ಲೋಕಾಯುಕ್ತರಿಂದ ಬೈರಮಂಗಲ ಕೆರೆ ಪರಿಶೀಲನೆ, ಶುದ್ಧೀಕರಣಕ್ಕೆ ಆದೇಶ
ರಾಮನಗರ, ಫೆಬ್ರವರಿ 02: ಮಾಲಿನ್ಯಗೊಂಡಿರುವ ಬಿಡದಿಯ ಬೈರಮಂಗಲ ಕೆರೆಯ ಶುದ್ಧೀಕರಣ ನೇತೃತ್ವವನ್ನು ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ವಹಿಸಿಕೊಂಡಿದ್ದಾರೆ.
ತ್ಯಾಜ್ಯ ಮತ್ತು ಕೈಗಾರಿಕೆಗಳ ರಾಸಾಯನಿಕಗಳಿಂದ ಕಲುಷಿತಗೊಂಡು ಕೆರೆಯಿಂದ ಐಸ್ ರೀತಿಯ ನೊರೆ ಗಾಳಿಯಲ್ಲಿ ತೇಲಿ ರಸ್ತೆಗೆ ಬರುತ್ತಿದೆ. ಈ ಕೆರೆ ತ್ಯಾಜ್ಯ ಸಂಗ್ರಹಗೊಂಡು ಅಕ್ಕ ಪಕ್ಕದ ಗ್ರಾಮಗಳ ಕುಡಿಯುವ ನೀರಿಗೆ ಸಂಚಕಾರವನ್ನ ತಂದೊಡ್ಡಿದೆ. ಇಲ್ಲಿಗೆ ಗುರುವಾರ ಭೇಟಿ ನೀಡಿದ ನ್ಯಾ. ವಿಶ್ವನಾಥ ಶೆಟ್ಟಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೈರಮಂಗಲ ಕೆರೆ ಹಲವು ವರ್ಷಗಳಿಂದ ಕಲುಷಿತಗೊಂಡು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಬೆಂಗಳೂರಿನ ಅರ್ಧಭಾಗದ ಕಲುಷಿತ ತ್ಯಾಜ್ಯ ನೀರು ವೃಷಭಾವತಿ ನದಿ ಮೂಲಕ ಈ ಕೆರೆಯ ಒಡಲು ಸೇರುತ್ತಿದೆ. ಇದೀಗ ನಗರ ಬೆಳೆದಂತೆ ಹರಿದು ಬರುತ್ತಿರುವ ಕಲುಷಿತ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗುತ್ತಿದ್ದು ಕೆರೆ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಇದನ್ನ ತಪ್ಪಿಸಲು ಕೆಂಗೇರಿ ಬಳಿ 60ಎಂಎಲ್ ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಇನ್ನು ಆರು ತಿಂಗಳುಗಳಲ್ಲಿ ಪ್ರಾರಂಭಿಸುತ್ತೇವೆ ಹಾಗೂ ಮಂದಿನ ದಿನಗಳಲ್ಲಿ 150 + 40 ಸಾಮರ್ಥ್ಯದ ಎರಡು ಘಟಕಗಳನ್ನು 2020ರ ಒಳಗೆ ಸ್ಥಾಪಿಸುತ್ತೇವೆ ಎಂದು ಅಧಿಕಾರಿಗಳು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದರಿಂದ ಕುಪಿತಗೊಂಡ ಲೋಕಾಯುಕ್ತ ನ್ಯಾಯಾಮೂರ್ತಿಗಳು ವೃಷಭಾವತಿ ನೀರನ್ನು ಶುದ್ಧೀಕರಿಸಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೊಂದು ವೇಳೆ ನಿಗದಿತ ಕಾಲಮಿತಿಯೊಳಗೆ ತಮ್ಮ ಕೆಲಸವನ್ನು ನಿರ್ವಹಿಸದಿದ್ದರೆ ನನ್ನ ಅಧಿಕಾರ ಚಲಾಯಿಸಿ ಕೆಲಸ ಮಾಡಿಸುತ್ತೇನೆ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಕೆಯನ್ನೂ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿರವರ ನೇತೃತ್ವದ ತಂಡ ಬೈರಮಂಗಲ ಕೆರೆ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ವಿಶ್ವನಾಥ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.












Click it and Unblock the Notifications