Halal row : ರಾಜ್ಯದಲ್ಲಿ ಮತ್ತೆ ಸದ್ದು ಮಾಡುತ್ತಿರುವ 'ಗಂಡಸ್ತನ'ದ ಮಾತು; ನಾಲಿಗೆ ಹರಿಬಿಟ್ಟ ಎಚ್ಡಿಕೆ
ರಾಮನಗರ, ಮಾರ್ಚ್ 31: ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹಾಗೂ ಸಂಸದ ಡಿ.ಕೆ. ಸುರೇಶ್ ನಡುವೆ ನಡೆದಿದ್ದ 'ಗಂಡಸ್ತನ'ದ ವಾಕ್ ಸಮರ ರಾಜ್ಯದಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್ ಬಿಜೆಪಿ ನಡುವಿನ ಗಂಡಸ್ತನದ ಜಟಾಪಟಿಗೆ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಸ್ವತಃ ತಾವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗಂಡಸ್ತನ ಇದ್ದರೆ ಮತೀಯ ಶಕ್ತಿಗಳನ್ನು ತಡೆಗಟ್ಟಿ ಎನ್ನುವ ಮೂಲಕ ಜಿಲ್ಲೆಯಲ್ಲಿ ಗಂಡಸ್ತನ ಹೇಳಿಕೆ ಮುನ್ನೆಲೆಗೆ ಬಂದಿದೆ.
ರಾಜ್ಯದಲ್ಲಿ ಭುಗಿಲೆದ್ದಿರುವ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿವಾದ ಹಿನ್ನಲೆಯಲ್ಲಿ ಕ್ರೋಧಗೊಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಹಿಂದೂ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
"ಹಿಂದೂ ಪರಿಷತ್, ಭಜರಂಗ ದಳದ ಕೆಲವರು ದಿನ ಬೆಳಗಾದರೆ ತಹಶೀಲ್ದಾರ ಬಳಿ ಹೋಗಿ ಅರ್ಜಿ ಕೊಡುವುದು, ಅಂಗಡಿಗಳಿಗೆ ಹೋಗಿ ಕರಪತ್ರ ಹಂಚುತ್ತಿರುವವರು ಕಿಡಿಗೇಡಿಗಳು, ಸಮಾಜಘಾತುಕರು, ಅವರಿಗೆ ರೈತರ ಬದುಕು ಗೊತ್ತಿದೆಯಾ?," ಎಂದು ಎಚ್ಡಿಕೆ ಪ್ರಶ್ನಿಸಿದರು.
"ಹಲಾಲ್ ಕಟ್ ಮಾಂಸ ತೆಗೆದುಕೊಳ್ಳಬೇಡಿ, ಜಟ್ಕಾ ಕಟ್ ಮಾಂಸ ತೆಗೆದುಕೊಳ್ಳಿ ಅಂತೀರಲ್ಲ, ನಾಳೆ ಹಬ್ಬದಲ್ಲಿ ನಮ್ಮ ರೈತರು ಕತ್ತರಿಸುವ ಮಾಂಸ ಸ್ವಚ್ಛ ಮಾಡಲು ಅದೇ ಸಮಾಜದವರೇ ಬರಬೇಕು. ಈಗ ಇವರು ಬಂದು ಹಲಾಲ್ ಕಟ್, ಜಟ್ಕಾ ಕಟ್ ಅಂತಿದ್ದಾರೆ. ರೈತರಿಂದ ಮಾವು, ದ್ರಾಕ್ಷಿ, ರೇಷ್ಮೆ ಖರೀದಿ ಮಾಡುವುದಕ್ಕೆ ಈ ಪೋಲಿಗಳು ಬರುತ್ತಾರಾ? ಅದನ್ನು ಖರೀದಿ ಮಾಡಲು ಅದೇ ಸಮಾಜ ಬೇಕು," ಎಂದು ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

"ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದವರು ಹೊಟ್ಟೆಪಾಡಿಗೆ, ದೇಶ ಹಾಳು ಮಾಡುವುದುಕ್ಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ. ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ ಚೆನ್ನಾಗಿದ್ದೀವಲ್ಲ, ಈಗ ಹಲಾಲ್ ತಿಂದರೆ ತೊಂದರೆ ಆಗುತ್ತಾ, ನಮ್ಮ ದೇವರು ಮೆಚ್ಚಲ್ವಾ? ಬೇರೆ ದೇವರಿಗೆ ಸಮರ್ಪಿಸಿರುವುದು ನನಗೆ ಬೇಡ ಎಂದು ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಹೇಳಲಿಲ್ಲವಲ್ಲ," ಎಂದರು.
"ಕೊರೊನಾ ಸಮಯದಲ್ಲಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರೂ ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ. ಆ ಸಮಯದಲ್ಲಿ ಎಲ್ಲಿದ್ದರು ವಿಶ್ವ ಹಿಂದೂ ಪರಿಷತ್, ಭಜರಂಗದಳದವರು? ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಿ," ಎಂದು ಖಾರವಾಗಿ ಎಚ್ಡಿಕೆ ಪ್ರತಿಕ್ರಿಯೆ ನೀಡಿದರು.

"ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು, ಅದರ ಅರ್ಥ ಏನು? ಸಮಾಜ ಹೊಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ಯಾವ ಸಂವಿಧಾನಕ್ಕೆ ಗೌರವಿಸುತ್ತಿದ್ದೀರಿ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ, ನನಗೆ ಓಟ್ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು ನಾನು ಮೌನವಾಗಿರಲು ಸಾಧ್ಯವಿಲ್ಲ," ಎಂದು ಆಕ್ರೋಶಗೊಂಡರು.
ರಾಜ್ಯದಲ್ಲಿ ಕೋಮು ಶಕ್ತಿಗಳು ವಿಷ ಬೀಜ ಬಿತ್ತಿ ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ವಿರುದ್ಧ ಕಾಂಗ್ರೆಸ್ನವರಿಗೆ ಮಾತನಾಡಲು ತಾಕತ್ತಿಲ್ಲ. ಹಿಂದೂಗಳು ಓಟ್ ಹಾಕುತ್ತಾರೋ, ಇಲ್ಲವೋ ಎಂಬ ಭಯ ಅವರನ್ನು ಕಾಡುತ್ತಿದೆ. ಉತ್ತರಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ ಮುಂದೆ ಬಿಜೆಪಿಯವರಿಗೆ ತಮ್ಮ ಧೋರಣೆಯೇ ಮುಳುವಾಗುತ್ತದೆ. ಅದನ್ನು ನಮ್ಮ ಕನ್ನಡ ನಾಡಿನ ಜನ ಬುದ್ದಿ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಭವಿಷ್ಯ ನುಡಿದರು.

ಜೂಜಾಟ ಯುಗಾದಿಯ ಸಂಪ್ರದಾಯ
ಯುಗಾದಿ ಹಬ್ಬದಂದು ಇಸ್ಪೀಟ್ ಆಟಕ್ಕೆ ಅವಕಾಶ ಕೊಡಿ ಎಂಬ ಹೇಳಿಕೆ ಸಮಜಾಯಿಷಿ ನೀಡಿದ ಮಾಜಿ ಸಿಎಂ ಎಚ್ಡಿಕೆ, ನಾನು ಇಸ್ಪೀಟ್ಗೆ ಪ್ರಚೋದನೆ ಕೊಡುತ್ತಿಲ್ಲ. ಮೊದಲಿನಿಂದಲೂ ನಡೆದುಬಂದಿರುವ ಸಂಪ್ರದಾಯ ಅದು, ಹಬ್ಬದ ಎರಡು ದಿನ ಅವಕಾಶ ಕೊಡಿ, ಪ್ರತಿ ದಿನದ ನಡೆಯುವ ಜೂಜಾಟದ ಚಟುವಟಿಕೆ ಅಲ್ಲ. ಪ್ರತಿನಿತ್ಯ ಆಡಿದರೆ ನೀವು ಅರೆಸ್ಟ್ ಮಾಡಿಕೊಳ್ಳಿ ಎಂದರು.
ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಎರಡು ದಿನ ಪೊಲೀಸರನ್ನು ಕಳುಹಿಸಿ ರೈತರಿಗೆ ತೊಂದರೆ ಕೊಡಬೇಡಿ, ಇಲ್ಲಿ ಸಾವಿರಾರು ರೂಪಾಯಿ ಬೆಟ್ಟಿಂಗ್ ಕಟ್ಟಲ್ಲ, 50- 100 ರೂ. ಕುಟುಂಬದ ಜತೆಗೆ ಆಡಿಕೊಳ್ಳುತ್ತಾರೆ ಅದಕ್ಕಷ್ಟೇ ಎರಡು ದಿನ ಜೂಜಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಹೇಳಿಕೆ ನೀಡಿದ್ದು, ಅದಕ್ಕೆ ಅಪಾರ್ಥ ಕಲ್ಪಿಸಬೇಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.












Click it and Unblock the Notifications