ರಾಮನಗರದಲ್ಲಿ ಮನೆ ಮಗನ ಗೆಲ್ಲಿಸುವ ಜವಾಬ್ದಾರಿ ನಿಮ್ಮದು: ಕುಮಾರಸ್ವಾಮಿ
ರಾಮನಗರ, ಏಪ್ರಿಲ್ 21: ಅನಿವಾರ್ಯ ಸ್ಥಿತಿಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ, ನಿಮ್ಮ ಮುಂದೆ ನಿಂತಿದ್ದೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ನ ಶಾಪ ವಿಮೋಚನೆಗಾಗಿ ಹೋಗಿದ್ದೇನೆ. ಈ ಬಗ್ಗೆ ಕ್ಷೇತ್ರದ ಜನರು ಆತಂಕ ಪಡದೆ ಮನೆ ಮಗನನ್ನು ಉಳಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
ರಾಮನಗರದ ಶಕ್ತಿ ಚಾಮುಂಡೇಶ್ವರಿ ದೇವಾಲಯ, ಚರ್ಚ್ ಮತ್ತು ದರ್ಗಾ ಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಚನ್ನಪಟ್ಟಣಕ್ಕೆ ತೆರಳಿ ಅಪ್ರಮೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಪತ್ನಿ ಸಮೇತ ಮೊದಲು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸಿದ ಕುಮಾರಸ್ವಾಮಿ, ಆ ನಂತರ ರಾಮನಗರದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿ, ಮಿನಿ ವಿಧಾನಸೌಧದಿಂದ ನಗರದ ಹಳೇ ಬಸ್ ನಿಲ್ದಾಣದ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ನಿಮ್ಮ ಅಣ್ಣ-ತಮ್ಮಂದಿರು. ನನಗಾಗಿ ಅಲ್ಲ, ಅವರೆಲ್ಲರ ರಕ್ಷಣೆಗಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಬಗ್ಗೆ ಅನುಮಾನ ಪಡಬೇಡಿ ಎಂದರು.

ಮಾವು ರಫ್ತು ಸರಕಾರದಿಂದಲೇ ಮಾಡುವ ಆಲೋಚನೆ
ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವ ಕನಸು ಕಂಡಿದ್ದೇನೆ. ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಿ ಎರಡೂ ನಗರಗಳ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ, ಮಾವು ಬೆಳೆಗೆ ಫುಡ್ ಪಾರ್ಕ್ ಮಾತ್ರವಲ್ಲದೆ ಸರಕಾರದಿಂದಲೇ ಮಾವು ರಫ್ತು ಮಾಡುವುದು, ರೇಷ್ಮೆಯಲ್ಲಿ ಉಪಉತ್ಪನ್ನಗಳು ತಯಾರಿಸುವ ಕಾರ್ಖಾನೆ ಸ್ಥಾಪಿಸುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕಾರ್ಯಗರ್ತಗೊಳಿಸುವ ಆಲೋಚನೆ ಹೊಂದಿದ್ದೇನೆ. ಈ ಬಾರಿ ನಾಡಿನ ಜನರ ಆಶೀರ್ವಾದದೊಂದಿಗೆ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಆರೋಗ್ಯದ ಬಗ್ಗೆಯೂ ಗಮನ ಕೊಡದೆ ನಿರಂತರವಾಗಿ ಪ್ರವಾಸ ಮಾಡುತ್ತಿದ್ದೇನೆ. ನಾಡಿನಾದ್ಯಂತ ಜನರ ಆಶೀರ್ವಾದ ಸಿಗುತ್ತಿದೆ ಎಂದರು.

ಕಮಿಷನ್, ಹಫ್ತಾ ವಸೂಲಿ ಮಾಡಿಲ್ಲ
ವಿರೋಧಿಗಳು ನನ್ನ ಬಗ್ಗೆ ಅತಿಥಿ, ನೆಂಟರು ಎಂದೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ನಾನು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ, ಅವರಂತೆ ಕಾಮಗಾರಿಗಳಲ್ಲಿ ಕಮಿಷನ್, ಸಣ್ಣಪುಟ್ಟ ಅಂಗಡಿಗಳಿಂದ ಪೊಲೀಸರ ಮೂಲಕ ಚಂದಾ ವಸೂಲಿ, ವೋಟು ನೀಡಿಲ್ಲವೆಂದು ಹೆದರಿಸಿ ಪೊಲೀಸ್ ಠಾಣೆಗಳಿಗೆ ಅಲೆದಾಡಿಸುವ ಕೆಲಸ ಮಾಡಬೇಕಿತ್ತೆ ಎಂದು ಪ್ರಶ್ನಿಸಿದರು. ಕ್ಷೇತ್ರದ ಶಾಸಕನಾದ ನಂತರ ಯಾವ ಕುಟುಂಬದ ಮೇಲೂ ದಬ್ಬಾಳಿಕೆಯಾಗಲಿ, ಅನ್ಯಾಯವಾಗಲಿ ಮಾಡಿಲ್ಲ. ಜಾತಿ ರಾಜಕೀಯ ಮಾಡಿದವನಲ್ಲ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮಾಜಕ್ಕೂ ಗೌರವ ನೀಡುವ ಕೆಲಸ ಮಾಡಿದ್ದೇನೆ. ನನ್ನಿಂದ ದ್ರೋಹವಾಗಿದ್ದರೆ ಶಿಕ್ಷೆ ನೀಡಿ. ಯಾರದೋ ಮಾತು ಕೇಳಿ ಜಾತಿ ಮತ್ತು ಹಣಕ್ಕೆ ಬಲಿಯಾಗಿ ತಪ್ಪು ನಿರ್ಧಾರ ಕೈಗೊಳ್ಳಬೇಡಿ. ರಾಮನಗರ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವ ರೀತಿ ನಾನು ಎಂದೂ ಕೆಲಸ ಮಾಡಿಲ್ಲ. ಬೇರೆ ರಾಜಕೀಯ ಪಕ್ಷದ ವ್ಯಕ್ತಿಗಳ ಮನೆಗಳಿಗೆ ಹೋಗಿ ಸ್ವಾಭಿಮಾನ ಹಾಳು ಮಾಡುವ ರೀತಿ ತಲೆ ಬಾಗಿ ನಡೆದುಕೊಂಡಿಲ್ಲ. ನಿಮ್ಮ ಮುಂದೆ ತಲೆ ಬಾಗುತ್ತೇನೆಯೇ ಹೊರತು ಬೇರೆಯವರ ಮುಂದಲ್ಲ ಎಂದರು.

ಸೋಲುವ ಭಯದಿಂದ ಬಾದಾಮಿಗೆ ವಲಸೆ
ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ ಎಂದ ಕುಮಾರಸ್ವಾಮಿ, ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭಯ ಶುರುವಾಗಿ ಬಾದಾಮಿ ಕ್ಷೇತ್ರಕ್ಕೆ ವಲಸೆ ಹೋಗುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಮೂರು ದಿನ ನೂರು ಹಳ್ಳಿಗಳಲ್ಲಿ ಸುತ್ತಾಡಿದೆ. ನಮಗೆ ಸಿಗುತ್ತಿರುವ ಜನಬೆಂಬಲ ಕಂಡು ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಆವರಿಸಿದೆ. ಏಳು ಬಾರಿ ಶಾಸಕರಾಗಿ, ಉಪಮುಖ್ಯಮಂತ್ರಿ ಆಗಿದ್ದವರು. ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಆದರೂ ಸೋಲಿನ ಭಯ ಶುರುವಾಗಿ ಬಾದಾಮಿಗೆ ಹೋಗುತ್ತಿದ್ದಾರೆ ಎಂದರು.

ಬಾದಾಮಿಯಲ್ಲೂ ಜೆಡಿಎಸ್ ಅಭ್ಯರ್ಥಿ ಬಲಿಷ್ಠ
ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹನುಮಂತಪ್ಪ ಕೊಪ್ಪದ್ ಕೂಡ ಪ್ರಬಲ ಅಭ್ಯರ್ಥಿ. ಚಾಮುಂಡೇಶ್ವರಿಯಂತೆ ಬಾದಾಮಿಯಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಬಲ ಪೈಪೋಟಿ ಎದುರಿಸಬೇಕಾಗಿದೆ. ನಾನು ಕೇವಲ 20 ತಿಂಗಳು ಆಡಳಿತದಲ್ಲಿ ಜನರ ವಿಶ್ವಾಸ ಗಳಿಸಲು ದುಡಿಮೆ ಮಾಡಿದೆ. ಅವರು 5 ವರ್ಷ ಪೂರ್ಣವಾಗಿ ಆಡಳಿತ ನಡೆಸಿದವರು. ನನ್ನ ಕಾರ್ಯಕ್ರಮಗಳ ಅನುಕೂಲ ಪಡೆದವರು ನನ್ನನ್ನು ದೇವರಂತೆ ಕಾಣುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಬಡವರ ಪರವಾದ ಸರಕಾರಕ್ಕೆ ಸಂಕಲ್ಪ
ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದ ಜನರ ಮತ್ತು ನಮ್ಮ ಕುಟುಂಬದ ನಡುವಿನ ಸಂಬಂಧ ಕೊನೆ ಉಸಿರಿನವರೆಗೂ ಇರುತ್ತದೆ. ರೈತರು ಮತ್ತು ಬಡವರ ಪರವಾದ ಸರಕಾರ ತರಲು ಸಂಕಲ್ಪ ಮಾಡಿರುವ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುವಂತೆ ಕೋರಿದರು. ಕ್ಷೇತ್ರದ ಜನರು ಆಶೀರ್ವಾದ ಮಾಡಿ ಕಳುಹಿಸಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯವಾಗುತ್ತದೆ. ಒಮ್ಮೆ ಸಂಸದ ಮತ್ತು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಈ ಬಾರಿ ಮತ್ತೊಮ್ಮೆ ಬೆಂಬಲಿಸಿ ಮುಖ್ಯಮಂತ್ರಿ ಆಗುವಂತೆ ಆಶೀರ್ವದಿಸಿ ಎಂದರು.












Click it and Unblock the Notifications