ರಮೇಶ್ ಕೊನೆ ಮಾತು ನೆನಪಿಸಿಕೊಂಡ ಜಿ. ಪರಮೇಶ್ವರ
ರಾಮನಗರ, ಅಕ್ಟೋಬರ್ 13 : ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಪ್ತ ಸಹಾಯಕನ ಕೊನೆಯ ಮಾತುಗಳನ್ನು ನೆನಪು ಮಾಡಿಕೊಂಡು ಭಾವುಕರಾದರು. ಶನಿವಾರ ಆತ್ಮಹತ್ಯೆಗೆ ಶರಣಾದ ರಮೇಶ್ ಅಂತ್ಯಕ್ರಿಯೆ ಇಂದು ನಡೆಯಿತು.
ರಾಮನಗರ ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ಭಾನುವಾರ ರಮೇಶ್ (36) ಅಂತ್ಯಕ್ರಿಯೆ ನಡೆಯಿತು. ಡಾ. ಜಿ. ಪರಮೇಶ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿನ ನಮನವನ್ನು ಸಲ್ಲಿಸಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಪರಮೇಶ್ವರ, "ರಮೇಶ್ ಆತ್ಮಹತ್ಯೆಯಿಂದ ತುಂಬಾ ನೋವಾಗಿದೆ. ಚಿಕ್ಕವಯಸ್ಸಿಗೆ ಹೀಗಾಗಬಾರದಿತ್ತು. ತನ್ನ ಕೆಲವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದ. ಬೇರೆ ಯಾವ ವಿಚಾರಕ್ಕೂ ತಲೆ ಹಾಕುತ್ತಿರಲಿಲ್ಲ" ಎಂದರು.

"ಐಟಿ ಅಧಿಕಾರಿಗಳು ರಮೇಶ್ನನ್ನು ಕರೆದುಕೊಂಡು ಹೋಗಿದ್ದರು. ಪಂಚನಾಮೆ ಮಾಡಿದ ಮೇಲೆ ಅವನನ್ನು ಕರೆದು ಮಾತನಾಡಿಸಿ ಧೈರ್ಯವಾಗಿರು ಏನೂ ಆಗಲ್ಲ ಎಂದು ಹೇಳಿದ್ದೆ" ಎಂದು ಪರಮೇಶ್ವರ ಹೇಳಿದರು.
"ಮನೆಗೆ ಹೋಗಿ ಬರುತ್ತೀನಿ ಅಣ್ಣ" ಎಂದು ಹೇಳಿದ್ದೆ ಅವನ ಕೊನೆ ಮಾತು ಎಂದು ನೆನಪು ಮಾಡಿಕೊಂಡ ಜಿ. ಪರಮೇಶ್ವರ ಭಾವುಕರಾದರು.
36 ವರ್ಷದ ರಮೇಶ್ ರಾಮನಗರ ತಾಲೂಕಿನ ಮೆಳೇಹಳ್ಳಿ ಗ್ರಾಮದವರು. ಎಸ್ಎಸ್ಎಲ್ಸಿ ಓದಿದ್ದ ಅವರು ಪರಮೇಶ್ವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ವಾರಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು.
ರಮೇಶ್ ತಂದೆ ಸಂಪಂಗಯ್ಯ, ತಾಯಿ ಸಾವಿತ್ರಮ್ಮ ಊರಿನಲ್ಲಿದ್ದರು. ವಿಧಾನಸೌಧದ ಬಳಿ ಟೈಪಿಂಗ್ ಕೆಲಸ ಮಾಡುತ್ತಿದ್ದ ರಮೇಶ್ರನ್ನು ಸಹೋದರ ಸತೀಶ್ ಕೆಪಿಸಿಸಿ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಸೇರಿಸಿದ್ದರು. ಅಲ್ಲಿಯೇ ಪರಮೇಶ್ವರ ಪರಿಚಯವಾಗಿತ್ತು.
ಶನಿವಾರ ಬೆಳಗ್ಗೆ 9 ಗಂಟೆಗೆ ಸ್ನೇಹಿತನಿಗೆ ಕರೆ ಮಾಡಿದ್ದ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದರು. ಮಧ್ಯಾಹ್ನದ ವೇಳೆಗೆ ಅವರ ಶವ ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.












Click it and Unblock the Notifications