆ.
ಪೋಷಕರ ಮಾತಿಗೆ ಒಪ್ಪಿದ ಹರೀಶ್ ಕಾವ್ಯಳನ್ನು ಅವರ ಮನೆಗೆ ಬಿಟ್ಟು ಬರುತ್ತೇನೆ ಎಂದು ತಿಳಿಸಿಹೋದ ಇಬ್ಬರು ಪ್ರೇಮಿಗಳು, ಭಾನುವಾರ ಸಂಜೆ ವೇಳೆಗೆ ನಿರ್ಜನ ಪ್ರದೇಶಕ್ಕೆ ತೆರಳಿ ಹರೀಶ್ ಲುಂಗಿ ಬಳಸಿ ಮತ್ತು ಕಾವ್ಯ ತಾನು ಹಾಕಿದ್ದ ಚೂಡಿದಾರದ ವೇಲ್ನಲ್ಲಿ ನೇಣು ಹಾಕಿಕೊಂಡಿದ್ದಾರೆ. ಇಂದು ಸೋಮವಾರ ಬೆಳಗ್ಗೆ ದನ ಮೇಯಿಸಲು ಜನರು ಹೋದಾಗ ನೇಣು ಬೀಗಿದಿರುವ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.
ಫಲ ನೀಡದ ಪೊಲೀಸರು ಮತ್ತು ಪೋಷಕರ ಹುಡುಕಾಟ
ಕಾವ್ಯಳನ್ನು ಮನೆಗೆ ಬಿಟ್ಟು ಬರುವುದಾಗಿ ತಿಳಿಸಿ ಮನೆ ಬಿಟ್ಟ ಹರೀಶ್, ಸಂಜೆ ವೇಳೆಗೆ ತನ್ನ ಮೊಬೈಲ್ನಲ್ಲಿ ತಮ್ಮದೇ ಫೋಟೋ ಹಾಕಿ "RIP' ಎಂದು ಸ್ಟೇಟಸ್ ಹಾಕಿಕೊಂಡಿದ್ದಾನೆ. ನಂತರ ಗೆಳೆಯರಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಫೋನ್ ಕಟ್ಟ ಮಾಡಿದ್ದಾನೆ.

ಹರೀಶ್ ಮಾಡಿದ ವಿಡಿಯೋ ಕಾಲ್ ಮತ್ತು ಸ್ಟೇಟಸ್ ನೋಡಿದ ಹರಿಶ್ ಸ್ನೇಹಿತರು ಮತ್ತು ಸಂಬಂಧಿಕರು ಸಾಕಷ್ಟು ಹುಡುಕಾಡಿ, ಹರೀಶ್ ಮೊಬೈಲ್ಗೆ ಕಾಲ್ ಮಾಡಿದ್ದಾರೆ. ಆದರೆ ಹರೀಶ್ ಫೋನ್ ರಿಸೀವ್ ಮಾಡಿಲ್ಲ. ಇದರಿಂದ ದಿಗಿಲುಗೊಂಡ ಗೆಳೆಯರು ಮತ್ತು ಸಂಬಂಧಿಕರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು, ಹರೀಶ್ ಮೊಬೈಲ್ ನೆಟ್ವರ್ಕ್ ಟ್ರ್ಯಾಕ್ ಮಾಡಿ ಲೋಕೆಷನ್ ಪತ್ತೆ ಹಚ್ಚಿ ಹರೀಶ್ನ ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಪ್ರೇಮಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ ಮೊಬೈಲ್ ಲೋಕೆಷನ್ ಸಿಕ್ಕ ಜಾಗದಲ್ಲಿ ತಡರಾತ್ರಿಯವರೆಗೂ ಶೋಧ ನಡೆಸಿದರೂ ಹರೀಶ್ ಮತ್ತು ಕಾವ್ಯ ಪತ್ತೆಯಾಗಿರಲಿಲ್ಲ.
ಮಧ್ಯರಾತ್ರಿ ವೇಳೆಗೆ ಹರೀಶ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ನಂತರ ಹರೀಶ್ ಗೆಳೆಯರು, ಸಂಬಂಧಿಕರು ಮತ್ತು ಪೋಲಿಸರು ಶೋಧ ನಡೆಸಿದ ಸಮೀಪದಲ್ಲೇ ಹರೀಶ್ ಮತ್ತು ಕಾವ್ಯ ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನು ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Recommended Video
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications