ಕನ್ನಡಿಗರಿಗೆ ಅನ್ಯಾಯ; ಕೇಂದ್ರ ಸರ್ಕಾರದ ವಿರುದ್ಧ ಎಚ್‌ಡಿಕೆ ಆಕ್ರೋಶ

ರಾಮನಗರ, ಡಿಸೆಂಬರ್ 27; "ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಮತ್ತು ಕನ್ನಡಿಗರ ಮೇಲೆ ಹೆಚ್ಚು ದಬ್ಬಾಳಿಕೆ ನಡೆಯುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬಿಡದಿಯಲ್ಲಿ ಪುರಸಭೆ ಚುನಾವಣೆಗೆ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. "ರಾಷ್ಟೀಯ ಪರಿಕ್ಷಾ ಸಂಸ್ಥೆ ಭಾನುವಾರ ನಡೆಸಿರುವ ಯುಜಿಸಿ - ಎನ್ ಇಟಿ ಪರೀಕ್ಷೆಯ ಕನ್ನಡ ಭಾಷಾ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಿ ಇದ್ದ 100 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಹಿಂದಿಯಲ್ಲಿ ಇದ್ದರೆ, ಉಳಿದ ಹತ್ತು ಪ್ರಶ್ನೆಗಳು ಮಾತ್ರ ಕನ್ನಡಲ್ಲಿ ಇದ್ದವು. ಇದು ಅತ್ಯಂತ ಖಂಡನೀಯ" ಎಂದರು.

"ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರದ ನಿಲುವು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮನೋಭಾವನ್ನು ಮೊದಲಿನಿಂದಲೂ ವಿರೋಧಿಸಿದ್ದೇನೆ. ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸುವ ಹುನ್ನಾರ ನಡೆಯುತ್ತಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

HD Kumaraswamy

"ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ರಾಜ್ಯದ ಜನರು ಸಹ ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಬೇಕಿದೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದು ಹೆಚ್ಚುತ್ತಿದೆ" ಎಂದು ಆರೋಪಿಸಿದರು.

"ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರದ ನಿಲುವು ಖಂಡಿಸುತ್ತೇನೆ. ಕನ್ನಡ ಭಾಷೆಯನ್ನು ಅವಮಾನ ಮಾಡಬೇಡಿ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಬೇಡಿ" ಎಂದು ಕೇಂದ್ರಕ್ಕೆ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ರಾತ್ರಿ ಕರ್ಫ್ಯೂ ನಿರುಪಯುಕ್ತ; "ಕೋವಿಡ್ ರೂಪಾಂತರಿ ಓಮಿಕ್ರಾನ್ ನಿಯಂತ್ರಣಕ್ಕೆ ಸರಕಾರ ಹೇರುತ್ತಿರುವ ರಾತ್ರಿ ಕರ್ಫ್ಯೂ ನಿರುಪಯುಕ್ತ. ನೈಟ್ ಕರ್ಫ್ಯೂ ಹಾಗೂ ಶೇ 50ರಷ್ಟು ನಿರ್ಬಂಧದಿಂದ ಯಾವುದೇ ಪ್ರಯೋಜನ ಇಲ್ಲ. ಕಳೆದ 2 ವರ್ಷದಿಂದ ವ್ಯಾಪಾರಸ್ಥರು ಪೆಟ್ಟು ತಿಂದಿದ್ದಾರೆ. ಈಗಾಗಲೇ ವ್ಯಾಪಾರಸ್ಥರು ಸರಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ಇಬ್ಬಗೆಯ ನೀತಿ ಹೊಂದಿದೆ. ರಾಜಕೀಯ ಸಭೆಗೆ ಏಕೆ ನಿರ್ಬಂಧವಿಲ್ಲ. ರಾಜಕೀಯ ಸಭೆಗೆ ಎಷ್ಟು ಜನ ಬೇಕಾದರೂ ಸೇರಬಹುದಾ?" ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದರು.

ಜೆಡಿಎಸ್ ಪಕ್ಷಕ್ಕೆ 20ಕ್ಕಿಂತ ಅಧಿಕ ಸ್ಥಾನ; "ಬಿಡದಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ 20ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ" ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

"ಈ ಬಾರಿ ಚುನಾವಣೆಗೆ ಭಾರೀ ಪೈಪೋಟಿ ಇತ್ತು. ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎರಡು ದಿನಗಳ ಕಾಲ ಪ್ರಚಾರ ನಡೆಸಿದ್ದೇನೆ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಹೀಗಾಗಿ ಮತದಾರರು ಕೈ ಹಿಡಿಯುತ್ತಾರೆ. 20ಕ್ಕಿಂತ ಅಧಿಕ ಸ್ಥಾನದಲ್ಲಿ ಜೆಡಿಎಸ್​ ಗೆಲುವು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾವೇರಿ ತಾಯಿ ಮುಂದೆ ನಿಂತು ನಾಟಕ; "ಪಂಚೆ ಕಟ್ಟಿದವರು ರೈತರು ಅಲ್ಲ ಎಂದಾದ ಮೇಲೆ ಪವಿತ್ರವಾದ ಕಾವೇರಿ ತಾಯಿ ಮುಂದೆ ನಿಂತು ನಾಟಕ ಮಾಡುವವರನ್ನು ಮಣ್ಣಿನ ಮಕ್ಕಳು ಎಂದು ಕರೆಯಬೇಕೆ?" ಎಂದು ಎಚ್. ಡಿ. ಕುಮಾರಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟೀಕಿಸಿದರು.

"ನಾವೇನು ಮಣ್ಣಿನ ಮಕ್ಕಳು ಎಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡಿಲ್ಲ. ಜನರೇ ಅವರವರ ಕೆಲಸ ನೋಡಿ ಬಿರುದು ಕೊಡುತ್ತಾರೆ. ಪಂಚೆ ಹಾಕಿಕೊಂಡು ಶೋ ಮಾಡಿದವರೆಲ್ಲ ರೈತರಾಗಲ್ಲ" ಎಂದು ವಾಗ್ದಾಳಿ ನಡೆಸಿದರು.

"ನಮಗೆ ನಾಟಕ ಮಾಡಲು ಬರುವುದೂ ಇಲ್ಲ ಹಾಗೂ ಅದರ ಅಗತ್ಯ ನನಗಿಲ್ಲ. ಈ ರಾಜ್ಯಕ್ಕೆ ಗೊತ್ತಿದೆ, ಕುಮಾರಸ್ವಾಮಿ ಕೊಡುಗೆ ಏನೆಂದು. ನೀರಾವರಿ ವಿಚಾರವಾಗಿ ದೇವೇಗೌಡರ ಕೊಡುಗೆ ಏನೆಂದು ಸಹ ಗೊತ್ತಿದೆ" ಎಂದು ಕುಮಾರಸ್ವಾಮಿ ಹೇಳಿದರು.

"ಹಾಸನದಲ್ಲಿ ಅವರು ಏನ್ ಪಂಚೆ ಹಾಕಿದವರೆಲ್ಲ ರೈತರ ಮಕ್ಕಳಾ? ನಾವು ಪಂಚೆ ಹಾಕಿದ್ದೇವೆ ನಾವು ರೈತರು ಎಂದಿದ್ದಾರೆ. ಅವರು ಆ ರೀತಿ ಹೇಳಿರುವುದು ರೈತರ ಕುರಿತ ಅವರ ಭಾವನೆಗಳೇನು ಎನ್ನುವುದು ಅರ್ಥವಾಗುತ್ತದೆ" ಎಂದರು.

"ತಲಕಾವೇರಿಯಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಎಲ್ಲರನ್ನೂ ದೂರ ಕಳುಹಿಸಿ ಕಾವೇರಿ ನೀರಿಗೆ ಅಕ್ಷತೆ ಹಾಕೋದನ್ನು ಈ ರಾಜ್ಯದ ಜನ ಕಣ್ತುಂಬಿಕೊಂಡಿದ್ದಾರೆ. ಹಾಗೆಯೇ, ಮೆಟ್ಟಲಿಗೆ ನಮಸ್ಕಾರ ಮಾಡಿದ್ದನ್ನು ಕೂಡ ನೋಡಿದ್ದೇನೆ. ಅವರು ನರೇಂದ್ರ ಮೋದಿಯವರನ್ನು ಕಾಪಿ ಮಾಡಿದ್ದಾರೆ. ಇಂಥ ಆರ್ಟಿಫಿಷಿಯಲ್ ಹೋರಾಟಗಳು ನಡೆಯಲ್ಲ" ಎಂದು ತಿಳಿಸಿದರು.

"ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಹೋರಾಟ ನೋಡಿಲ್ವ ನಾವು. ಕೃಷ್ಣೆಯ ನೀರನ್ನು ಇವರು ಹೇಗೆ ಉಳಿಸಿದರು ಅನ್ನೋದನ್ನು ನೋಡಿದ್ದೇವೆ ಐದು ವರ್ಷದಲ್ಲಿ. ಈಗ ಮೇಕೆದಾಟು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆ ಮೂಲಕ ಮತಯಾತ್ರೆ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಪಾದಯಾತ್ರೆಗೆ ಕರೆಯುತ್ತಿದ್ದಾರೆ. ಶಕ್ತಿ ಇದ್ದರೆ ಹೋಗಿ ದೆಹಲಿಯಲ್ಲಿ ಉಪವಾಸ ಕುಳಿತುಕೊಳ್ಳಿ. ಕೇಂದ್ರ ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡಿ" ಎಂದು ಸಲಹೆ ನೀಡಿದರು.

"ಕಾಂಗ್ರೆಸ್ ಪಕ್ಷ ಜನರನ್ನು ಪರಿವರ್ತನೆ ಮಾಡುವ ಸಲುವಾಗಿ ಹೋರಾಟ ಮಾಡುತ್ತಿಲ್ಲ. ಇದು ಕೇವಲ ಮತಕ್ಕಾಗಿ ನಡೆಯುತ್ತಿರುವ ಪಾದಯಾತ್ರೆ ಅಷ್ಟೇ. ಜನರನ್ನು ಯಾಮರಿಸಲು ಎಲ್ಲಾ ಸಂದರ್ಭದಲ್ಲಿಯೂ ಆಗಲ್ಲ. ಅದಕ್ಕೆ ಮೂಲ ಉದ್ದೇಶ ಉತ್ತಮವಾಗಿ ಇರಬೇಕು"‌ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+