ದುಡ್ಡಿಗಾಗಿ ಕೊಲೆ ಮಾಡಿದ್ದ ಹೊಸ ಮದುವೆ ಗಂಡು ಕಂಬಿ ಹಿಂದೆ
ರಾಮನಗರ, ಫೆಬ್ರವರಿ 27: ಪ್ರೀತಿಸಿದವಳೊಂದಿಗೆ ಮದುವೆಯಾಗಲು ಹಣ ಹೊಂದಿಸುವ ಸಲವಾಗಿ ಮಹಿಳೆಯೊಬ್ಬರನ್ನು ಕೊಲೆ ಮಾಡಿ, ಚಿನ್ನಾಭರಣ ಕದ್ದು ಗೆಳತಿಯೊಂದಿಗೆ ಸಪ್ತಪದಿ ತುಳಿದ ಘಟನೆ ಬಯಲಾಗಿದೆ. ಇದೀಗ ಮದುವೆ ಆಗಿ ವಾರ ಕಳೆಯುವುದರೊಳಗೆ ನವವಿವಾಹಿತ ಪೊಲೀಸರ ಅತಿಥಿಯಾಗಿದ್ದಾನೆ.
ಚನ್ನಪಟ್ಟಣದ ಬೇವೂರು ಮಂಡ್ಯ ಗ್ರಾಮದಲ್ಲಿ ಇದೇ ಫೆಬ್ರವರಿ ಹದಿನೈದರಂದು ಚಿನ್ನದ ಆಭರಣಕ್ಕಾಗಿ ಒಂಟಿ ಮಹಿಳೆ ಕೊಲೆ ಮಾಡಿದ್ದ ಅದೇ ಗ್ರಾಮದ ನಾಗೇಶ್. ಇದೀಗ ಆ ಯುವಕನನ್ನು ಬಂಧಿಸುವಲ್ಲಿ ಎಂ.ಕೆ.ದೊಡ್ಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಿಳೆಯನ್ನು ಕೊಂದು ಚಿನ್ನ ಕದ್ದ ದುಷ್ಕರ್ಮಿಗಳಿಂದ ಗುಂಡು ಪಾರ್ಟಿ
ಬೇವೂರು ಮಂಡ್ಯ ಗ್ರಾಮದ ಮನೆಯಲ್ಲಿ ವಾಸವಿದ್ದ ಒಂಟಿ ಮಹಿಳೆ ಸರೋಜಮ್ಮಳನ್ನು ಕೊಲೆ ಮಾಡಲಾಗಿತ್ತು. ಬಂಧಿತ ಆರೋಪಿ ನಾಗೇಶ್ ಮದುವೆಯಾಗಲು ಹಣವಿಲ್ಲದ ಕಾರಣಕ್ಕಾಗಿ ಸರೋಜಮ್ಮರನ್ನು ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ನಾಗೇಶ್ಗೆ ಈಗಾಗಲೇ ಮದುವೆಯಾಗಿ ಒಬ್ಬ ಮಗನಿದ್ದ. ಪತ್ನಿಯು ಈತನನ್ನು ಬಿಟ್ಟು ಹೋಗಿದ್ದಳು. ಆ ನಂತರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕುರುಬರಹಳ್ಳಿಯಲ್ಲಿ ಮನೆ-ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಇದೇ ಸಮಯದಲ್ಲಿ ಯುವತಿಯೊಬ್ಬಳನ್ನು ಪ್ರೀತಿಸಿ, ಎರಡನೇ ಮದುವೆಯಾಗಲು ಮುಂದಾಗಿದ್ದ. ಅದಕ್ಕಾಗಿ ಹಣದ ಅವಶ್ಯಕತೆ ಇದ್ದ ಕಾರಣ ಸರೋಜಮ್ಮಳ ಬಳಿ ಇದ್ದ ಒಡವೆ, ಹಣದ ಆಸೆಯಿಂದ ಆರೋಪಿ ನಾಗೇಶ್ ಟವೆಲ್ ನಿಂದ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿ, ಚಿನ್ನಾಭರಣ ಕಳವು ಮಾಡಿದ್ದ.
ಆ ನಂತರ ಕದ್ದ ಚಿನ್ನಾಭರಣಗಳನ್ನು ಬೆಂಗಳೂರಿನಲ್ಲಿ ಒಂದು ಲಕ್ಷ ರುಪಾಯಿಗೆ ಗಿರವಿ ಇಟ್ಟು, ಫೆಬ್ರವರಿ ಹದಿನೆಂಟನೇ ತಾರೀಕು ಮುಡುಕುತೊರೆಯ ಕಲ್ಯಾಣಮಂಟಪದಲ್ಲಿ ಎರಡನೇ ಮದುವೆ ಮಾಡಿಕೊಂಡು, ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದ.
ಇತ್ತ ಕೊಲೆ ಆರೋಪಿಯ ಜಾಡು ಹಿಡಿದ ಪೊಲೀಸರು ಬೆಂಗಳೂರಿನಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಎಂಬತ್ತು ಗ್ರಾಂ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.