ಡಿಕೆಶಿ ಬೆಂಬಲಿಗರು ನನಗೆ ಬೆದರಿಕೆ ಹಾಕ್ತಾರೆ: ನಂದಿನಿ ಗೌಡ
ರಾಮನಗರ, ಮೇ. 07 : ಸಚಿವ ಡಿ.ಕೆ. ಶಿವಕುಮಾರ್ ಅವರ ಸ್ವಗ್ರಾಮ ದೊಡ್ಡಾಲಹಳ್ಳಿ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ಹೋದಾಗ ಅವರ ಬೆಂಬಲಿಗರು ನನಗೆ ಬೆದರಿಕೆ ಹಾಕಿದರು ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂದಿನಿಗೌಡ ಗಂಭೀರ ಆರೋಪ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು. ಬಂದು ವೋಟ್ ಕೇಳ್ಕೊಂಡ್ ಹೋಗ್ಬೇಕು ಅಷ್ಟೇ, ಬೇರೆ ಮಾತನಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ.
ಕನಕಪುರ : ಡಿಕೆ ಶಿವಕುಮಾರ್ ವಿರುದ್ಧ ನಂದಿನಿ ಗೌಡ ಸ್ಪರ್ಧೆ
ನಾವು ಬ್ರಿಟಿಷ್ ಕಾಲದಲ್ಲಿ ಇಲ್ಲ. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಕನಕಪುರದಲ್ಲಿ ಮಾತನಾಡುವ ಸ್ವಾತಂತ್ರ್ಯವಿಲ್ಲ, ಕನಕಪುರ ತಾಲೀಬಾನ್, ಜಮ್ಮುಕಾಶ್ಮೀರದ ರೀತಿಯಾಗಿದೆ ಎಂದು ಟೀಕಿಸಿದರು. ಇನ್ನು ಕನಕಪುರ ಕ್ಷೇತ್ರ ಡಿ.ಕೆ.ಸಹೋದರರ ಕಪಿಮುಷ್ಟಿಯಲ್ಲಿದೆ. ಅವರ ಬೆಂಬಲಿಗರ ಬೆದರಿಕೆಗೆ ನಾವು ಜಗ್ಗಲ್ಲ ಎಂದು ತಿಳಿಸಿದರು.
ಕಳೆದ 25 ವರ್ಷದಲ್ಲಿ ಕನಕಪುರ ಕ್ಷೇತ್ರದಲ್ಲಿ ಬೇಕಾದಷ್ಟು ಭ್ರಷ್ಟಚಾರ ನಡೆದಿದೆ. ಆದರೂ ನಮಗೆ ಮತ ಹಾಕಬೇಕೆಂಬ ಡಿಕೆಶಿ ಸಹೋದರರ ಧೋರಣೆ ಸರಿಯಿಲ್ಲ. ಕನಕಪುರದಲ್ಲಿ ಹಿಟ್ಲರ್ ಸಂಸ್ಕೃತಿ ಇದೆ. ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇಲ್ಲ, ಕನಕಪುರವನ್ನು ಅವರಿಗೆ ಬರೆದುಕೊಟ್ಟಿದ್ದೀವ ಎಂದು ಪ್ರಶ್ನೆ ಮಾಡಿದರು.
ಇನ್ನು ಈ ಬಾರಿ ನನಗೊಂದು ಅವಕಾಶಕೊಡಿ. ಅವರು 25 ವರ್ಷದಲ್ಲಿ ಮಾಡಿರುವ ಅಭಿವೃದ್ಧಿಯನ್ನು ನಾನು ಕೇವಲ 5 ವರ್ಷದಲ್ಲಿ ಮಾಡಿ ತೋರಿಸ್ತೀನಿ ಎಂದು ಕನಕಪುರ ಕ್ಷೇತ್ರದ ಜನರಿಗೆ ಮನವಿ ಮಾಡುವ ಮೂಲಕ ಡಿಕೆಶಿಗೆ ಓಪನ್ ಚಾಲೆಂಜ್ ಹಾಕಿದರು.