Get Updates
Get notified of breaking news, exclusive insights, and must-see stories!

ಉಗ್ರ ಮುನೀರ್ ನ ಖಾಂದಾನ್ ರಾಮನಗರದಲ್ಲೇ ಬಿಡಾರ ಹೂಡಿತ್ತು

ರಾಮನಗರ, ಅಕ್ಟೋಬರ್ 1: ಬಟ್ಟೆ ವ್ಯಾಪಾರಿಯ ಸೋಗಿನಲ್ಲಿದ್ದ ಉಗ್ರಗಾಮಿ ಮುನೀರ್ ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಇಂಟಲಿಜೆನ್ಸಿ ಬ್ಯೂರೊ (ಐಬಿ) ಹಾಗೂ ನವದೆಹಲಿ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದಿಂದ ಆಗಸ್ಟ್‌ನಲ್ಲಿ ಬಂಧಿಸಿದ್ದರು. ಆದರೆ ಅವತ್ತು ಅವನೊಬ್ಬ ಉಗ್ರ ಎಂಬುದು ಮಾತ್ರ ಗೊತ್ತಾಗಿತ್ತು.

ಆದರೆ, ಬೌದ್ಧ ಧರ್ಮಗುರು ದಲೈಲಾಮಾ ಅವರ ಹತ್ಯೆಗೆ ಆತ ಸಂಚು ರೂಪಿಸಿದ್ದ ಎಂಬುದು ಇದೀಗ ಬಯಲಾಗಿದ್ದು, ಜನ ಬೆಚ್ಚಿಬೀಳುವಂತೆ ಮಾಡಿದೆ. ಇಷ್ಟಕ್ಕೂ ಮುನೀರ್ ಯಾರು, ಎಲ್ಲಿಯವನು ಎಂಬುದರ ಬಗ್ಗೆ ಯಾರ ಬಳಿಯೂ ನಿಖರವಾದ ಮಾಹಿತಿ ಇಲ್ಲ. ಆದರೆ ಈತ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜೆಎಂಬಿ ಸಕ್ರಿಯ ಕಾರ್ಯಕರ್ತ ಎಂಬುದು ಇದೀಗ ಗೊತ್ತಾಗಿದೆ.

ದಲೈಲಾಮಾ ಅವರ ಹತ್ಯೆಗೆ ಸಂಚು ರೂಪಿಸಿದ ವಿಚಾರ ಬಯಲಾಗುತ್ತಿದ್ದಂತೆಯೇ ಅವನು ವಾಸವಿದ್ದ ರಾಮನಗರದ ರೆಹಮಾನಿಯಾ ಬಡಾವಣೆಯ ಜನ ವಿಚಲಿತರಾಗಿದ್ದಾರೆ. ಮುನೀರ್ ಇದೇ ಬಡಾವಣೆಯಲ್ಲಿ ಹೆಂಡತಿ- ಮಕ್ಕಳೊಂದಿಗೆ ಸಂಸಾರ ನಡೆಸಿಕೊಂಡಿದ್ದ. ಅಲ್ಲದೆ ಯಾರಿಗೂ ಸಂಶಯ ಬರದಂತೆ ನೋಡಿಕೊಂಡಿದ್ದ.

ಬಟ್ಟೆ ವ್ಯಾಪಾರದ ನೆಪದಲ್ಲಿ ಆಗಾಗ ಪ್ರವಾಸ

ಬಟ್ಟೆ ವ್ಯಾಪಾರದ ನೆಪದಲ್ಲಿ ಆಗಾಗ ಪ್ರವಾಸ

ಈತ ಕೆಲವರೊಂದಿಗೆ ಜಾರ್ಖಂಡ್ ಮೂಲದವನು ಎಂದು ಹೇಳಿಕೊಂಡಿದ್ದ. ರಾಮನಗರದ ರೆಹಮಾನಿಯಾ ನಗರದಲ್ಲಿರುವ ಅಮೀರ್ ಖಾನ್ ಎಂಬುವರ ಮಾಲೀಕತ್ವದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದು, ಐವತ್ತು ಸಾವಿರ ರುಪಾಯಿ ಮುಂಗಡ ಮತ್ತು ಐದು ಸಾವಿರ ತಿಂಗಳ ಬಾಡಿಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದ. ಅಲ್ಲದೆ, ಮೊದಲಿಗೆ ನಲವತ್ತು ಸಾವಿರ ರುಪಾಯಿ ಮುಂಗಡವಾಗಿ ನೀಡಿದ್ದ. ಮನೆ ಪಡೆದು, ಆ ನಂತರ ಬಂಧನ ಆಗುವವರೆಗೆ ಸುಮಾರು ಎರಡೂವರೆ ತಿಂಗಳಿನಿಂದ ಮುನೀರ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಮನೆ ಮಾಲೀಕ ಮತ್ತು ಸ್ಥಳೀಯ ಜನರೊಂದಿಗೆ ಮುನೀರ್ ಕುಟುಂಬದವರು ಸಹಜ ರೀತಿಯಲ್ಲಿಯೇ ಒಡನಾಟ ಹೊಂದಿದ್ದರು. ಮುನೀರ್ ಕೋಲ್ಕತ್ತಾ ಸೇರಿದಂತೆ ಹಲವೆಡೆ ಬಟ್ಟೆ ವ್ಯಾಪಾರದ ನೆಪದಲ್ಲಿ ಆಗಾಗ ಪ್ರವಾಸ ಮಾಡುತ್ತಿದ್ದ.

ದಲೈಲಾಮ ಮತ್ತು ಬಿಹಾರ ರಾಜ್ಯಪಾಲರ ಹತ್ಯೆಗೆ ಸಂಚು

ದಲೈಲಾಮ ಮತ್ತು ಬಿಹಾರ ರಾಜ್ಯಪಾಲರ ಹತ್ಯೆಗೆ ಸಂಚು

ಆದರೆ, ಮನೆಯಲ್ಲಿ ತನ್ನ ಉಗ್ರಗಾಮಿ ಚಟುವಟಿಕೆಗೆ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದ. ಸಂಘಟನೆಯ ಇತರೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ. 2018ರ ಜನವರಿ 18ರಂದು ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲೈಲಾಮ ಮತ್ತು ಬಿಹಾರ ರಾಜ್ಯಪಾಲರನ್ನು ಜೊತೆಯಲ್ಲೇ ಬಾಂಬ್ ಇಟ್ಟು ಹತ್ಯೆಗೈಯ್ಯಲು ಸಂಚು ರೂಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ ಮುನೀರ್ ರಾಮನಗರದಲ್ಲಿ ನೆಲೆಸಿರುವುದು ಗೊತ್ತಾಗಿತ್ತು. ಹೀಗಾಗಿ ಆತನ ಬೆನ್ನು ಹತ್ತಿ, ಮಾಹಿತಿಗಳನ್ನು ಕಲೆ ಹಾಕುತ್ತಲೇ ಇದ್ದರು. ಇತ್ತ ಮುನೀರ್ ಮನೆಯಲ್ಲಿ ಲ್ಯಾಪ್ ಟಾಪ್, ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿದ್ದನಲ್ಲದೆ, ರಾಜ್ಯದ ಹಲವು ಪ್ರಸಿದ್ಧ ದೇವಾಲಯ, ಮಸೀದಿಗಳು ಹಾಗೂ ಪ್ರವಾಸಿ ತಾಣಗಳ ಚಿತ್ರ- ನಕ್ಷೆಗಳನ್ನು ತೆಗೆದಿಟ್ಟುಕೊಂಡಿದ್ದ.

ರೈಲಿನಲ್ಲಿ ಪ್ರಯಾಣಿಸುವಾಗ ಸಹಚರನ ಬಂಧನ

ರೈಲಿನಲ್ಲಿ ಪ್ರಯಾಣಿಸುವಾಗ ಸಹಚರನ ಬಂಧನ

ಈ ಮಧ್ಯೆ ಸಹಚರರಾದ ಹಸನ್ ಹಾಗೂ ಮತ್ತೊಬ್ಬನನ್ನು ರಾಮನಗರಕ್ಕೆ ಕರೆಸಿ, ಅವರಿಗೂ ಮನೆ ಮಾಡಿಕೊಟ್ಟಿದ್ದ. ಮುನೀರ್ ಬಂಧನದ ಬೆನ್ನಲ್ಲೇ ಅವರನ್ನು ಕೂಡ ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದುಕೊಂಡಿತ್ತು. ಈ ಇಬ್ಬರು ಸಹಚರರಿಗೆ ಕುಟುಂಬ ಇತ್ತಾದರೂ ಮುನೀರ್ ನಾಪತ್ತೆಯಾಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದರು. ಇಷ್ಟಕ್ಕೂ ಸಹಚರ ಹಸನ್ ರಾಮನಗರದ ಟಿಪ್ಪುನಗರದಲ್ಲಿ ವಾಸವಿದ್ದ. ಅವನು ಬಾಂಗ್ಲಾ ಮೂಲದವನಾಗಿದ್ದು, ಮುನೀರ್ ಗೆ ಸಂಬಂಧದಲ್ಲಿ ಭಾವಮೈದುನ ಆಗಿದ್ದನಂತೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಹಸನ್ ನ ವಶಕ್ಕೆ ತೆಗೆದುಕೊಂಡಿದ್ದರು ಎಂಬ ಮಾಹಿತಿಯಿದೆ.

ರಾಮನಗರ ಕರಗ ಮಹೋತ್ಸವದಲ್ಲಿ ಅಂಗಡಿ ಹಾಕಿದ್ದ

ರಾಮನಗರ ಕರಗ ಮಹೋತ್ಸವದಲ್ಲಿ ಅಂಗಡಿ ಹಾಕಿದ್ದ

ಮುನೀರ್ ಟಿಪ್ಪುನಗರ ಬಡಾವಣೆಯ ನಿವೃತ್ತ ಶಿಕ್ಷಕ ಮುಷ್ತಾಕ್ ಎಂಬುವರಿಗೆ ಸೇರಿದ ಮನೆಯನ್ನು ತನ್ನ ಭಾವಮೈದುನ ಹಸನ್ ಗೆ ಬಾಡಿಗೆಗೆ ಕೊಡಿಸಿದ್ದ. ಈ ಮನೆಯಲ್ಲಿ ಹಸನ್, ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಗೂ ಸಹೋದರಿಯೊಂದಿಗೆ ವಾಸವಾಗಿದ್ದ. ಜುಲೈ 28ರಂದು ಹಸನ್ ತನ್ನ ಮನೆಯ ಸನಿಹದಲ್ಲಿರುವ ಇಮ್ರಾನ್ ಎಂಬುವರಿಗೆ ಸೇರಿದ ಮನೆಯನ್ನು ಸಹೋದರಿಗೆ ಬಾಡಿಗೆಗೆ ಕೊಡಿಸಿದ್ದ. ಮನೆ ಮಾಲೀಕರಿಗೆ ತನ್ನ ಭಾವ ಗಾರೆ ಕೆಲಸದವರಾಗಿದ್ದು, ಆಗಸ್ಟ್ 6ರಂದು ಬಂದು ಕರಾರು ಮಾಡಿಕೊಳ್ಳುತ್ತಾರೆಂದು ಹೇಳಿ 10 ಸಾವಿರ ಮುಂಗಡ ಹಣ ನೀಡಿದ್ದ. ಶಂಕಿತ ವ್ಯಕ್ತಿ ಹಸನ್ ವೃತ್ತಿಯಲ್ಲಿ ಆರ್ಟಿಫಿಶಿಯಲ್ ಕಿವಿಯೋಲೆ, ಬಳೆಯಂತಹ ಅಲಂಕಾರಿಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ. ರಾಮನಗರದಲ್ಲಿ ನಡೆದ ಕರಗ ಮಹೋತ್ಸವದ ವೇಳೆ ನಡೆದ ಜಾತ್ರೆಯಲ್ಲಿ ಅಂಗಡಿ ಕೂಡ ಹಾಕಿಕೊಂಡಿದ್ದ.

ಮೂರು ಮನೆಯಲ್ಲಿ ಮಹಿಳೆಯರು ನಾಪತ್ತೆ

ಮೂರು ಮನೆಯಲ್ಲಿ ಮಹಿಳೆಯರು ನಾಪತ್ತೆ

ಮುನೀರ್ ಬಂಧನದ ವಿಚಾರ ಗೊತ್ತಾಗುತ್ತಿದ್ದಂತೆಯೇ ಆತನ ಪತ್ನಿ ಶಾಜಿದ್ ಬೀಬಿ ಎಂಬಾಕೆ ಒಂದಿಷ್ಟು ಅಗತ್ಯ ವಸ್ತುಗಳನ್ನು ತುಂಬಿಕೊಂಡು ರೆಹಮಾನಿಯಾ ನಗರದಲ್ಲಿರುವ ಮನೆಯಿಂದ ಟಿಪ್ಪುನಗರ ಬಡಾವಣೆಯಲ್ಲಿರುವ ಹಸನ್ ಮನೆಗೆ ಬಂದಿದ್ದು, ಅಲ್ಲಿಂದ ಹಸನ್ ಪತ್ನಿ ಹಾಗೂ ಇಮ್ರಾನ್ ಮನೆಯಲ್ಲಿ ವಾಸವಿದ್ದ ಮಹಿಳೆಯೊಂದಿಗೆ ಸೇರಿ ಮೂವರು ನಾಪತ್ತೆಯಾಗಿದ್ದಾರೆ. ಬಳಿಕ ಮೂರು ಮನೆಗಳಿಗೂ ಬೀಗ ಹಾಕಿದ ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಇದೆಲ್ಲ ನಡೆದು ಎರಡು ತಿಂಗಳಾಗುತ್ತಾ ಬರುತ್ತಿದ್ದು, ಇದೀಗ ಅವರನ್ನು ವಿಚಾರಣೆಗೊಳಪಡಿಸಿದ ಎನ್‌ ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ದಲೈಲಾಮಾ ಅವರ ಹತ್ಯೆಗೆ ಸಂಚು ರೂಪಿಸಿದ್ದನ್ನು ಉಲ್ಲೇಖಿಸಿದೆ. ಸದ್ಯ ಮುನೀರ್ ಬಂಧನವಾಗಿದೆ. ಒಂದು ವೇಳೆ ಈತನನ್ನು ಎನ್‌ ಐಎ ತಂಡ ಬಂಧಿಸದೇ ಹೋಗಿದ್ದಿದ್ದರೆ ಕರ್ನಾಟಕದಲ್ಲಿ ಅದೆಂತಹ ಕೃತ್ಯಕ್ಕೆ ಕೈಹಾಕುತ್ತಿದ್ದನೋ ಏನೋ? ದಲೈಲಾಮಾ ಅವರು ಕರ್ನಾಟಕದ ಟಿಬೆಟ್ ನಿರಾಶ್ರಿತರ ಶಿಬಿರಕ್ಕೆ ಆಗಾಗ ಬರುವುದರಿಂದ ಆ ಸಂದರ್ಭದಲ್ಲಿ ಕೃತ್ಯ ನಡೆಸಲು ರಾಮನಗರವನ್ನು ಆಯ್ಕೆ ಮಾಡಿಕೊಂಡಿದ್ದನೋ ಏನೋ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+