International Yoga day 2023: ಉಸ್ತುವಾರಿ ಸಚಿವರು, ಅಧಿಕಾರಿಗಳ ಗೈರು, ಯೋಗಾಸಕ್ತರ ಬೇಸರ
ರಾಮನಗರ, ಜೂನ್ 21: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಮನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗಿದೆ.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ಜಿಲ್ಲೆಯತ್ತ ಮುಖ ತೋರಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಗೈರಾಗಿದ್ದು, ಉಸ್ತುವಾರಿ ಸಚಿವ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ರಾಮನಗರದ ಜಿಲ್ಲಾಡಳಿತ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ರೂಪು-ರೇಶಗಳನ್ನು ಸಿದ್ಧಪಡಿಸಿದ್ದು, ಆಹ್ವಾನ ಪತ್ರಿಕೆಯಲ್ಲಿ ಗಣ್ಯರ ಹೆಸರುಗಳನ್ನು ನಮೂದಿಸಿತ್ತು. ಆದರೆ ಗಣ್ಯರು ಕೇವಲ ಆಹ್ವಾನ ಪತ್ರಿಕೆ ಮಾತ್ರ ಸೀಮಿತರಾಗಿದ್ದು, ಕಾರ್ಯಕ್ರಮದತ್ತ ಯಾರೂ ಮುಖ ಮಾಡಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಬಹುತೇಕ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದು, ಆಯುಷ್ ಇಲಾಖೆಯ ಕೆಲ ಸಿಬ್ಬಂದಿ ಮಾತ್ರ ನೆಪ ಮಾತ್ರಕ್ಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗಣ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸ್ಥಳದಲ್ಲಿದ್ದ ಯೋಗಾಸಕ್ತರಿಂದಲೇ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದ್ದು, ನೂರಾರು ಯೋಗಪಟುಗಳಿಂದ ಯೋಗಾಭ್ಯಾಸ ಮಾಡಲಾಗಿದೆ. ಅಂತರ್ ರಾಷ್ಟ್ರೀಯ ಯೋಗಾ ಪಟು ಲಿಖಿತ ಅವರಿಂದ ಯೋಗ ಪ್ರದರ್ಶನ ನೀಡಲಾಗಿದೆ.
ಉತ್ತಮ ಆರೋಗ್ಯದ ಗುಟ್ಟು ಯೋಗ ಎಂಬುದನ್ನು ಪ್ರಪಂಚಕ್ಕೆ ಪರಿಚಯ ಮಾಡಿದ ಕೀರ್ತಿಗೆ ಭಾರತ ಬಾಜನವಾಗಿದೆ. ಅದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವ ಸೌಜನ್ಯ ತೋರುದಿರುವುದು ಯೋಗಾಸ್ತರ ಮನಸ್ಸಿಗೆ ನೋವಾಗಿದೆ. ಅಲ್ಲದೇ *ಯತಾ ರಾಜ ತತಾ ಪ್ರಜಾ" ಎನ್ನುವಂತೆ ರಾಜಕಾರಣಿಗಳಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ ತೋರಿವುದು ಉತ್ತಮ ಬೆಳವಣಿಗೆಯಲ್ಲ ಎಂದು ಯೋಗಾಸಕ್ತ ಮಹದೇವ್ ಸ್ವಾಮಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಗಳ ವರ್ತನೆಯನ್ನು ಖಂಡಿಸಿದ್ದಾರೆ.












Click it and Unblock the Notifications