ಹಣಕ್ಕಾಗಿ ತಲೆ ಮಾರಿಕೊಂಡವರಿಗೆ ಬುದ್ಧಿ ಕಲಿಸಿ, ಮಾಗಡಿಯಲ್ಲಿ ರಣಕಹಳೆ
ಮಾಗಡಿ (ರಾಮನಗರ ಜಿಲ್ಲೆ), ಏಪ್ರಿಲ್ 20: "ಹಣಕ್ಕಾಗಿ ತಲೆ ಮಾರಿಕೊಂಡ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಮತ ನೀಡದೆ ಬುದ್ಧಿ ಕಲಿಸಿ" ಎಂದು ಮಾಗಡಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮನವಿ ಮಾಡಿಕೊಂಡರು.
ಪಟ್ಟಣದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಅಪಾರ ಸಂಖ್ಯೆಯಲ್ಲಿ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ಬಂದು, ತಮ್ಮ ನಾಮಪತ್ರ ಸಲ್ಲಿಸಿದರು ಎ.ಮಂಜುನಾಥ್.
ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಬಂದ ಎ.ಮಂಜು, ಮಾಗಡಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪತ್ನಿ ಲಕ್ಷ್ಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜೇಡ್ರಳ್ಳಿ ಕೃಷ್ಣಮೂರ್ತಿ, ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮತ್ತು ಬಿಎಂಆರ್ ಸಿ ಎಲ್ ಅಧ್ಯಕ್ಷ ಹನುಮಂತರಾಯಪ್ಪ (ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಮಾವ) ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಎ.ಮಂಜು, ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಮೋಸಗಾರರು, ದಗಾಕೋರರು ಮತ್ತು ಹಣಕ್ಕಾಗಿ ತಲೆ ಮಾರಿಕೊಂಡವರಿಗೆ ಬುದ್ಧಿ ಕಲಿಸಬೇಕು. ಅವರಿಗೆ ಮತ ನೀಡಿದರೆ ಕ್ಷೇತ್ರಕ್ಕೆ ಯಾವತ್ತೂ ನ್ಯಾಯ ಸಿಗುವುದಿಲ್ಲ. ಅವರ ತಂದೆ ಮೂರು ಬಾರಿ ಶಾಸಕರು, ಅವರು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂದು ಎಚ್.ಸಿ.ಬಾಲಕೃಷ್ಣ ವಿರುದ್ಧ ಆರೋಪ ಮಾಡಿದರು.












Click it and Unblock the Notifications