ಎರಡನೇ ಮದುವೆಗೆ ಸಜ್ಜಾಗಿದ್ದಾಗ ಸಿಕ್ಕಿಬಿದ್ದ ಮೊದಲ ಹೆಂಡತಿ ಕೊಂದ ಆರೋಪಿ
ರಾಮನಗರ, ಡಿಸೆಂಬರ್ 1: ಎಂಟು ವರ್ಷ ಹಳೆಯ ಕೊಲೆ ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಜೈಲಿಗಟ್ಟುವಲ್ಲಿ ಅರೋಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ, ಎಂಟು ವರ್ಷಗಳ ನಂತರ ಎರಡನೇ ಮದುವೆಗೆ ಸಜ್ಜಾಗಿದ್ದ ಪತಿರಾಯ ಇದೀಗ ಪೋಲೀಸರ ಅತಿಥಿಯಾಗಿದ್ದಾನೆ.
ಕನಕಪುರ ತಾಲ್ಲೂಕಿ ಅರೋಹಳ್ಳಿ ಹೋಬಳಿಯ ಪಡುವಣಗೆರೆ ನಿವಾಸಿ ನಾಗರಾಜ್, ಎಂಟು ವರ್ಷಗಳ ಹಿಂದೆ ತನ್ನ ಪತ್ನಿ ಸವಿತಾಳ ಶೀಲ ಶಂಕಿಸಿ ತವರಿಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಮಾರ್ಗ ಮಧ್ಯದಲ್ಲಿ ಕೊಲೆ ಮಾಡಿ, ನಂತರ ಸಂಭಂದಿಕರು ಮತ್ತು ಗ್ರಾಮಸ್ಥರಿಗೆ ಪತ್ನಿ ಕಾಣೆಯಾಗಿದ್ದಾಳೆ ಎಂದು ನಂಬಿಸಿದ್ದ. 2012 ರಲ್ಲಿ ಕನಕಪುರದ ಗಡಸಹಳ್ಳಿ ಗ್ರಾಮದ ಬಳಿಯ ವೀರಭದ್ರಯ್ಯ ಎಂಬುವರಿಗೆ ಸೇರಿದ ರೇಷ್ಮೆ ಕಡ್ಡಿ ತೋಟದಲ್ಲಿ 25 ವರ್ಷದ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಶವದ ಮುಖ ಗುರುತು ಸಿಗದಷ್ಟು ಕೊಳೆತ್ತಿತ್ತು.

ಆರೋಪಿಗೆ ಮುಳುವಾದ ಎರಡನೇ ಮದುವೆ ಆಸೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕನಕಪುರ ಗ್ರಾಮಾಂತರ ಪೋಲೀಸರು, ತನಿಖೆ ಕೈಗೊಂಡು ಮೂರು ವರ್ಷ ಕಳೆದರೂ, ಕೊಲೆಯಾದ ಯುವತಿಯ ವಿಳಾಸ ಮತ್ತು ಆರೋಪಿ ಪತ್ತೆಯಾಗದ ಹಿನ್ನಲೆಯಲ್ಲಿ, ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖಾಧಿಕಾರಿಗಳು ಪ್ರಕರಣ ಕೈಬಿಟ್ಟಿದ್ದರು. ಪತ್ನಿ ಕಾಣೆಯಾಗಿದ್ದಾಳೆ ಎಂದು ಎಲ್ಲರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ ಆರೋಪಿ ನಾಗರಾಜ್, ಎಂಟು ವರ್ಷ ಕಳೆದರು ಪತ್ನಿ ಪತ್ತೆಯಾಗಿಲ್ಲ ಎಂದು ಬೇರೊಂದು ಮದುವೆಯಾಗಲು ಯುವತಿಯನ್ನು ನೋಡಿ ಮದುವೆ ಒಪ್ಪಂದ ಮಾಡಿಕೊಂಡು ಲಗ್ನ ಪತ್ರಿಕೆ ಹಂಚಲು ಪ್ರಾರಂಭಿಸಿದ್ದಾನೆ.

ಎಂಟು ವರ್ಷಗಳ ಹಿಂದಿನ ಕೊಲೆ ಪ್ರಕರಣ ಬಯಲು
ಇದರಿಂದ ಮನನೊಂದ ಆರೋಪಿಯ ಮೃತ ಪತ್ನಿಯ ತಂದೆ ಮರಿಮಾದಯ್ಯ, ಅರೋಹಳ್ಳಿ ಪೋಲೀಸ್ ಠಾಣೆಗೆ ತೆರಳಿ ನನ್ನ ಮಗಳು ಪತ್ತೆಯಾಗಿಲ್ಲ ಎಂದು ಅಳಿಯ ನಾಗರಾಜ್ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ. ಕರೆದು ವಿಚಾರಣೆ ನಡೆಸಿ ಎಂದು ದೂರು ಕೊಟ್ಟ ಹಿನ್ನೆಲೆಯಲ್ಲಿ ಆರೋಪಿ ನಾಗರಾಜ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಎಂಟು ವರ್ಷಗಳ ಹಿಂದಿನ ಕೊಲೆ ಪ್ರಕರಣ ಬಯಲಾಗಿದೆ.

ಕೊಲೆ ಮಾಡಲು ನಿರ್ಧಾರ
ಇನ್ನು ಆರೋಪಿ ನಾಗರಾಜ್ ಪೊಲೀಸ್ ವಿಚಾರಣೆ ಸಮಯದಲ್ಲಿ ನನ್ನ ಪತ್ನಿ ಸವಿತಾಳ ನಡುವಳಿಕೆಯ ಬಗ್ಗೆ ಅನುಮಾನ ಬಂದು ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ, ತವರಿಗೆ ಬಿಡುವುದಾಗಿ ನಂಬಿಸಿ ಮಾರ್ಗಮಧ್ಯದ ಗಡಸಹಳ್ಳಿ ಗ್ರಾಮದ ಬಳಿ ರೇಷ್ಮೆ ಕಡ್ಡಿ ತೋಟಕ್ಕೆ ಕರೆದುಕೊಂಡು ಹೋಗಿ, ಲೈಂಗಿಕ ಕ್ರಿಯೆ ನಡೆಸಿ ನಂತರ ಕತ್ತು ಹಿಸುಕಿ, ಕಲ್ಲಿಗೆ ತಲೆಯನ್ನು ಹೊಡೆಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅಭಿನಂದನೆ ಸಲ್ಲಿಸಿದ ಎಸ್ಪಿ
ಪತ್ತೆಯಾಗದ ಪ್ರಕರಣ ಎಂದು ಮುಚ್ಚಿಹೋಗಿದ್ದ 8 ವರ್ಷಗಳ ಹಳೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಅರೋಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಮುರುಳಿ ಸೇರಿದಂತೆ ತನಿಖೆಗೆ ಶ್ರಮಿಸಿದ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್.ಎಸ್ ಅಭಿನಂದಿಸಿದ್ದಾರೆ.












Click it and Unblock the Notifications