ರಾಮನಗರ: ಒಂದೇ ವೇದಿಕೆಯಲ್ಲಿ ಬದ್ಧ ವೈರಿಗಳ ಸಮಾಗಮ
ರಾಮನಗರ, ಸೆಪ್ಟೆಂಬರ್ 2: ಜಿಲ್ಲೆಯ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ನಾಡೋಜ ಡಾ. ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಮೂರು ರಾಜಕೀಯ ಪಕ್ಷಗಳ ನಾಯಕರ ಸಮಾಗಮಕ್ಕೆ ಸಾಕ್ಷಿಯಾಗಿತ್ತು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮೂವರು ಅಕ್ಕಪಕ್ಕದಲ್ಲಿ ಕುಳಿತು ವೇದಿಕೆ ಹಂಚಿಕೊಂಡರು. ಅಲ್ಲದೇ ಕಾರ್ಯಕ್ರಮವನ್ನು ಮೂವರು ನಾಯಕರು ಒಟ್ಟಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ಡಿಕೆ, "ನನ್ನ ಬಗ್ಗೆ, ದೇವೆಗೌಡರ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಗೊತ್ತಿಲ್ಲದಿದ್ದರೆ ಪ್ರಧಾನಿ ಮೋದಿಯವರನ್ನು ಕೇಳಿ ತಿಳಿದುಕೊಳ್ಳುವಂತೆ," ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು. "ದೇಶವನ್ನು ಆಳುತ್ತಿರುವ ಪಕ್ಷ ಅದರಲ್ಲೂ ಎರಡನೇ ಬಾರಿಗೆ ದೇಶವನ್ನು ಆಳುತ್ತಿದ್ದಾರೆ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು," ಆಗ್ರಹಿಸಿದರು.
"ಇನ್ನೂ ಬಿಜೆಪಿ ಪಕ್ಷದ ಮುಖಂಡರು ನನಗೆ ಬುದ್ಧಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನು ನೋಡಿಕೊಳ್ಳಲಿ, ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ತಿಳಿದುಕೊಳ್ಳಲಿ ಪ್ರಧಾನಮಂತ್ರಿ ಹತ್ತಿರ ಕೇಳಿ ತಿಳಿದುಕೊಳ್ಳಲಿ," ಎಂದು ಬಿಜೆಪಿ ಉಸ್ತುವಾರಿ ವಿರುದ್ಧ ಎಚ್ಡಿಕೆ ಹರಿಹಾಯ್ದರು.

ಬೆಲೆ ಏರಿಕೆ ಖಂಡಿಸಿದ ಎಚ್ಡಿಕೆ
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, "ತೈಲ ಬೆಲೆ ವಿಪರೀತ ಏರಿಕೆಯಾಗುತ್ತಿರುವ ಬಗ್ಗೆ ಜನರು ಅರ್ಥ ಮಾಡಿಕೊಳ್ಳಲಿ, ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳು ಬಡ ಜನರ ಮೇಲೆ ಹೊರೆ ಏರಿಕೆ ಮಾಡಿದ್ದಾರೆ," ಎಂದು ಆರೋಪಿಸಿದರು.
"ಸರ್ಕಾರಗಳಿಗೆ ಕೂಲಿ ಕಾರ್ಮಿಕ ಕೂಡ ವರ್ಷಕ್ಕೆ ಒಂದು ಲಕ್ಷ ತೆರಿಗೆ ಕಟ್ಟುತ್ತಾನೆ. ಆದರೆ ಬಿಜೆಪಿ ಸರ್ಕಾರ ನಾಡಿನ ಬಡವರಿಗೆ ನೀಡುತ್ತಿರುವ ಕೊಡುಗೆ ಇದೇನಾ?," ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ
"ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಇದೆ ಎಂಬುದೇ ಗೊತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಎಚ್ಡಿಕೆ, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಮ್ಯಾಪ್ ಇದೆಯೋ, ಕಿತ್ತಾಕಿದರೋ ಗೊತ್ತಿಲ್ಲ. ರಾಜ್ಯಕ್ಕೆ ಏನು ತೊಂದರೆ ಆಗುತ್ತಿದೆ, ಅನ್ಯಾಯವಾಗಿದೆ ಎಂಬುದುನ್ನು ಉಸ್ತುವಾರಿಗಳು ಗಮನಿಸಿ ಪರಿಹಾರ ಒದಗಿಸಬೇಕು. ಬರೀ ಪಕ್ಷ ಸಂಘಟನೆ ಮಾಡುವುದಲ್ಲ," ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.

ಸಾರ್ವಜನಿಕರ ಬದುಕಿನ ಬಗ್ಗೆ ಕಾಳಜಿ ಇಲ್ಲ
ನಂತರ ನಾಡೋಜ ಸಿದ್ದಲಿಂಗಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, "ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಾರ್ವಜನಿಕರ ಬದುಕಿನ ಬಗ್ಗೆ ಕಾಳಜಿ ಇಲ್ಲ," ಎಂದು ಆರೋಪಿಸಿದರು.
"ತೆರಿಗೆ ಕಡಿಮೆ ಮಾಡಿ ಜನರ ಮೇಲೆ ಆಗುತ್ತಿರುವ ಬೆಲೆ ಏರಿಕೆಯನ್ನು ಕಡಿಮೆ ಮಾಡುವುದು ಸರಕಾರದ ಕರ್ತವ್ಯ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ನಲ್ಲಿ ಕೂತು ಪ್ರಚಾರ ಪಡೆಯುವುದನ್ನು ಬಿಡಬೇಕು," ಎಂದು ಸಂಸದ ಡಿ.ಕೆ. ಸುರೇಶ್ ಕೇಂದ್ರ ಸರ್ಕಾರವನ್ನು ಕುಟುಕಿದರು.
"ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ 23 ಲಕ್ಷ ಕೋಟಿಯಷ್ಟು ಹೆಚ್ಚುವರಿ ತೆರಿಗೆಯನ್ನು ವಸೂಲಿ ಮಾಡಿದೆ. ಹೀಗಿದ್ದರೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಹದಿನೈದರಿಂದ ಇಪ್ಪತ್ತು ಪೈಸೆ ಬೆಲೆ ಏರಿಸಿದಾಗ ಶೋಭಾ ಕರಂದ್ಲಾಜೆ ಖಂಡಿಸಿದ್ದರು. ಈಗ ಅವರು ಏಕೆ ಸುಮ್ಮನಿದ್ದಾರೆ," ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನಿಸಿದರು.

ಏನ್ ಸಾಧನೆ ಮಾಡಿದ್ದೀವಿ ಅಂತ ಪ್ರಚಾರ
"ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಏನ್ ಸಾಧನೆ ಮಾಡಿದ್ದೀವಿ ಅಂತ ಪ್ರಚಾರ ಪಡೆಯುತ್ತಿದ್ದಾರೋ ಗೊತ್ತಿಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ನಿಯಂತ್ರಿಸಲು ವಿಫಲರಾಗಿದ್ದಾರೆ. ಹಿಂದಿನ ಸರಕಾರಗಳು ಸಬ್ಸಿಡಿಗಳನ್ನು ನೀಡುತ್ತ ಬಂದಿವೆ. ಆದರೆ ಈ ಬಿಜೆಪಿ ಸರಕಾರ ಸಬ್ಸಿಡಿ ತೆಗೆದು ಬೆಲೆ ಏರಿಕೆ ಮಾಡುತ್ತಿದ್ದಾರೆ.
ಕೇಂದ್ರ ಸರಕಾರ 4- 5 ಕಂಪನಿಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು ದೇಶವನ್ನು ಅಡವಿಡುವ ಪರಿಸ್ಥಿತಿಗೆ ಹೋಗುತ್ತಿದೆ. ಕೇವಲ ಪ್ರಚಾರಕ್ಕಾಗಿ ಜಿಡಿಪಿ ಏರಿಕೆಯಾಗಿದೆ ಎಂದು ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ," ಎಂದು ಸಂಸದ ಡಿ.ಕೆ. ಸುರೇಶ್ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
Recommended Video

ಯೋಗೇಶ್ವರ್ ಸಚಿವರಾಗುತ್ತಾರೆ ಎಂದ ಡಿ.ಕೆ. ಸುರೇಶ್
"ಮುಂದಿನ ದಿನಗಳಲ್ಲಿ ಸಿ.ಪಿ. ಯೋಗೇಶ್ವರ್ ಸಚಿವರಾಗುತ್ತಾರೆ. ಅವರಿಗೆ ಒಳ್ಳಯದಾಗಲಿ," ಎಂದು ವೇದಿಕೆಯ ಭಾಷಣದಲ್ಲಿ ಹೇಳುವ ಮೂಲಕ ಸಂಸದ ಡಿ.ಕೆ.ಸುರೇಶ್ ಎಲ್ಲರ ಹುಬ್ಬೇರುವ ಹಾಗೆ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿ, "ವೇದಿಕೆಯಲ್ಲಿ ಸ್ವಾಮೀಜಿಗಳು ಯೋಗೇಶ್ವರ್ ಸಚಿವರಾಗುತ್ತಾರೆ ಅಂತಾ ಹೇಳಿದ್ದರು. ಹಾಗಾಗಿ ನಾನು ಒಳ್ಳೆಯದಾಗಲಿ ಅಂದೆ," ಎಂದು ಸಮಜಾಯಿಸಿ ನೀಡಿದರು. "ಯೋಗೇಶ್ವರ್ ಕಂಡ್ರೆ ಭಯ ಅಲ್ವಾ, ಎಲ್ಲಿ ಏನ್ ಬಿಟ್ಟು ಬಿಡ್ತಾರೋ," ಎಂದು ತಮ್ಮ ಬದ್ಧ ವೈರಿ ಯೋಗೀಶ್ವರ್ಗೆ ನಗುತ್ತಲೇ ಸಂಸದ ಡಿ.ಕೆ. ಸುರೇಶ್ ಕುಟುಕಿದರು.












Click it and Unblock the Notifications