'ಕಂಠೀರವ ಸ್ಟುಡಿಯೋದ ಜಮೀನು ಕಬಳಿಸಲು ಚಿತ್ರರಂಗದ ಪ್ರಭಾವಿಗಳಿಂದ ಹುನ್ನಾರ'
ರಾಮನಗರ, ಜುಲೈ.13: ಕಂಠೀರವ ಸ್ಟುಡಿಯೋಗೆ ಸೇರಿದ ನೂರಾರು ಎಕರೆ ಜಮೀನು ಕಬಳಿಸಲು ಚಿತ್ರರಂಗದ ಪ್ರಭಾವಿಗಳಿಂದ ಹುನ್ನಾರ ನಡೆಯುತ್ತಿದೆ ಎಂದು ಸ್ಟುಡಿಯೋ ಮಾಜಿ ಅಧ್ಯಕ್ಷ ಹಾಗೂ ಬಿಜಿಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ರಾಮನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಎಚ್.ಡಿ.ಕುಮಾರಸ್ವಾಮಿ ಆತ್ಮೀಯರು, ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಕಂಠೀರವ ಸ್ಟೂಡಿಯೋಗೆ ಸೇರಿದ ನೂರಾರು ಎಕರೆ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಇನ್ಯಾವತ್ತು ನಿರ್ಮಾಣವಾಗುತ್ತದೆಯೋ ಫಿಲ್ಮ್ ಸಿಟಿ!?
ಬೆಂಗಳೂರಿನ ಹೆಸರುಘಟ್ಟದ ಬಳಿಯಿರುವ ನೂರಾರು ಎಕರೆ ಸ್ಟೂಡಿಯೋ ಭೂಮಿ ಮೇಲೆ ಚಿತ್ರರಂಗದ ಪ್ರಮುಖ ವ್ಯಕ್ತಿಗಳ ಕಣ್ಣು ಬಿದ್ದಿದೆ . ಆದರೆ ಈ ಪ್ರಭಾವಿ ವ್ಯಕ್ತಿಗಳು ಯಾರೆಂದು ಹೇಳಲು ನಾನು ಇಷ್ಟಪಡುವುದಿಲ್ಲ. ಸಿಎಂ ಎಚ್ಡಿಕೆ ಆತ್ಮೀಯರು ಎಂದಷ್ಟೇ ಹೇಳಬಲ್ಲೇ.
ಸಮಯ ಬಂದಾಗ ಆ ಹೆಸರುಗಳನ್ನು ಬಹಿರಂಗಪಡಿಸುವೆ. ನಾನು ಅಧ್ಯಕ್ಷರಾಗಿದ್ದ ವೇಳೆಯೂ ಚಿತ್ರರಂಗದ ಕೆಲವು ಪ್ರಭಾವಿಗಳು ಜಾಗವನ್ನು ಕಬಳಿಸಲು ಹೊರಟಿದ್ದರು. ಆಗ ನಾನು ಈ ಪ್ರಯತ್ನಕ್ಕೆ ತಡೆ ಹಾಕಿದ್ದೆ. ಎಚ್ಡಿಕೆ ಸಹ ಇಂತಹ ಪ್ರಯತ್ನಕ್ಕೆ ಕಡಿವಾಣ ಹಾಕಿ, ಸ್ಟೂಡಿಯೋಗೆ ಸೇರಿದ ನೂರಾರು ಎಕರೆ ಭೂಮಿಯನ್ನು ಉಳಿಸಬೇಕೆಂದು ಅಗ್ರಹಿಸಿದರು.
ಅಲ್ಲದೇ ಕುಮಾರಸ್ವಾಮಿ ಅವರು, ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಬದಲು, ಹೆಸರುಘಟ್ಟದಲ್ಲಿನ ತಮ್ಮ ಜಮೀನಿನಲ್ಲೇ ನಿರ್ಮಾಣ ಮಾಡಲಿ.
ಇನ್ಫೋಸಿಸ್, ವಿಪ್ರೋ ಸಂಸ್ಥೆಯಂತಹ ಕಂಪನಿ ಹಾಗೂ ಕಾರ್ಖಾನೆಗಳನ್ನು ಪ್ರಾರಂಭಿಸಿದರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉಪಯುಕ್ತವಾಗುತ್ತದೆ ಹೊರತು ಇಲ್ಲಿ ಫಿಲ್ಮ್ ಸಿಟಿ ನಿರ್ಮಾಣದಿಂದ ಯಾವುದೇ ಪ್ರಯೋಜನವಿಲ್ಲ ಎಂದರು.