ಮೈಸೂರು-ಬೆಂಗಳೂರು ದಶಪಥ ರಸ್ತೆ: ಬಿಡದಿ ಬಳಿ ಒಂದು ಕ್ಯಾರೇಜ್ ಸಂಚಾರಕ್ಕೆ ಮುಕ್ತ
ಬೆಂಗಳೂರು, ಆಗಸ್ಟ್ 24: ಬಹುನಿರೀಕ್ಷಿತ ಬೆಂಗಳೂರು ಹಾಗೂ ಮೈಸೂರು ದಶಪಥ ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಬಿಡದಿ ಬೈಪಾಸ್ ಬಳಿ ಒಂದು ಕ್ಯಾರೇಜ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.
ಈ ಬಗ್ಗೆ ಮಾಹಿತಿಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ಖಾತೆಯಿಂದ ಲೈವ್ ಮೂಲಕ ಕಾಮಗಾರಿಯ ಪ್ರಗತಿ ಮಟ್ಟವನ್ನು ತೋರಿಸಿದ್ದಾರೆ. ಚನ್ನಪಟ್ಟಣ ರಾಮನಗರ 23 ಕಿಮೀ ರಸ್ತೆಯನ್ನು ಆಗಸ್ಟ್ 15ರಂದು ಸಂಚಾರಕ್ಕೆ ಮುಕ್ತ ಮಾಡುವುದಾಗಿ ಹೇಳಲಾಗಿತ್ತು. ಬಿಡದಿ ಬೈಪಾಸ್ ಅನ್ನು ಸಹ ಸಂಚಾರಕ್ಕೆ ಮುಕ್ತ ಮಾಡುವುದಾಗಿ ಹೇಳಲಾಗಿತ್ತು ಆದರೆ ಆಗಿರಲಿಲ್ಲ. ಇನ್ನೊಂದು ವಾರ ಅಥವಾ ಹತ್ತು ದಿನಗಳೊಳಗೆ ಇದರ ಕಾಮಗಾರಿ ಪ್ರಗತಿಯನ್ನು ತಿಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು.
ಬೆಂಗಳೂರು ಮೈಸೂರು ಚತುಷ್ಪಥದ ಒಂದು ಭಾಗದ (ಕ್ಯಾರೇಜ್) ರಸ್ತೆಯನ್ನು ಈಗ ಇದೇ ಆಗಸ್ಟ್ 26ಕ್ಕೆ ಸಂಚಾರಕ್ಕೆ ಮುಕ್ತ ಮಾಡಲಾಗುತ್ತದೆ. ಇಂದಿನಿಂದಲೇ ಬಿಡದಿ ಬೈಪಾಸ್ ರಸ್ತೆಯ ಒಂದು ಕ್ಯಾರೇಜ್ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಈಗ ಗೌರಿ ಹಬ್ಬದಂದು ಈ ಎರಡು ರಸ್ತೆಗಳನ್ನು ಸಂಚಾರಕ್ಕೆ ಬಿಡಲಾಗುವುದು ಎಂದು ತೀರ್ಮಾನ ಮಾಡಲಾಗಿದೆ. ಸ್ಥಳದಲ್ಲಿ ಒಂದು ಬದಿಯ ರಸ್ತೆ ಕಾಮಗಾರಿ ಮುಗಿದಿದೆ. ಇನ್ನೊಂದು ಬದಿಯ ರಸ್ತೆಯನ್ನು 27ರೊಳಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ಸಹ ಮುಗಿಯಲು ಬಂದಿದೆ.

ಗೌರಿ ಹಬ್ಬಕ್ಕೆ 23 ಕಿಮೀ ಬೈಪಾಸ್ ರಸ್ತೆ ಸಿದ್ಧ
ಮುಖ್ಯ ರಸ್ತೆಯ ಎರಡು ಕಡೆ ಸಂಚಾರಕ್ಕೆ 27ಕ್ಕೆ ಮುಕ್ತವಾಗಲಿದೆ. ಗೌರಿ ಹಬ್ಬಕ್ಕೆ ಸಾರ್ವಜನಿಕರು 23 ಕಿಮೀ ಬೈಪಾಸ್ ರಸ್ತೆ ಸಂಚಾರಕ್ಕೆ ಸಿದ್ದವಿರಲಿದೆ. ಸೆಪ್ಟೆಂಬರ್ 25ರೊಳಗೂ ನನಗೆ ಸಮಯವಕಾಶ ಇದೆ. ದಸರಾ ವೇಳೆಗೆ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆ ಮಾರ್ಗ ಸಾರ್ವಜನಿಕ ಓಡಾಟಕ್ಕೆ ಸಿದ್ದವಿರಲಿದೆ. ಹಾಗೇಯೆ ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಬಳಿ ಬೈಪಾಸ್ ಸಂಚಾರಕ್ಕೆ ಮುಕ್ತ ಮಾಡುವ ಸವಾಲು ನಮಗೆ ಇದೆ. ಅದನ್ನು ಸಹ ತೆರವು ಮಾಡಲಾಗುವುದು. ಹಾಗೇಯೆ ಕುಂಬಳಗೂಡು ಫ್ಲೈ ಓವರ್ ಬಳಿ ಕಾಮಗಾರಿಗೂ ಸ್ಥಳೀಯ ಪೊಲೀಸರಿಂದ ಸಹಕಾರ ಕೂಡ ಸಿಕ್ಕಿದೆ.

ಮರ್ಚ್ನೊಳಗೆ ಮೈಸೂರು ಏರ್ಪೋರ್ಟ್ ವಿಸ್ತರಣೆ
ಈ ಹೆದ್ದಾರಿಯ ಎಲ್ಲ ಪ್ರಗತಿಯನ್ನು ಖುದ್ದು ಪರಿಶೀಲನೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ದಿನಾಂಕಗಳನ್ನು ಮುಂದೆ ಮುಂದೆ ಹಾಕಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮುಂದಿನ ಮರ್ಚ್ನೊಳಗೂ ಕೂಡ ಮೈಸೂರು ಏರ್ಪೋರ್ಟ್ ವಿಸ್ತರಣೆಗೂ ಕೂಡ ಭೂಮಿ ಪೂಜೆ ಮಾಡಿಸಲು ಸಕಲ ತಯಾರಿಯಲ್ಲಿ ಮಾಡುತ್ತಿದ್ದೇವೆ. ಜಾಗ ಒತ್ತುವರಿಯಾದ ಮಾಡಿಕೊಂಡ ಸ್ಥಳದ ಮಾಲೀಕರಿಗೂ ಪರಿಹಾರ ವಿತರಣೆ ಮಾಡುವ ಕೆಲಸ ಮಾಡಲಾಗುತ್ತಿದೆ.

ನಮಗೆ ಎಸ್ ಎಂ ಕೃಷ್ಣ ಅವರು ಮಾದರಿ
ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಸುಖಾ ಸುಮ್ಮನೆ ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ಎಲ್ಲರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ನಮ್ಮ ಕೆಲಸ ನಾವು ಏನು ಅನ್ನುವುದನ್ನು ತೋರಿಸುತ್ತಿದೆ. ಅಭಿವೃದ್ಧಿ ಸಂಬಂಧಿತ ಚಟುವಟಿಕೆಗಳಿಗೆ ನಾವು ಯಾವಾಗಲು ಬದ್ಧನಾಗಿರುತ್ತೇವೆ. ನನಗೂ ಇವತ್ತಿಗೂ ಕಾಂಗ್ರೆಸ್ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಮಾದರಿಯಾಗಿದ್ದಾರೆ. ಯಾರೇ ಅಭಿವೃದ್ಧಿ ಕೆಲಸ ಮಾಡಿದರೂ ಅದನ್ನು ಪ್ರೋತ್ಸಾಹ ಮಾಡಬೇಕು.

ಸೆಪ್ಟೆಂಬರ್ 25ರ ವೇಳೆಗೆ ಎಲ್ಲ ಬೈಪಾಸ್ಗಳು ಮುಕ್ತ
ಇನ್ನೂ ಈ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಇನ್ನೂ ೧೫ ವರ್ಷಗಳ ಕಾಲ ಯಾವುದೇ ಹಾನಿಯಾಗುವುದಿಲ್ಲ. ಇದರ ಬಗ್ಗೆ ಸಂದೇಹಗಳು ಬೇಡ. ಸೆಪ್ಟೆಂಬರ್ 25ರ ವೇಳೆಗೆ ಮೈಸೂರಿನ ವರೆಗೆ ಎಲ್ಲ ಬೈಪಾಸ್ಗಳು ಕೂಡ ಸಂಚಾರಕ್ಕೆ ಮುಕ್ತವಾಗುತ್ತದೆ. ಬಿಡದಿ ಬೈಪಾಸ್ ರಸ್ತೆ ಮಧ್ಯೆ ಖಾಲಿ ಇರುವ ಜಾಗಕ್ಕೈ ಮಣ್ಣು ಹಾಕುವ ಕೆಲಸ ಮಾಡಲಾಗುತ್ತಿದೆ. ಗೌರಿ ಗಣೇಶ ಹಬ್ಬಕ್ಕೆ ಬಿಡದಿ ರಾಮನಗರ ಬೈಪಾಸ್ ರಸ್ತೆ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.












Click it and Unblock the Notifications