R Ashok: ಡಿಕೆ ಸುರೇಶ್ ಸ್ಪರ್ಧಿಸಿದರೂ ಸ್ವಾಗತ: ಡಿಕೆ ಬ್ರದರ್ಸ್ಗೆ ತೊಡೆ ತಟ್ಟಿದ ಸಾಮ್ರಾಟ್
ರಾಮನಗರ, ಏಪ್ರಿಲ್ 21: ದಿನ ಸಮೀಪಿಸುತ್ತಿದ್ದಂತೆ ಚುನಾವಣೆ ಕಣ ರಂಗೇರುತ್ತಿದೆ. ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಅವರ ನಾಮಪತ್ರ ಅಂಗೀಕಾರವಾಗುತ್ತಿದ್ದಂತೆ ಇತ್ತ ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಅವರು, ಡಿಕೆ ಸುರೇಶ್ ಅವರು ಸ್ಪರ್ಧೆ ಮಾಡಿದರು ಸ್ವಾಗತ ಎಂದು ಟಾಂಗ್ ನೀಡಿದ್ದಾರೆ.
ಕನಕಪುರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಆರ್.ಅಶೋಕ್ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದ್ದಾರೆ. ಕಾಂಗ್ರೆಸ್ನಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬದಲಿಗೆ ಅವರ ಸಹೋದರ ಡಿಕೆ ಸುರೇಶ್ ಅವರು ಕಣಕ್ಕಿಳಿದರೂ ಸ್ವಾಗತ ಎಂದಿದ್ದಾರೆ. ಈ ಮೂಲಕ ಡಿಕೆ ಬ್ರದರ್ಸ್ಗೆ ಅವರ ಕ್ಷೇತ್ರದಲ್ಲೇ ಸಾಮ್ರಾಟ್ ತೊಡೆ ತಟ್ಟಿದ್ದಾರೆ.

ಸಂಸದ ಡಿಕೆ ಸುರೇಶ್ ಅವರು ಬಿಜೆಪಿ ಮೇಲೆ ಮಾಡಿರುವ ಕುತಂತ್ರ ಆರೋಪ ಕುರಿತು ಪ್ರತಿಕ್ರಿಯಿಸಿದ ಆರ್ ಅಶೋಕ್, ಕಾಂಗ್ರೆಸ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಆದಿಯಾಗಿ ಬಹಳ ಜನ ಹಿರಿಯ ನಾಯಕರಿದ್ದಾರೆ. ಅವರಿಗೆ ಕಿರುಕುಳ ನೀಡಲಾಗಿಲ್ಲ. ಅವರಿಗೇ ಇಲ್ಲದ ಕಿರುಕುಳ ಇವರಿಗೆ ಯಾಕೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು.
ಇದುವರೆಗೆ ಕಾಂಗ್ರೆಸ್ ಪಟ್ಟಿಯಲ್ಲಿ ಸಂಸದ ಡಿಕೆ ಸುರೇಶ್ ಅವರ ಹೆಸರು ಇರಲಿಲ್ಲ. ಆದರೆ ಅವರು ಗುರುವಾರ ಏಕಾಎಕಿ ಚುನಾವಣೆ ಕಣಕ್ಕೆ ಧುಮುಕುವುದಾಗಿ ಹೇಳಿ ನಾಮಪತ್ರ ಸಲ್ಲಿಸಿದರು. ಆದರೆ ಕನಕಪುರದಲ್ಲಿ ಯಾರೇ ಸ್ಪರ್ಧಿಸಿದರೂ ಇಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಸುರೇಶ್ ಮಾಡಿದ ಆರೋಪವೇನು?
ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕಾರಗೊಳ್ಳಲಿದೆ ಎಂಬ ವದಂತಿಗಳು ಹರಿದಾಡಿದವು. ಇದರ ಬೆನ್ನಲ್ಲೆ ಅವರ ಸಹೋದರ ಕಾಂಗ್ರೆಸ್ ಸಂಸದರ ಡಿಕೆ ಸುರೇಶ್ ಅವರು ಸಹ ಗುರುವಾರ ಮಧ್ಯಾಹ್ನ ನಾಮಪತ್ರ ಸಲ್ಲಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ವಿರುದ್ಧ ಬಿಜೆಪಿಯವರು ಕುತಂತ್ರ ನಡೆಸಿದ್ದಾರೆ. ಈ ಕುರಿತು ನಮಗೆ ಮಾಹಿತಿ ಸಿಕ್ಕಿದೆ. ಚುನಾವಣಾಧಿಕಾರಿಗಳು ಸರ್ಕಾರದ ಅಧಿನದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರೇ ಆಗಿದ್ದಾರೆ ಎಂದು ಬಿಜೆಪಿ ವಿರುದ್ಧ ದೂರಿದರು.
ಕನಕಪುರದ ಜನರೇ ತೀರ್ಮಾನಿಸುತ್ತಾರೆ: ಡಿಕೆಸು ಭವಿಷ್ಯ
ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆ ದಿನವಾಗಿದೆ. ನಮ್ಮ ವಿರುದ್ಧ ಕುತಂತ್ರ ನಡೆದಿದೆ. ಈ ಸಂಬಂಧ ನಾವು ಕನಕಪುರದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದೇವೆ. ಮುಂಜಾಗ್ರತಾ ದೃಷ್ಟಿಯಿಂದ ನಾನು ಸಹ ಕನಕಪುರದ ಜನತೆಗೆ ನಾಮಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಕನಕಪುರದ ಜನರೇ ಎಲ್ಲವನ್ನು ತೀರ್ಮಾನಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ಭವಿಷ್ಯ ನುಡಿದರು.
ಈ ಮಧ್ಯೆ ಕನಕಪುರದಲ್ಲಿ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಅವರ ಸ್ವಕ್ಷೇತ್ರ ಪದ್ಮನಾಭನಗರದಿಂದ ಸಂಸದ ಡಿಕೆ ಸುರೇಶ್ ಅವರು ಸ್ಪರ್ಧಿಸಲಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ ಎಂಬ ಮಾತುಗಳು ಗುರುವಾರ ಬೆಳಗ್ಗೆಯಿಂದಲೇ ಕೇಳಿ ಬಂದವು. ಆದರೆ ಅವರು ಕೊನೆಗೆ ಕನಕಪುರದಿಂದ ನಾಮಪತ್ರ ಸಲ್ಲಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.












Click it and Unblock the Notifications