ಬಿಡದಿ ತೋಟದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ಕುಮಾರಸ್ವಾಮಿ
ರಾಮನಗರ ಆಗಸ್ಟ್ 31: ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಇಂದು ಬೆಳಗ್ಗೆಯೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿದರು.
ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ ಅವರು, ನಮ್ಮ ನೆಲದ ಸಂಸ್ಕೃತಿ, ಪರಂಪರೆಯ ಅನುಸಾರ ಮಣ್ಣಿನ ಗಣಪನನ್ನೇ ಪೂಜಿಸಿದ್ದೇನೆ. ಎಲ್ಲರೂ ಪರಿಸರಕ್ಕೆ ಪೂರಕವಾದ ಪರಿಸರ ಗಣಪನನ್ನು ಪೂಜಿಸಿಬೇಕು ಎಂದು ವಿನಂತಿ ಮಾಡಿದ್ದಾರೆ.
ಅಲ್ಲದೆ, ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಗೋ ಮಾತೆಯ ಪೂಜೆಯನ್ನೂ ನೆರವೇರಿಸಿದರು. ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಶ್ರೀ ವಿನಾಯಕನ ಕರುಣೆ, ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ ಎಂದು ಆ ವಿಘ್ನ ನಿವಾರಕನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರುತ್ತಾ ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ವಿನಾಯಕ ನಮ್ಮ ನಾಡಿಗೆ ಸರ್ವ ರೀತಿಯಲ್ಲಿಯೂ ಒಳ್ಳೆಯದು ಮಾಡಲಿ. ಭಾವೈಕ್ಯತೆ, ಶ್ರದ್ಧೆಯ ಪ್ರತೀಕವಾದ ವಿನಾಯಕ ಚೌತಿಯೂ ಸರ್ವ ಜನಾಂಗದ ತೋಟವಾದ ಕರುನಾಡಿನಲ್ಲಿ ನವಚೈತನ್ಯ ಮೂಡಿಸಲಿ ಎಂದು ಗಣಪನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ.
ಇದೇ ವೇಳೆ ತೋಟದಲ್ಲಿ ಪೂಜೆಯನ್ನು ನೆರವೇರಿಸಿದ ನಂತರ ಜೆಪಿ ನಗರದ ತಮ್ಮ ನಿವಾಸಲ್ಲಿಯೂ ಮಾಜಿ ಮುಖ್ಯಮಂತ್ರಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಗಣಪನ ಪೂಜೆ ನೆರವೇರಿಸುವರು. ಬಳಿಕ ಪದ್ಮನಾಭ ನಗರದಲ್ಲಿರುವ ತಮ್ಮ ಪೂಜ್ಯ ತಂದೆಯವರು ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡು ತಂದೆ ತಾಯಿಯವರ ಆಶೀರ್ವಾದ ಪಡೆಯಲಿದ್ದಾರೆ.












Click it and Unblock the Notifications